ವಿಟ್ಲ, ಮೇ 05 (DaijiworldNews/SM): ಕೊರೋನ ಹರಡುವಿಕೆ ಹೆಚ್ಚಾಗಿದ್ದರೂ ಜನ ಕ್ಯಾರೇ ಎನ್ನದೆ ಬೇಕಾ ಬಿಟ್ಟಿಯಾಗಿ ಸುತ್ತಾಡುತ್ತಿದ್ದಾರೆ. ಇದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ವಿಟ್ಲಪೇಟೆಗೆ ಬರುತ್ತಿರುವುದು ತಡೆಯುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ಮೆ 6ರಿಂದ ವಿಟ್ಲದ ನಾಲ್ಕು ರಸ್ತೆಯಲ್ಲಿ ವಿಟ್ಲ ಪೊಲೀಸರ ತಂಡ ಬ್ಯಾರಿಕೇಡ್ ಇಟ್ಟು ವಾಹನಗಳಲ್ಲಿ ಪೇಟೆಗೆ ಬರುವವರನ್ನು ವಿಚಾರಣೆ ನಡೆಸಲಿದೆ ಎಂದು ವಿಟ್ಲ ಠಾಣಾ ಎಸ್.ಐ ವಿನೋದ್ ರೆಡ್ಡಿ ತಿಳಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಕೊವಿಡ್-19 ನಿಯಂತ್ರಣ ಮಾಡುವ ಹಿನ್ನೆಲೆಯಲ್ಲಿ ಸರ್ಕಾರ ಲಾಕ್ ಡೌನ್ ಹೇರುವ ಪ್ರಯತ್ನ ಮಾಡಿದರೂ ಜನರು ಅಗತ್ಯ ವಸ್ತುಗಳ ಹೆಸರಿನಲ್ಲಿ ನಿತ್ಯ ಪೇಟೆಗೆ ಆಗಮಿಸುತ್ತಿದ್ದಾರೆ. ಸಾಕಷ್ಟು ಎಚ್ಚರಿಕೆಗಳನ್ನು ನೀಡಿದರೂ ಜನರು ನಿರ್ಲಕ್ಷ್ಯ ತೋರುತ್ತಿದ್ದಾರೆ. ಪಟ್ಟಣ ಪಂಚಾಯತ್ ದಂಡ ವಿಧಿಸುವ ಕಾರ್ಯ ಮಾಡಿದರೂ ಜನರು ಕ್ಯಾರ್ ಮಾಡದ ಕಾರಣದಿಂದ ಪೊಲೀಸರು ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ಪೊಲೀಸರು ವಿಟ್ಲದ ನಾಲ್ಕು ಮಾರ್ಗ ಜಂಕ್ಷನ್ ನಲ್ಲಿ ವಾಹನ ತಪಾಸಣೆಯಲ್ಲಿ ನಿರತರಾಗಿದ್ದು, ಅನಗತ್ಯ ಸಂಚರಿಸುವವರಿಗೆ ದಂಡ ವಿಧಿಸಿದ್ದರು ಮಾತ್ರವಲ್ಲದೆ ಕೆಲ ವಾಹನಗಳನ್ನು ಜಪ್ತಿ ಮಾಡಿದ್ದರು.
ಪುತ್ತೂರು ರಸ್ತೆಯ ಮೇಗಿನ ಪೇಟೆಯಲ್ಲಿ, ಕಾಸರಗೋಡು ರಸ್ತೆಯ ಸರ್ಕಾರಿ ಬಸ್ ನಿಲ್ದಾಣದ ಬಳಿ, ಮಂಗಳೂರು ರಸ್ತೆಯ ಬೊಬ್ಬೆಕೇರಿಯಲ್ಲಿ, ಸಾಲೆತ್ತೂರು ರಸ್ತೆಯ ನಾಡಕಚೇರಿ ಬಳಿಯಲ್ಲಿ ನಾಕಾ ಬಂಧಿಯನ್ನು ಪೊಲೀಸ್ ಇಲಾಖೆ ಹಾಕಲಿದೆ. ಸಮೀಪದಲ್ಲಿ ಅಗತ್ಯ ವಸ್ತುಗಳು ಸಿಗದೆ ವಿಟ್ಲದಲ್ಲಿ ಮಾತ್ರ ಸಿಗಲಿದೆ ಎಂಬ ವಸ್ತುಗಳಿಗೆ ಬಂದ ಜನರು ಆಧಾರ್ ಕಾರ್ಡ್ ತೋರಿಸಿದಲ್ಲಿ ಅವರಿಗೆ ಪೇಟೆಗೆ ಪ್ರವೇಶ ಸಿಗಲಿದೆ. ಸಮೀಪದಲ್ಲಿ ಸಾಮಾಗ್ರಿಗಳು ಇದ್ದೂ ಪೇಟೆಗೆ ಅನಗತ್ಯವಾಗಿ ಆಗಮಿಸಿದ ಜನರ ವಾಹನಗಳನ್ನು ವಶಕ್ಕೆ ಪಡೆಯುವ ಜತೆಗೆ ಕಾನೂನು ಕ್ರಮ ಜರಗಿಸಲಾಗುವುದು ಎಂದು ವಿಟ್ಲ ಠಾಣಾ ಎಸ್.ಐ. ವಿನೋದ್ ರೆಡ್ಡಿ ತಿಳಿಸಿದ್ದಾರೆ.