ಕಡಬ, ಮೇ 05 (DaijiworldNews/MB) : ಮಂಗಳವಾರ ರಾತ್ರಿ ಸುಮಾರು 11.15 ಗಂಟೆಗೆ ಕೌಕ್ರಾಡಿ ಗ್ರಾಮದ ಪುತ್ಯೆ ಎಂಬಲ್ಲಿ ಕಾರು ಚಾಲಕ ಹಾಗೂ ದ್ವಿಚಕ್ರ ವಾಹನ ಚಾಲಕರ ನಡುವೆ ವಾಗ್ವಾದ ನಡೆದಿದ್ದು ಇಬ್ಬರು ಆರೋಪ-ಪ್ರತ್ಯಾರೋಪ ದೂರು ದಾಖಲಿಸಿದ್ದಾರೆ. ಕಾರು ಚಾಲಕ ತನ್ನ ದ್ವಿಚಕ್ರ ವಾಹನಕ್ಕೆ ಗುದ್ದಿಕೊಂಡು ಹೋದ ಕಾರಣ ತಾನು ಪ್ರಶ್ನಿಸಿದ ಕಾರಣ ಕಾರು ಚಾಲಕ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿರುವುದಾಗಿ ದ್ವಿಚಕ್ರ ವಾಹನ ಚಾಲಕ ದೂರು ದಾಖಲಿಸಿದ್ದಾರೆ. ಹಾಗೆಯೇ, ದಾರಿಯಲ್ಲಿ ದ್ವಿಚಕ್ರ ವಾಹನ ನಿಲ್ಲಿಸಿ ಸಂಚಾರಕ್ಕೆ ಅಡ್ಡಿ ಮಾಡಿದ್ದನ್ನು ಪ್ರಶ್ನಿಸಿದ್ದಕ್ಕೆ ತನ್ನ ಮೇಲೆ ದ್ವಿಚಕ್ರ ವಾಹನ ಸವಾರ ಹಾಗೂ ಇತರ 4 ಜನರು ಹಲ್ಲೆ ನಡೆಸಿದ್ದಾರೆ ಎಂದು ಕಾರು ಚಾಲಕ ದೂರು ದಾಖಲಿಸಿದ್ದಾರೆ.
ದ್ವಿಚಕ್ರವಾಹನ ಸವಾರ ಕೌಕ್ರಾಡಿ ಗ್ರಾಮದ ಪಟ್ಲಡ್ಕದ ಮೊಹಮ್ಮದ್ ಶರೀಫ್ (23) ದೂರಿನಲ್ಲಿ, ನಾನು ದ್ವಿಚಕ್ರ ವಾಹನದಲ್ಲಿ ನೆಲ್ಯಾಡಿ ಕಡೆಗೆ ಬರುತ್ತಾ ಕೌಕ್ರಾಡಿ ಗ್ರಾಮದ ಪುತ್ಯೆ ಎಂಬಲ್ಲಿಗೆ 11.15 ಗಂಟೆಗೆ ತಲುಪಿದಾಗ ಕಟ್ಟೆಮಜಲು ಕಡೆಯಿಂದ ಬಿಳಿ ಬಣ್ಣದ ಎರ್ಟಿಗಾ ಕಾರು ಬರುತ್ತಿದ್ದುದನ್ನು ನೋಡಿ ನನ್ನ ದ್ವಿಚಕ್ರ ವಾಹನವನ್ನು ನಿಲ್ಲಿಸಿದೆ. ಆಗ ಎರ್ಟಿಗಾ ಕಾರಿನ ಚಾಲಕನು ದ್ವಿಚಕ್ರ ವಾಹನದ ಹಿಂಬಾಗಕ್ಕೆ ಒರೆಸಿದಂತಹ ರೀತಿಯಲ್ಲಿ ಚಲಾಯಿಸಿಕೊಂಡು ಸ್ವಲ್ಪ ಮುಂದೆ ಹೋಗಿ ಕಾರನ್ನು ನಿಲ್ಲಿಸಿ ನನ್ನ ಬಳಿಗೆ ಬಂದು ಅವಾಚ್ಯ ಪದಗಳಿಂದ ಬೈದಿದ್ದು ಕುತ್ತಿಗೆಯ ಎಡ ಭಾಗಕ್ಕೆ ಕಲ್ಲಿನಿಂದ ಹೊಡೆದು ಹಲ್ಲೆ ನಡೆಸಿರುವುದಲ್ಲದೇ ಆರೋಪಿತರಾದ ಕಿಶೋರ್ ಮತ್ತು ಇತರರು ಕೈಯಿಂದ ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ಆರೋಪಿಸಿದ್ದಾರೆ.
ಇನ್ನು ಕಾರು ಚಾಲಕ ಕೌಕ್ರಾಡಿ ಗ್ರಾಮದ ಬಾಗೇಜಾಲಿನ ನಾಗೇಶ್ (31) ನೀಡಿರುವ ದೂರಿನಲ್ಲಿ, ನನ್ನ ಎರ್ಟಿಗಾ ಕಾರಿನಲ್ಲಿ ನನ್ನ ಪತ್ನಿಯಾದ ವಿಶಾಲಾಕ್ಷಿಯ ಜೊತೆ ಕೌಕ್ರಾಡಿ ಗ್ರಾಮದ ಪುತ್ಯೆ ಎಂಬಲ್ಲಿಗೆ ತಲುಪಿದಾಗ ಆರೋಪಿಯಾದ ಮಹಮ್ಮದ್ ಶರೀಫ್ ಹಾಗೂ 4 ಜನರು ರಸ್ತೆಯಲ್ಲಿ ದ್ವಿಚಕ್ರ ವಾಹನವನ್ನು ನಿಲ್ಲಿಸಿ ಮಾತನಾಡಿಕೊಂಡಿರುವುದನ್ನು ನೋಡಿ ದಾರಿ ಬಿಡುವಂತೆ ಹೇಳಿದಾಗ ಕದಲದೆ ಇದ್ದುದರಿಂದ ಅಲ್ಲಿಯೇ ಬದಿಯಿಂದ ಕಾರನ್ನು ಚಲಾಯಿಸಿಕೊಂಡು ಹೋದೆ. ಆ ಸಂದರ್ಭದಲ್ಲಿ ಕಾರಿನ ಹಿಂದಿನಿಂದ ಶಬ್ಧ ಕೇಳಿ ಕಾರನ್ನು ನಿಲ್ಲಿಸಿ ಕಾರಿನ ಹಿಂದಕ್ಕೆ ಹೋಗಿ ಅಲ್ಲಿದ್ದ ಆರೋಪಿ ಶರೀಫ್ ಮತ್ತು ಇತರರಲ್ಲಿ ವಿಚಾರಿಸಿದಾಗ ಶರೀಫ್ ಅವಾಚ್ಯವಾಗಿ ಬೈದು ಕಾಲರನ್ನು ಹಿಡಿದೆಳೆದಿದ್ದಾನೆ. ಈ ವೇಳೆ ಬಿಡಿಸಲು ಹೋದ ನನ್ನ ಪತ್ನಿ ವಿಶಾಲಾಕ್ಷಿಯನ್ನು ಶರೀಫ್ ಮತ್ತು ಇತರರು ದೂಡಿದ್ದಾರೆ. ಅಷ್ಟೇ ಅಲ್ಲದೇ ಆರೋಪಿತರೆಲ್ಲರೂ ಕೈಯಿಂದ ಮತ್ತು ಕಾಲಿನಿಂದ ಹಲ್ಲೆ ನಡೆಸಿ ಜೀವಬೆದರಿಕೆ ಒಡ್ಡಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ಎರಡು ದೂರುಗಳು ಕಡಬ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದೆ.