ಕಾಸರಗೋಡು, ಮೇ.05 (DaijiworldNews/PY): ಕೊರೊನಾ ತಡೆಗಟ್ಟುವ ನಿಟ್ಟಿನಲ್ಲಿ ಕೇರಳದಲ್ಲಿ ಕಟ್ಟುನಿಟ್ಟಿನ ನಿರ್ಬಂಧ ವಿಧಿಸಲಾಗಿದ್ದು, ಮೇ 16ರ ತನಕ ಮುಂದುವರಿಯಲಿದೆ.
ಅಗತ್ಯ ಸೇವೆಗಳಿಗೆ ವಿನಾಯಿತಿ ನೀಡಲಾಗಿದೆ. ಕಾಸರಗೋಡು ಜಿಲ್ಲೆಯಲ್ಲಿ ಬೆರಳಣಿಕೆಯಷ್ಟೇ ಖಾಸಗಿ ಹಾಗೂ ಕೆಎಸ್ಆರ್ಟಿಸಿ ಬಸ್ಸುಗಳು ಸಂಚಾರ ನಡೆಸಿದವು. ಪ್ರಮುಖ ಪಟ್ಟಣಗಳಲ್ಲಿ ಪೊಲೀಸರ ತಪಾಸಣೆ ಚುರುಕುಗೊಳಿಸಲಾಗಿತ್ತು. ಅನಗತ್ಯವಾಗಿ ವಾಹನಗಳಲ್ಲಿ ಸಂಚರಿಸುತ್ತಿರುವವರನ್ನು ಹಿಂದಕ್ಕೆ ಕಳುಹಿಸಲಾಯಿತು.
ಗುರುತು ಚೀಟಿ ಹೊಂದಿದವರಿಗೆ ಮಾತ್ರ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು. ಆಸ್ಪತ್ರೆ ಸೇರಿದಂತೆ ವೈದ್ಯಕೀಯ ಸೇವೆಗಳಿಗೆ ವಿನಾಯಿತಿ ನೀಡಲಾಗಿತ್ತು. ಮಾರುಕಟ್ಟೆಗಳಲ್ಲಿ ಜನಜಂಗುಳಿ ಸೇರದಂತೆ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲಾಯಿತು. ಕಾಸರಗೋಡು ನಗರ, ಕುಂಬಳೆ, ಉಪ್ಪಳ, ಬದಿಯಡ್ಕ ಮೊದಲಾದ ಪೇಟೆಗಳಲ್ಲಿ ಪೊಲೀಸರ ತಪಾಸಣೆ ನಡೆಯುತ್ತಿದೆ.
ಉಪ್ಪಳದ ವಸ್ತ್ರ ಮಳಿಗೆಯೊಂದರಲ್ಲಿ ಗ್ರಾಹಕರು ಕೊರೊನಾ ಮಾನದಂಡ ಉಲ್ಲಂಘಿಸಿ ಅತ್ಯಧಿಕ ಸಂಖ್ಯೆಯಲ್ಲಿ ಸೇರಿದ್ದರಿಂದ ಮಾಲೀಕನ ವಿರುದ್ದ ಮಂಜೇಶ್ವರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಪಾರ ಗ್ರಾಹಕರು ಈ ಮಳಿಗೆಯಲ್ಲಿರುವ ಬಗ್ಗೆ ಸಾಮಾಜಿಕ ಜಾಲತಾಣಾವೊಂದರಲ್ಲಿ ಬಂದ ದೃಶ್ಯದ ಆಧಾರದಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.