ಮಂಗಳೂರು, ಮೇ 05 (DaijiworldNews/MB) : ಕುಳಾಯಿ ಶೋರ್ಸ್ ಬೀಚ್ ಹೌಸ್ನಲ್ಲಿ ಮೇ 4 ರ ಮಂಗಳವಾರ ಸಂಜೆ ವಿವಾಹದ ಆರತಕ್ಷತೆ ನಡೆಸಲಾಗಿದ್ದು ಅನುಮತಿ ಪಡೆದ್ದಕ್ಕಿಂತ ಹೆಚ್ಚು ಜನರು ಸೇರಿದ್ದ ಹಿನ್ನೆಲೆ ಮದುವೆ ಆಯೋಜಕರು ಮತ್ತು ಬೀಚ್ ಹೌಸ್ನ ಮಾಲೀಕರ ಮೇಲೆ ಪ್ರಕರಣ ದಾಖಲಾಗಿದೆ.
ಮಂಗಳೂರು ನಗರ ವ್ಯಾಪ್ತಿಯ ಸುರತ್ಕಲ್ ಪೊಲೀಸ್ ಠಾಣೆ ವ್ಯಾಪ್ತಿಯ ಕುಳಾಯಿ ಶೋರ್ಸ್ ಬೀಚ್ ಹೌಸ್ನಲ್ಲಿ ಮೇ 4 ರಂದು ಮದುವೆಯ ಆರತಕ್ಷತೆಯ ಸಂಬಂಧ ಮಹಾನಗರ ಪಾಲಿಕೆಯ ವತಿಯಿಂದ ಅನುಮತಿ ಪಡೆದುಕೊಂಡಿದ್ದರು. ಆದರೆ ಕಾರ್ಯಕ್ರಮಕ್ಕಾಗಿ ನೆರೆದಿದ್ದ ಜನರ ಸಂಖ್ಯೆ ಅನುಮತಿ ಪಡೆದ ಸಂಖ್ಯೆಗಿಂತ ಅಧಿಕವಾಗಿದೆ ಎಂದು ಸ್ಥಳೀಯ ನಾಗರಿಕರಿಂದ ದೂರುಗಳು ಬಂದ ಹಿನ್ನೆಲೆ ಮಂಗಳೂರು ಉಪವಿಭಾಗಾಧಿಕಾರಿ ಮದನ್ ಮೋಹನ್ರವರು ಸ್ಥಳಕ್ಕೆ ಮಹಾನಗರಪಾಲಿಕೆಯ ಅಧಿಕಾರಿಗಳೊಂದಿಗೆ ಭೇಟಿ ನೀಡಿದರು.
ಈ ಸಂದರ್ಭ ಅನುಮತಿಯ ನಿಬಂಧನೆಗಳನ್ನು ಉಲ್ಲಂಘನೆ ಮಾಡಿರುವುದು ಗಮನಕ್ಕೆ ಬಂದಿದ್ದು ಸ್ಥಳೀಯ ಪಾಲಿಕೆ ಅಧಿಕಾರಿಗಳು ನೀಡಿದ ದೂರಿನ ಮೇರೆಗೆ ಮದುವೆ ಆಯೋಜಕರು ಮತ್ತು ಬೀಚ್ ಹೌಸ್ ನ ಮಾಲೀಕರ ಮೇಲೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.