ಬೆಳ್ತಂಗಡಿ, ಮೇ 05 (DaijiworldNews/MB) : ಧರ್ಮಸ್ಥಳ ಸೇವಾ ಸಹಕಾರಿ ಬ್ಯಾಂಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವೀಂದ್ರನ್ ಡಿ(57) ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿ ಧರ್ಮಸ್ಥಳ ಸೇವಾ ಸಹಕಾರಿ ಬ್ಯಾಂಕಿನ ಇಬ್ಬರು ನಿರ್ದೇಶಕರ ವಿರುದ್ದ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆಗೆ ಪ್ರೇರಣೆ ಆರೋಪದಲ್ಲಿ ಪ್ರಕರಣ ದಾಖಲಾಗಿದೆ.
ರವೀಂದ್ರನ್ ಡಿ ಅವರು ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೂ ಮುನ್ನ ಬರೆದ ಪತ್ರ ಹಾಗೂ ಅವರ ಪತ್ನಿ ಉಷಾ ಎಂ.ಕೆ. ನೀಡಿದ ದೂರಿನ ಆಧಾರದಲ್ಲಿ ಇಬ್ಬರು ನಿರ್ದೇಶಕರಾದ ಜಯರಾಂ ಭಂಡಾರಿ ಹಾಗೂ ರಘುಚಂದ್ರ ವಿರುದ್ದ ಪ್ರಕರಣ ದಾಖಲಿಸಲಾಗಿದೆ. ರವೀಂದ್ರನ್ ಅವರು ಬರೆದಿರುವ ಪತ್ರದ ಪ್ರತಿ ಅವರ ಮೊಬೈಲ್ನಲ್ಲಿ ದೊರಕಿದೆ. ಅದನ್ನು ಉಲ್ಲೇಖಿಸಿ ಪತ್ನಿ ಉಷಾ ಅವರು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಇನ್ನು ಪತ್ರದಲ್ಲಿ, ಮೋಸದಿಂದ ಅಧ್ಯಕ್ಷರ ಮೇಲೆ ಒತ್ತಡ ಹೇರಿದವರನ್ನು ಕ್ಷಮಿಸಲ್ಲ. ಸಂಘಕ್ಕಾಗಿ ಇಡೀ ಜೀವನವನ್ನು ಮುಡಿಪಾಗಿಟ್ಟು ಈಗ ಕೊನೆಗಾಲದಲ್ಲಿ ಮುಟ್ಟಾಳರಿಂದ ಅವಮಾನಕ್ಕೆ ಒಳಗಾಗಲು ಬಯಸಲ್ಲ ಎಂದು ರವೀಂದ್ರನ್ ಡಿ ಬರೆದಿದ್ದಾರೆ.
ಈ ಪತ್ರದ ಹಿನ್ನೆಲೆಯಲ್ಲಿ ನಿರ್ದೇಶಕರ ಮಾನಸಿಕ ಕಿರುಕುಳದಿಂದಾಗಿ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.
ರವೀಂದ್ರನ್ ಅವರು ಸೋಮವಾರ ಬೆಳ್ಳಗ್ಗೆ 7:30ರ ವೇಳೆಗೆ ಕಛೇರಿಗೆ ಬಂದು ತಮ್ಮ ಹಾಜರಿಯನ್ನು ನಮೂದಿಸಿದ್ದು ಬಳಿಕ ಮಧ್ಯಾಹ್ನದ ವೇಳೆಗೆ ಸಂಘದ ಅಟಲ್ ಜಿ ಸಭಾಭವನದಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಅವರ ಮೃತದೇಹ ಪತ್ತೆಯಾಗಿತ್ತು.