ಉಡುಪಿ, ಮೇ 04 (DaijiworldNews/SM): ರೋಗಿಯನ್ನು ಕರೆದುಕೊಂಡು ಹೋಗುವ ನೆಪದಲ್ಲಿ ಮಂಗಳೂರಿನಿಂದ-ಮುಂಬಯಿ ಕಡೆಗೆ ಹೋಗುವ ಖಾಸಗಿ ಬಸ್ಸೊಂದು ಅಧಿಕಾರಗಳ ಕಣ್ಣು ತಪ್ಪಿಸಿ ಉಡುಪಿ ನಗರದಲ್ಲಿ ಪ್ರಯಾಣಿಕರನ್ನು ಕರೆದುಕೊಂಡು ಹೋಗಲು ಕ್ಲಾಕ್ ಟವರ್ ಹತ್ತಿರ ನಿಂತಿದ್ದು, ಮಾಹಿತಿ ತಿಳಿದ ತಕ್ಷಣ ನಗರ ಠಾಣಾ ಪೊಲೀಸರು ತಡೆದು ದೂರು ದಾಖಲಿಸಿದ್ದಾರೆ.
ಮಧ್ಯಾಹ್ನ 02:00 ಗಂಟೆಗೆ ಉಡುಪಿ ನಗರ ಸಭೆ ಪೌರಾಯುಕ್ತರು, ಸಾರ್ವಜನಿಕರು ಕೋವಿಡ್ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳುತ್ತಿರುವ ಬಗ್ಗೆ ಪರಿಶೀಲನೆ ಮಾಡಲು ಉಡುಪಿ ನಗರದಲ್ಲಿ ಸಂಚರಿಸಿಕೊಂಡಿರುವಾಗ ಉಡುಪಿ ಕ್ಲಾಕ್ ಟವರ್ ಬಳಿ ಕೆಎ-51 ಎಡಿ-5835 ಬಸ್ಸು ನಿಂತಿದ್ದು, ಸದ್ರಿ ಬಸ್ಸನ್ನು ಪರಿಶೀಲಿಸಲಾಗಿದೆ.
ಅದರಲ್ಲಿ ಒಟ್ಟು 13 ಜನ ಪ್ರಯಾಣಿಕರು ಪ್ರಯಾಣಿಸುತ್ತಿದ್ದು, ಸದ್ರಿ ಬಸ್ಸಿನ ಚಾಲಕ ಅಬ್ದುಲ್ ಬಶೀರ್ ಎಂಬವರು ಕರ್ನಾಟಕ ಸರ್ಕಾರ ವಿಧಿಸಿದ ನಿಬಂಧನೆಗಳನ್ನು ಉಲ್ಲಂಘಿಸಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ಜನರು ಪ್ರಯಾಣಿಸಲು ಅವಕಾಶ ಇಲ್ಲದಿದ್ದರೂ ಸಹ ಸದ್ರಿ ಬಸ್ಸಿನ ಚಾಲಕ ಯಾವುದೇ ಪರವಾನಿಗೆ ಇಲ್ಲದೇ ಹಾಗೂ ಯಾವುದೇ ಸುರಕ್ಷಾ ಕ್ರಮಗಳನ್ನು ಮತ್ತು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೆ ಮಂಗಳೂರಿನಿಂದ ಮುಂಬಯಿ ಕಡೆಗೆ ಜನರನ್ನು ಕುಳ್ಳಿರಿಸಿಕೊಂಡು ಕೊರೋನಾ ವೈರಸ್ ಎಂಬ ಹೆಸರಿನ ಸಾಂಕ್ರಮಿಕ ಹರಡುವುದನ್ನು ತಡೆತಟ್ಟಲು ನಿರ್ಲಕ್ಷ ವಹಿಸಿದ್ದಾರೆ ಎಂದು ತಿಳಿದುಬಂದಿದೆ.