ಕುಂದಾಪುರ, ಮೇ 04 (DaijiworldNews/MB) : ದೇವರನ್ನು ಮೆಚ್ಚಿಸಲು ಭಜನೆ ಸುಲಭ ಮಾರ್ಗ ಎಂದು ಭಕ್ತರ ನಂಬಿಕೆ. ಭಜನೆಗೆ ಅದರದ್ದೇ ಆದ ಶಕ್ತಿಯಿದೆ. ಎಂಜಿನಿಯರ್ ಮಹೇಶ್ ಕುಂದರ್ ಹಾಡಿದ ಒಂದು ಅಂತಹುದ್ದೆ ಭಜನೆ ಹಾಡಿದ ಒಂದು ದಿನದೊಳಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಮಹೇಶ್ ಹಾಡಿದ ಭಜನೆಗೆ 10 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳು ದೊರೆತಿವೆ. ಇಷ್ಟು ಪ್ರಮಾಣದ ವೀಕ್ಷಣೆಯನ್ನು ಪಡೆಯುವ ಮೂಲಕ ಮಹೇಶ್ ಕುಂದರ್ ಹಾಡಿದ ಈ ಭಜನೆ ಇತಿಹಾಸ ರಚಿಸಿದೆ.
ಬೀಜಾಡಿ ಗೋಪಾಡಿ ಶ್ರೀ ರಾಮ ಭಜನಾ ಮಂದಿರದ ಸದಸ್ಯ ಮಹೇಶ್ ಅವರು ಸುಮಧುರವಾದ ಧ್ವನಿಯನ್ನು ಹೊಂದಿದ್ದು ಪ್ರತಿ ಭಜನೆಯನ್ನು ಸ್ವತಃ ಅವರು ತಲ್ಲೀನರಾಗಿ ಹಾಡುತ್ತಾರೆ. ಆ ಭಜನೆಯಲ್ಲಿ ಭಕ್ತಿಯ ಭಾವ ಹೃದಯ ತಟ್ಟುತ್ತದೆ. ಈಗ ಮಹೇಶ್ ಹಾಡಿದ ಭಜನೆ ರಾ ಎಂದ ಮಾತ್ರದೊಳು ಭಕ್ತಿಗೀತೆಗಳ ಪ್ರಿಯರನ್ನಷ್ಟೇ ಮಾತ್ರವಲ್ಲ, ಎಲ್ಲ ಸಂಗೀತ ಪ್ರಿಯರ ಮನಸ್ಸನ್ನೂ ಹೃದಯವನ್ನೂ ಗೆದ್ದಿದೆ.
ಕರಾವಳಿ ಪ್ರದೇಶದ ಭಕ್ತಿಗೀತೆಗಳಿಗೆ ಹೆಸರುವಾಸಿಯಾದ ಬೀಜಾಡಿ ಗೋಪಾಡಿ ಶ್ರೀ ರಾಮ ಭಜನಾ ಮಂದಿರ ದ ಪ್ರತಿಭಾವಂತ ಸದಸ್ಯ ಮಹೇಶ್ ಕುಂದರ್. ಭಜನಾ ಕೇಸರಿ ಭಜನೆ ರಾಮಣ್ಣರಿಂದ ಸ್ಫೂರ್ತಿ ಪಡೆದ ಮಹೇಶ್, ಭಜನೆ ಕ್ಷೇತ್ರದ ಕಾಳಿಂಗ ನಾವುಡ ಎಂಬ ಖ್ಯಾತಿ ಪಡೆದಿರುವ ದಿನೇಶ್ ಸುವರ್ಣರ ಶಿಷ್ಯ. ಬಾಲ್ಯದಿಂದಲೇ ಮಹೇಶ್ ಭಜನೆ ಹಾಡುವಲ್ಲಿ ತೊಡಗಿದ್ದು ಈಗ ಎಂಜಿನಿಯರಿಂಗ್ ಪದವೀಧರರಾಗಿದ್ದರೂ, ಸಾಂಪ್ರದಾಯಿಕ ಕಲೆಗಳಾದ ಓಲಗ, ಕೋಲಾಟ, ಕುಣಿತ, ಭಜನೆಗಳಲ್ಲಿ ತಮ್ಮನ್ನು ತಾವು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.
ದಿ. ಅಣ್ಣಪ್ಪ ಶ್ರೀಯಾನ್ ಹಾಗೂ ಕುಸುಮಾ ದಂಪತಿಗಳ ನಾಲ್ಕನೇ ಪುತ್ರ ಮಹೇಶ್, ತಮ್ಮ ಪ್ರಾಥಮಿಕ ಶಿಕ್ಷಣವನ್ನು ಉಡುಪಿ ಉನ್ನತ ಪ್ರಾಥಮಿಕ ಶಾಲೆಯಲ್ಲಿ ಬೀಜಾಡಿ ಪಡುವಿನಲ್ಲಿ, ಕುಂದಾಪುರದ ವಿಕೆಆರ್ ಆಚಾರ್ಯ ಇಂಗ್ಲಿಷ್ ಮಧ್ಯಮ ಪ್ರೌಢ ಶಾಲೆಯಲ್ಲಿ ಪ್ರೌಢ ಶಿಕ್ಷಣವನ್ನು, ಪದವಿ ಪೂರ್ವ ಶಿಕ್ಷಣವನ್ನು ವಿಜಿಎಸ್ ಕೋಟದಲ್ಲಿ ಮುಗಿಸಿ ಬಳಿಕ ಮೊಡ್ಲಕಟ್ಟೆ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಎಂಜಿನಿಯರಿಂಗ್ ಮುಗಿಸಿದರು. ಪ್ರಸ್ತುತ ಅವರು ಸಿವಿಲ್ ಗುತ್ತಿಗೆದಾರರಾಗಿದ್ದಾರೆ.
ಭಜನಾ ಅಂತ್ಯಕ್ಷರಿಯಲ್ಲಿ ಉತ್ತಮ ಸಾಧನೆ ಮಾಡಿದ ಮಹೇಶ್, ಅಂಕಿತನಾಮಗಳ ಜೊತೆಗೆ ಭಜನೆಯ ಭಾವನಾತ್ಮಕ ಅರ್ಥದ ಬಗ್ಗೆ ಸ್ಪಷ್ಟ ಜ್ಞಾನವನ್ನು ಹೊಂದಿದ್ದಾರೆ. ಕರಾವಳಿ ಯುವಕ ಮಂಡಳಿಯ ಸಕ್ರಿಯ ಸದಸ್ಯರಾಗಿರುವ ಮಹೇಶ್, ಯುವಜನ ಮೇಳಗಳಲ್ಲಿ ಕರಾವಳಿಯ ಕೋಲಾಟ, ಹೌಂದೇರಾಯನ ಓಲಗಗಳ ಪ್ರದರ್ಶನ ನೀಡಿ ಬಹುಮಾನ ಪಡೆದಿದ್ದಾರೆ. ತಮಿಳಿನಲ್ಲಿ ಮಹೇಶ್ ಹಾಡಿದ ಪಲ್ಲಿ ಕಟ್ಟಿ ಭಜನೆಯು ಹಾಗೂ ದಾಸ ಅಣ್ಣಮಯ್ಯ ಬರೆದ ಬ್ರಹ್ಮೋಕ್ಕಟ್ಟಿ ಕೂಡಾ ಜನಪ್ರಿಯವಾಗಿವೆ.