ಕುಂದಾಪುರ, ಮೇ 4 (DaijiworldNews/MS): ಜೀವ ಮತ್ತು ಜೀವನವನ್ನು ಪಣಕ್ಕಿಟ್ಟು ದಿನಸಿ, ತರಕಾರಿ ಖರೀದಿಸುವ ನೆಪದಲ್ಲಿ ಸುಖಾಸುಮ್ಮನೆ ಓಡಾಡುತ್ತಿದ್ದರೆ ಅದರ ಪರಿಣಾಮ ಕೆಟ್ಟದ್ದಾಗಿರಲಿದ್ದು ಸೋಂಕು ನಿಯಂತ್ರಣ ಅಸಾಧ್ಯ ಎಂದು ಕುಂದಾಪುರದ ಸಹಾಯಕ ಆಯುಕ್ತರಾದ ಕೆ.ರಾಜು ತಿಳಿಸಿದ್ದಾರೆ.
ಅವರು ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿ, ಜನತೆ ಮನೆಯಿಂದ ಒಬ್ಬರು ಬಂದು ನಾಲ್ಕು ದಿನಕ್ಕಾಗುವಷ್ಟು ಆಹಾರ ಸಾಮಗ್ರಿ ತಗೆದುಕೊಂಡು ಹೋದರೆ ಕೊರೋನಾ ನಿಯಂತ್ರಣ ಸಾಧ್ಯವಿದೆ. ಕಳೆದ ಬಾರಿಗಿಂತ ಗಂಭೀರವಾಗಿದೆ. ಸಾವಿನ ಪ್ರಮಾಣವೂ ಹೆಚ್ಚಳವಾಗಿದೆ. ಹಾಗಾಗಿ ಪ್ರತೀಯೊಬ್ಬರು ಸ್ವಯಂ ಜಾಗೃತಿ ಮಾಡುವುದು ಅಗತ್ಯವಿದೆ. ಸ್ವಯಂ ಜಾಗೃತಿ ಮಾಡದಿದ್ದರೆ ಕಷ್ಟವಾದ ಪರಿಸ್ಥಿತಿ ಬರಬಹುದು. ಜೀವ ಮತ್ತು ಜೀವನವನ್ನು ಪಣಕ್ಕಿಟ್ಟು ದಿನಸಿ, ತರಕಾರಿ ಖರೀಧಿಸಲು ಸುಮ್ಮನೆ ಓಡಾಡುತ್ತಿರೆಂದರೆ ಅದರ ಪರಿಣಾಮ ಕೆಟ್ಟ ಪರಿಣಾಮ ಬೀರುತ್ತದೆ. ಸರ್ಕಾರ ಬೆಡ್ಗಳನ್ನು ಎಷ್ಟು ಬೇಕಾದರೂ ಸಿದ್ಧ ಪಡಿಸಬಹುದು. ಆದರೆ ಅಕ್ಷಿಜನ್ ಸಾಮಥ್ರ್ಯವಿದ್ದಷ್ಟೇ ವ್ಯವಸ್ಥೆತೆ ಇರುವುದು. ಹಾಗಾಗಿ ಜನ ಜಾಗೃತರಾಗಬೇಕು. ಮನೆಯಲ್ಲಿಯೇ ಜಾಗೃತರಾಗಬೇಕು. ನಮ್ಮ ಜೀವವನ್ನು ನಾವು ರಕ್ಷಣೆ ಮಾಡಿಕೊಳ್ಳಬೇಕು ಎಂದು ತಿಳಿಸಿದ್ದಾರೆ.
ಕರ್ನಾಟಕ ಸರ್ಕಾರದ ಹಿಂದಿನ ಆದೇಶದಂತೆ ಅಗತ್ಯ ವಸ್ತುಗಳ ಖರೀದಿಗೆ ಬೆಳಿಗ್ಗೆ 10 ಗಂಟೆಯ ತನಕ ಅವಕಾಶವಿತ್ತು. ನಂತರ ಮೇ.1ರಂದು ತಿದ್ದುಪಡಿ ಆದೇಶ ಮಾಡಿ ತರಕಾರಿ ಹಣ್ಣುಗಳ ತಳ್ಳುವ ಗಾಡಿಗಳಿಗೆ ಬೆಳಿಗ್ಗೆ 6ರಿಂದ ಸಂಜೆ 6 ತನಕ ಆವಕಾಶ ನೀಡಿದೆ. ದಿನಸಿ ಅಂಗಡಿಗಳು, ಎಪಿಎಂಸಿಯಲ್ಲಿ ಮಾರಾಟ ಮಾಡುವ ವಸ್ತುಗಳಿಗೆ ಮಧ್ಯಾಹ್ನ 12 ಗಂಟೆಯ ತನಕ ಅವಕಾಶ ನೀಡಲಾಗಿದೆ. ಇದನ್ನು ಹೊರತು ಪಡಿಸಿ ಹಿಂದಿನ ಮಾರ್ಗಸೂಚಿಯಂತೆ ಮುಂದುವರಿಯುತ್ತದೆ. ಹಾಲಿನ ವ್ಯಾಪಾರಕ್ಕೆ ಅವರು ಅನುಮತಿ ಪಡೆದಂತೆ ಅವಕಾಶ ನೀಡಲಾಗಿದೆ. ಆದರೆ ಹಾಲಿನ ಜೊತೆಯಲ್ಲಿ ಇತರ ವಸ್ತುಗಳು, ಬೇಕರಿ ವಸ್ತುಗಳ ಮಾರಾಟ ಮಾಡಲು ಅವಕಾಶವಿಲ್ಲ ಎಂದು ಹೇಳಿದ್ದಾರೆ.