ಮಂಗಳೂರು, ಮೇ 04 (DaijiworldNews/MB) : ಕೊರೊನಾ ಸೋಂಕಿನಿಂದಾಗಿ ಮೃತಪಡುವವರ ಸಂಖ್ಯೆ ಅಧಿಕವಾಗುತ್ತಿರುವ ನಡುವೆ ಭೀತಿಯಿಂದ ಮೃತದೇಹಗಳಿಗೆ ಅಂತ್ಯಸಂಸ್ಕಾರ ನಡೆಸಲು ಮುಂದೆ ಬರುವವರ ಸಂಖ್ಯೆ ಕಡಿಮೆಯಾಗುತ್ತಿದೆ. ರಕ್ತಸಂಬಂಧಿಗಳೇ ಮೃತರ ಅಂತ್ಯಸಂಸ್ಕಾರ ನಡೆಸದಿರುವ ಘಟನೆಗಳೂ ವರದಿಯಾಗುತ್ತಿದೆ. ಆದರೆ ಮಂಗಳೂರು ಮನಪಾ ಕಾರ್ಪೊರೇಟರೊಬ್ಬರು ಅನಾಥ ಶವಗಳ ಹಾಗೂ ಅಂತ್ಯಕ್ರಿಯೆ ನಡೆಸಲು ಯಾರೂ ಬಾರದ ಶವಗಳ ಅಂತ್ಯಕ್ರಿಯೆ ನಡೆಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಕಳೆದ ಎರಡು ವಾರಗಳಿಂದ ಮಂಗಳೂರು ಮಹಾನಗರ ಪಾಲಿಕೆಯ 26ನೇ ನೈರುತ್ಯ ವಾರ್ಡ್ ದೇರೆಬೈಲ್ ನ ಕಾರ್ಪೊರೇಟರ್ ಆಗಿರುವ ಗಣೇಶ್ ಕುಲಾಲ್ ಎಂಬವರು ಈ ಕಾರ್ಯ ನಡೆಸುತ್ತಿದ್ದು ಕಳೆದ ಎರಡು ವಾರಗಳಲ್ಲಿ ವಾರಸುದಾರರಿಲ್ಲದ 12 ಮೃತದೇಹಗಳಿಗೆ ಅಂತ್ಯಕ್ರಿಯೆ ನಡೆಸಿದ್ದಾರೆ. ಈ ಪೈಕಿ 9 ಕೊರೊನಾ ಸೋಂಕಿತರ ಮೃತದೇಹವಾಗಿದೆ.
ಇನ್ನು ಉಳಿದ ಮೂರು ಮಂದಿ ಸಾಮಾನ್ಯ ಅನಾರೋಗ್ಯದಿಂದ ಸಾವನ್ನಪ್ಪಿದವರಾಗಿದ್ದಾರೆ. ಕೇರಳ ರಾಜ್ಯದ ಹಾಗೂ ಮಡಿಕೇರಿ ಜಿಲ್ಲೆಯ ವಾರಿಸುದಾರರಿಲ್ಲದ, ಅಂತ್ಯಕ್ರಿಯೆಗೆ ಕುಟುಂಬಸ್ಥರು ಮುಂದೆ ಬಾರದ ಎರಡು ಮೃತದೇಹಗಳು ಕೂಡಾ ಇದರಲ್ಲಿದೆ. ಉಳಿದೆಲ್ಲವೂ ಮಗಳೂರು ತಾಲೂಕಿನವರದ್ದೇ ಆಗಿದೆ.
ಇನ್ನು 12ರಲ್ಲಿ ಐವರು ಮಹಿಳೆಯರಾಗಿದ್ದು, ಉಳಿದ ಏಳು ಮಂದಿ ಪುರುಷರಾಗಿದ್ದಾರೆ. ಈ ಮೃತದೇಹಗಳನ್ನು ನಂದಿಗುಡ್ಡೆ ಹಾಗೂ ಬೋಳೂರು ಚಿತಾಗಾರದಲ್ಲಿ ಅಂತ್ಯಸಂಸ್ಕಾರವನ್ನು ಕಾರ್ಪೊರೇಟರ್ ಗಣೇಶ್ ಕುಲಾಲ್ ವಿಧಿವತ್ತಾಗಿ ನೆರವೇರಿಸಿದ್ದಾರೆ.
ದ.ಕ.ಜಿಲ್ಲೆಯ ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಅವರ ವಾರ್ ರೂಂನ ಜವಾಬ್ದಾರಿಯನ್ನೂ ಹೊಂದಿರುವ ಗಣೇಶ್ ಕುಲಾಲ್ ಅವರು, ಬರೀ ಮೃತದೇಹಕ್ಕೆ ಅಂತ್ಯಸಂಸ್ಕಾರ ಮಾತ್ರವಲ್ಲದೆ, ಅಗತ್ಯವಿರುವವರಿಗೆ ಆ್ಯಂಬುಲೆನ್ಸ್ ವ್ಯವಸ್ಥೆ, ಚಿತಾಗಾರದಲ್ಲಿ ಅಂತ್ಯಸಂಸ್ಕಾರಕ್ಕೆ ಉಚಿತ ವ್ಯವಸ್ಥೆಯನ್ನು ಮಾಡಿಕೊಟ್ಟಿದ್ದಾರೆ.