ಉಡುಪಿ, ಮೇ 4 (DaijiworldNews/MS): ಜಿಲ್ಲೆಯಲ್ಲಿ ಕೊರೊನಾ ಸೋಂಕು ಪೀಡಿತರ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದಲ್ಲಿ ಹೆಚ್ಚಳ ಕಂಡುಬರುತ್ತಿದ್ದು, ಪರಿಸ್ಥಿತಿ ಕೈ ಮೀರುತ್ತಿದ್ದುಈಗಾಗಲೇ ಲಭ್ಯವಿರುವ ಐಸಿಯು ಬೆಡ್ ಗಳು ಭರ್ತಿಯಾಗಿದ್ದು ಸಾವಿನ ಪ್ರಮಾಣವೂ ಹೆಚ್ಚುತ್ತಿದೆ. ಹೀಗಾಗಿ ದಯವಿಟ್ಟು ಸೋಂಕು ಲಕ್ಷಣ ಕಂಡುಬಂದ ತಕ್ಷಣ ತಪಾಸಣೆ ನಡೇಸಿ ಚಿಕಿತ್ಸೆ ಪಡೆದುಕೊಳ್ಳಿ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ಜಿಲ್ಲೆಯ ಜನರಿಗೆ ಕಳಕಳಿಯ ಮನವಿ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಫೇಲ್ ಬುಕ್ ಲೈವ್ ಮೂಲಕ ಮಾತನಾಡಿದ ಅವರು, ಬಹಳಷ್ಟು ಮಂದಿ ಸೋಂಕಿನ ಲಕ್ಷಣ ಕಂಡು ಬಂದರೂ ಯಾವುದೇ ತಪಾಸಣೆ ಮಾಡದೇ 15 ದಿವಸ ಮನೆಯಲ್ಲೇ ಇದ್ದು ಪರಿಸ್ಥಿತಿ ತೀರಾ ಹದಗೆಟ್ಟ ಬಳಿಕ ನೇರವಾಗಿ ಐಸಿಯು ಗೆ ದಾಖಲಾಗುವವರ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ದಯವಿಟ್ಟು ರೋಗದ ಬಗ್ಗೆ ನಿರ್ಲಕ್ಷ್ಯ ಬೇಡ, ಇದೇ ರೀತಿ ಪರಿಸ್ಥಿತಿ ಮುಂದುವರಿದರೆ ಸಾಂಕ್ರಮಿಕ ರೋಗದ ನಿಯಂತ್ರಣ ಮಾಡುವುದು ಕಷ್ಟ ಆಗುತ್ತದೆ.
ಸೋಂಕಿನ ಲಕ್ಷಣ ಕಂಡು ಬಂದಲ್ಲಿ ತಕ್ಷಣ ಪರೀಕ್ಷೆಗೆ ಒಳಪಟ್ಟು , ಚಿಕಿತ್ಸೆ ಪಡೆದು ಮನೆಯಲ್ಲಿ ಐಸೋಲೇಟ್ ಆಗಿ. ಇದು ನಿಮಗೂ ಮನೆಯವರಿಗೂ ಉತ್ತಮ ಎಂದು ಮನವಿ ಮಾಡಿದ್ದಾರೆ.
ಜನರು ಎಚ್ಚತ್ತು ಕೊಳ್ಳದೆ ಕೋವಿಡ್ ಬಗ್ಗೆ ನಿರ್ಲಕ್ಷ್ಯ ತೋರುತ್ತಿದ್ದಾರೆ. ಒಬ್ಬ ಸದಸ್ಯನಿಗೆ ಸೋಂಕು ತಗುಲಿದರೆ ಮನೆ ಮಂದಿಗೆಲ್ಲರಿಗೂ ರೋಗ ಹರಡುತ್ತಿರುವುದು ಕಂಡುಬರುತ್ತಿದೆ. ಆರೋಗ್ಯ ನಿರೋಧಕ ಶಕ್ತಿ ಹೆಚ್ಚಿದ್ದವರು ವೈರಸ್ ನಿಂದ ಪಾರಾಗುತ್ತಿದ್ದಾರೆ. ಆದರೆ ಹಿರಿಯರು ಮಕ್ಕಳಿಗೆ ಆರೋಗ್ಯ ನಿರೋಧಕ ಶಕ್ತಿ ಕಡಿಮೆ ಇರುತ್ತದೆ.
ಹೀಗಾಗಿ ಮನೆಯಲ್ಲಿರುವ ಮಕ್ಕಳನ್ನು , ಹಿರಿಯರನ್ನು ರಕ್ಷಿಸುವ ಜವಾಬ್ದಾರಿ ಎಲ್ಲರ ಮೇಲಿದೆ. ಹೊರಗಡೆ ಅಥವಾ ದೂರದೂರಿನಿಂದ ಬಂದವರೊಂದಿಗೆ ಅಂತರ ಕಾಪಾಡಿ. ಇಲ್ಲವೇ ಪ್ರತ್ಯೇಕವಾಗಿ ಉಳಿಯುವಂತೆ ವ್ಯವಸ್ಥೆ ಮಾಡಿ ಎಂದು ಕೇಳಿಕೊಂಡಿದ್ದಾರೆ.
ಜಿಲ್ಲೆಯಲ್ಲಿ ಸಾವಿನ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಕೊನೆ ಕ್ಷಣದಲ್ಲಿ ಆಸ್ಪತ್ರೆಗೆ ದಾಖಲಾದರೆ ಯಾರೂ ಎನೂ ಮಾಡಲಾಗುವುದಿಲ್ಲ, ರೋಗದ ಬಗ್ಗೆ ಎಚ್ಚರಿಕೆ ಇರಲಿ, ಜಿಲ್ಲೆಯಲ್ಲಿ ಜನತೆ ಕೋವಿಡ್ ನಿಯಂತ್ರಣ ನಿಯಂತ್ರಿಸುವಲ್ಲಿ ನಮ್ಮೊಂದಿಗೆ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ.