ಕಾಸರಗೋಡು, ಎ.30 (DaijiworldNews/PY): ಹೊರ ರಾಜ್ಯಗಳಿಂದ ಕೇರಳಕ್ಕೆ ಆಗಮಿಸುವವರ ತಪಾಸಣೆ ನಡೆಸಲು ಶುಕ್ರವಾರ ನಡೆದ ಜಿಲ್ಲಾ ಕೊರೊನಾ ಸಲಹಾ ಸಮಿತಿ ಸಭೆ ತೀರ್ಮಾನಿಸಿದೆ.
"ಹೊರರಾಜ್ಯಗಳಿಂದ ಆಗಮಿಸುವವರು ಕೊರೊನಾ ಜಾಗ್ರತಾ ಪೋರ್ಟಲ್ನಲ್ಲಿ ನೋಂದಾಯಿಸಬೇಕು. ಜಿಲ್ಲೆಯ 17 ಗಡಿ ಚೆಕ್ ಪೋಸ್ಟ್ಗಳಲ್ಲಿ ತಪಾಸಣೆ ನಡೆಸಲಾಗುವುದು. ಕೊರೊನಾ ನೆಗೆಟಿವ್ ಸರ್ಟಿಫಿಕೇಟ್ ಇದೆಯೇ ಎಂಬುದುದನ್ನು ಖಾತರಿಪಡಿಸಲು ಈ ತಪಾಸಣೆ ನಡೆಸಲಾಗುವುದು. ಈಗ ಈ ಚೆಕ್ ಪೋಸ್ಟ್ಗಳಲ್ಲಿ ಪೊಲೀಸರು ಮಾತ್ರ ಇದ್ದು, ಸಿಬ್ಬಂದಿಗಳನ್ನು ನೇಮಿಸಲು ಗ್ರಾಮ ಪಂಚಾಯತ್ಗಳು ಮುಂದಾಗಬೇಕು" ಎಂದು ಜಿಲ್ಲಾಧಿಕಾರಿ ಡಾ.ಡಿ. ಸಜಿತ್ ಬಾಬು ಆದೇಶ ನೀಡಿದರು.
ರೈಲು ಮೂಲಕ ಹೊರರಾಜ್ಯಗಳಿಂದ ಆಗಮಿಸುವವರ ತಪಾಸಣೆಗೆ ಮಂಜೇಶ್ವರ, ಕಾಸರಗೋಡು, ಕಾಞ೦ಗಾಡ್ ರೈಲು ನಿಲ್ದಾಣಗಳಲ್ಲಿ ಬ್ಲಾಕ್ ಪಂಚಾಯತ್ಗಳ ಮೂಲಕ ಅಗತ್ಯ ವ್ಯವಸ್ಥೆಗೆ ಕ್ರಮ ತೆಗೆದುಕೊಳ್ಳಲಾಗಿದ್ದು, ಕೊರೊನಾ ಜಾಗ್ರತಾ ಪೋರ್ಟಲ್ನಲ್ಲಿ ನೋಂದಣಿ, ಕೊರೊನಾ ನೆಗಟಿವ್ ಸರ್ಟಿಫಿಕೇಟ್ ಅಲ್ಲದೆ ರೋಗಲಕ್ಷಣಗಳಿದ್ದಲ್ಲಿ ತಪಾಸಣೆ ನಡೆಸಲಾಗುವುದು.
ಎರಡೂ ಮಾಸ್ಕ್ ಕಡ್ಡಾಯ:
"ಸೋಂಕು ಅತೀ ವೇಗದಲ್ಲಿ ಹರಡುತ್ತಿರುವುದರಿಂದ ಜನರು ಎರಡು ಮಾಸ್ಕ್ಗಳನ್ನು ಕಡ್ಡಾಯವಾಗಿ ಧರಿಸಬೇಕು. ಎನ್ 95 ಮಾಸ್ಕ್ ಅಥವಾ ಎರಡು ಮಾಸ್ಕ್ ಧರಿಸುವುದು ಉತ್ತಮ" ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ. ವಿ.ರಾಮದಾಸ್ ತಿಳಿಸಿದ್ದಾರೆ.
"ಜಿಲ್ಲಾ ಪಂಚಾಯತ್ ಹಾಗೂ ಸ್ಥಳೀಯಾಡಳಿತ ಸಂಸ್ಥೆಗಳ ಸಹಯೋಗದೊಂದಿಗೆ ಜಿಲ್ಲೆಯಲ್ಲಿ ಆಕ್ಸಿಜನ್ ಪ್ಲಾಂಟ್ ನಿರ್ಮಾಣಕ್ಕೆ ಮುಂದಾಗಿದ್ದು, 45 ದಿನಗಳೊಳಗೆ ಪ್ಲಾಂಟ್ ನಿರ್ಮಾಣಕ್ಕೆ ಕ್ರಮ ತೆಗೆದುಕೊಳ್ಳಲಾಗಿದೆ" ಎಂದು ಜಿಲ್ಲಾಧಿಕಾರಿ ತಿಳಿಸಿದರು.
"ಕೊರೊನಾ ನಿಯಂತ್ರಣಕ್ಕೆ ಸರಕಾರದ ನಿರ್ದೇಶನಗಳನ್ನು ಜಿಲ್ಲೆಯಲ್ಲಿ ಕಟ್ಟುನಿಟ್ಟಾಗಿ ಜಾರಿಗೆ ತರಲಾಗುವುದು" ಎಂದು ತಿಳಿಸಿದರು.
ಕೃಷಿ ಫಸಲು ಮಾರುಕಟ್ಟೆಗೆ ತಲುಪಿಸಲು ಹಾಗೂ ಅಗತ್ಯ ಬೆಲೆ ಲಭಿಸಲು ಕ್ರಮ ತೆಗೆದುಕೊಳ್ಳುವಂತೆ ಜಿಲ್ಲಾ ಕ್ರಷಿ ಅಧಿಕಾರಿಗೆ ಸೂಚನೆ ನೀಡಲಾಯಿತು. ಏಪ್ರಿಲ್ ತಿಂಗಳ ಆಹಾರ ಕಿಟ್ ಅನ್ನು ಮೇ 5ರೊಳಗೆ ಪೂರ್ಣಗೊಳಿಸುವಂತೆ ಆದೇಶ ನೀಡಲಾಯಿತು.
ಜಿಲ್ಲಾಧಿಕಾರಿ ಡಾ.ಡಿ ಸಜಿತ್ ಬಾಬು ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ಬಿ ರಾಜೀವ್, ಜಿಲ್ಲಾ ಹೆಚ್ಚುವರಿ ದಂಡನಾಧಿಕಾರಿ ಅತುಲ್ ಸ್ವಾಮಿ ನಾಥ್ ಹಾಗೂ ಕೊರೊನಾ ಸಲಹಾ ಸಮಿತಿ ಸದಸ್ಯರು ಉಪಸ್ಥಿತರಿದ್ದರು.