ಮಂಗಳೂರು, ಎ.30 (DaijiworldNews/PY): ಕೊರೊನಾದ ಎರಡನೇ ಅಲೆ ಹೆಚ್ಚಾಗುತ್ತಿರುವ ಹಿನ್ನೆಲೆ ವಿಶೇಷ ರೈಲುಗಳ ಸಂಚಾರಕ್ಕೆ ಕೂಡಾ ಹಿನ್ನೆಡೆಯಾಗುತ್ತಿದೆ. ಪ್ರಯಾಣಿಕರ ಸಂಖ್ಯೆಯೂ ಕಡಿಮೆಯಾಗುತ್ತಿರುವ ಕಾರಣ ವಿಶೇಷ ರೈಲುಗಳುಗಳನ್ನು ರದ್ದುಗೊಳಿಸಲಾಗುತ್ತಿದೆ.
ಸಾಂದರ್ಭಿಕ ಚಿತ್ರ
ಮಂಗಳೂರು ಸೆಂಟ್ರಲ್ನಿಂದ ಹೊರಡುವ ಎರಡು ವಿಶೇಷ ರೈಲುಗಳನ್ನು ರದ್ದುಮಾಡಲಾಗಿದ್ದು, ಎಪ್ರಿಲ್ 29ರಿಂದ ಮಡಂಗಾವ್ ಜಂಕ್ಷನ್-ಮಂಗಳೂರು ಸೆಂಟ್ರಲ್ ರೈಲು ಕೂಡಾ ರದ್ದಾಗಿದೆ. ಕಳೆದ ಮಾರ್ಚ್ 23ರಂದು ರದ್ದಾಗಿದ್ದ ರೈಲುಗಳ ಪೈಕಿ ಹೆಚ್ಚಿನ ರೈಲುಗಳನ್ನು ನವೆಂಬರ್ನಿಂದ ವಿಶೇಷ ರೈಲುಗಳಾಗಿ ಪುನರಾರಂಭಿಸಲಾಗಿತ್ತು. ಪ್ರಸ್ತುತ ಮಂಗಳೂರು ಸೆಂಟ್ರಲ್ನಿಂದ 10ಕ್ಕೂ ಅಧಿಕ ವಿಶೇಷ ರೈಲುಗಳು ವಿವಿಧ ಕಡೆಗಳಿಗೆ ಸಂಚರಿಸುತ್ತಿವೆ.
"ಮಂಗಳೂರು ಸೆಂಟ್ರಲ್-ಲೋಕಮಾನ್ಯ ತಿಲಕ್ ಟರ್ಮಿನಲ್ ವಿಶೇಷ ರೈಲು (ನಂ. 02620/2619) ಎಪ್ರಿಲ್ 29ರಿಂದ ರದ್ದುಗೊಳ್ಳಲಿದೆ" ಎಂದು ದಕ್ಷಿಣ ರೈಲ್ವೇಯ ಪಾಲಕ್ಕಾಡ್ ವಿಭಾಗ ಹೇಳಿದೆ.
ಕೊಂಕಣ ರೈಲು ಮಾರ್ಗದಲ್ಲಿ ಎರಡು ಪ್ರಮುಖ ವಿಶೇಷ ರೈಲುಗಳಾದ ನಂ. 02414-02413 ಮಡಂಗಾವ್ ಜಂಕ್ಷನ್-ಹೆಚ್.ನಿಜಾಮುದ್ದೀನ್-ಮಡಂಗಾವ್ ಜಂಕ್ಷನ್-ರಾಜಧಾನಿ ಸೂಪರ್ಫಾಸ್ಟ್ ಹಾಗೂ ನಂ. 02120/2199 ಕರ್ಮಲಿ-ಮುಂಬಯಿ ಸಿಎಸ್ಎಂಟಿ ತೇಜಸ್ ಸೂಪರ್ಫಾಸ್ಟ್ ಸಹ ರದ್ದಾಗಿದೆ.
ನೈರುತ್ಯ ರೈಲ್ವೆಯು, ಕೆಎಸ್ಆರ್ ಬೆಂಗಳೂರು-ಚೆನ್ನೈ, ಕೊಚ್ಚುವೇಲಿ-ಬಾಣಸವಾಡಿ, ಕೆಎಸ್ಆರ್ ಬೆಂಗಳೂರು-ಕೊಯಮತ್ತೂರು, ಮೈಸೂರು-ಎಂಜಿಆರ್ ಚೆನ್ನೈ ಸೆಂಟ್ರಲ್, ಬಾಣಸವಾಡಿ-ಎರ್ನಾಕುಲಂ ವಾರಕ್ಕೆ ಎರಡು ಬಾರಿ ಸಂಚರಿಸುವ ರೈಲುಗಳ ಸಂಚಾರವನ್ನು ಎಪ್ರಿಲ್ 29ರಂದು ರದ್ದುಪಡಿಸಿದೆ.