ಮಂಗಳೂರು, ಏ. 29 (DaijiworldNews/SM): ರಾಜ್ಯದಲ್ಲಿ ಕೊರೋನಾ ಸೋಂಕು ನಿಯಂತ್ರಣಕ್ಕೆ ತರಲೆಂದು ಎಷ್ಟೇ ಹರಸಾಹಸಗಳನ್ನು ನಡೆಸಿದರೂ ಸೋಂಕು ಕಂಟ್ರೋಲ್ ಆಗುತ್ತಿಲ್ಲ. ದ.ಕ. ಜಿಲ್ಲೆ ಇದರಿಂದ ಹೊರತಾಗಿಲ್ಲ. ಗುರುವಾರಂದಂದು ಅತ್ಯಧಿಕ ಸೋಂಕಿತರ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿ ದ.ಕ. ಜಿಲ್ಲೆ ಇದ್ದು, ಸೋಂಕಿತರ ಸಂಖ್ಯೆ ಸಾವಿರದ ಗಡಿ ದಾಟಿದೆ. ಮತ್ತೊಂದೆಡೆ ಜಿಲ್ಲೆಯಲ್ಲಿ ಲಸಿಕೆಯ ಕೊರತೆ ಕೂಡ ತಲೆ ದೋರಿದ್ದು, ಜನರು ತಾವು ಆರಿಸಿ ಕಳುಹಿಸಿ ಸದ್ಯ ಮೌನಕ್ಕೆ ಶರಣಾಗಿರುವ ಜನ ಪ್ರತಿನಿಧಿಗಳತ್ತ ಬೊಟ್ಟು ಮಾಡುವಂತಾಗಿದೆ.
ಬೆಂಗಳೂರು ನಗರ, ಮೈಸೂರು, ತುಮಕೂರು ಜಿಲ್ಲೆಗಳ ಬಳಿಕ ಗುರುವಾರದಂದು ಅತೀ ಹೆಚ್ಚು ಸೋಂಕಿತರು ಪತ್ತೆಯಾಗಿರುವುದು ದ.ಕ. ಜಿಲ್ಲೆಯಲ್ಲಿ ಎಂಬುವುದು ಜಿಲ್ಲೆಯ ಜನತೆಯ ನಿದ್ದೆಗೆಡಿಸುವಂತೆ ಮಾಡಿದೆ. ಇಂದು ಒಂದೇ ದಿನ ಜಿಲ್ಲೆಯಲ್ಲಿ 1175 ಮಂದಿಯಲ್ಲಿ ಕೊರೋನಾ ಸೋಂಕು ದೃಢಪಟ್ಟಿದೆ. ಜಿಲ್ಲೆಯಲ್ಲಿ ಪತ್ತೆಯಾಗಿರುವ ಒಟ್ಟು ಸೋಂಕಿತರ ಸಂಖ್ಯೆಯೂ ಕೂಡ ನಮ್ಮಲ್ಲಿ ಹೆಚ್ಚಾಗಿದೆ. ಲಾಕ್ ಡೌನ್ ಜಾರಿಗೊಳಿಸಿದ ಬಳಿಕವೂ ಸಾವಿರಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗುತ್ತಿವೆ ಎಂದಾಗ, ಸೋಂಕು ನಿಯಂತ್ರಿಸುವುದು ಸದ್ಯ ಸವಾಲಿನ ಕೆಲಸ ಎಂಬಂತಾಗಿದೆ. ಬೆಳಿಗ್ಗಿನ ಸಮಯ ನಾಲ್ಕು ಗಂಟೆಗಳ ಕಾಲ ಅಗತ್ಯ ವಸ್ತುಗಳ ಖರೀದಿಗೆ ವಿನಾಯಿತಿ ನೀಡಿರುವುದೇ ಸೋಂಕು ಹೆಚ್ಚಳಕ್ಕೆ ಕಾರಣ ಎನ್ನಲಾಗುತ್ತಿದೆ.
ಜಿಲ್ಲೆಯಲ್ಲಿ ಎದುರಾಗಿದೆ ವ್ಯಾಕ್ಸಿನ್ ಕೊರತೆ!
ಇನ್ನು ಸೋಂಕು ವಕ್ಕರಿಸಿದರೂ ಕೂಡ ಸಾವಿನಿಂಡ ತಪ್ಪಿಸಲು ದೇಶದೆಲ್ಲೆಡೆ ವ್ಯಾಕ್ಸಿನ್ ವಿತರಣೆ ವೇಗ ಪಡೆದುಕೊಂಡಿದೆ. ಈಗಾಗಲೇ ಕೆಲವು ರಾಜ್ಯಗಳಲ್ಲಿ ತಲೆ ದೋರಿದ್ದ ಲಸಿಕೆ ಕೊರತೆಯ ಸಮಸ್ಯೆ ನಮ್ಮ ಜಿಲ್ಲೆಯಲ್ಲೂ ಕೂಡ ಕಾಡಲಾರಂಭಿಸಿದೆ. ದ.ಕ. ಜಿಲ್ಲೆಯಲ್ಲಿ ವ್ಯಾಕ್ಸಿನ್ ಸಿಗುತ್ತಿಲ್ಲ ಎಂಬುವುದು ಲಸಿಕೆ ಪಡೆಯಲು ಹೋದವರ ಆರೋಪವಾಗಿದೆ. ಇನ್ನು ಗುರುವಾರದಂದು ವೆನ್ಲಾಕ್ ಆಸ್ಪತ್ರೆಯಲ್ಲಿ ವ್ಯಾಕ್ಸಿನ್ ಪಡೆಯಲು ಸರತಿ ಸಾಲು ಕಂಡುಬಂತು. ಬೆಳಗ್ಗಿನಿಂದಲೇ ಹಲವು ಮಂದಿ ಲಸಿಕೆಗಾಗಿ ಸರತಿ ಸಾಲಿನಲ್ಲಿ ಕಾದು ನಿಂತಿದ್ದರು. ಆದರೆ, ಅವರಿಗೆ ಲಸಿಕೆ ಸಿಗಲಿಲ್ಲ. ಕೋವ್ಯಾಕ್ಸಿನ್ ಇಲ್ಲಾ ಎನ್ನುತ್ತಾರೆ. ಕೋವಿಶೀಲ್ಡ್ ಮಾತ್ರ ಇರೋದು ಎನ್ನುತ್ತಾರೆ. ನಮಗೆ ಸರಿಯಾಗಿ ಮಾಹಿತಿ ಕೊಡುವವರೇ ಇಲ್ಲ ಎಂದು ಲಸಿಕೆ ಪಡೆಯಲು ಬಂದವರು ದೈಜಿವರ್ಲ್ಡ್ ಜೊತೆ ತಮ್ಮ ಅಳಲು ತೋಡಿಕೊಂಡಿದ್ದಾರೆ.
ಮೇ ತಿಂಗಳಿನಲ್ಲೂ ಲಸಿಕೆ ಡೌಟು!
ಇನ್ನು ಮೇ 1ರಿಂದ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ವಿತರಣೆಗೆ ಈಗಾಗಲೇ ಕೇಂದ್ರ ಸರಕಾರ ಸೂಚನೆ ನೀಡಿದೆ. ಸದ್ಯ ಈಗಾಗಲೇ ಲಸಿಕೆಯ ಕೊರತೆ ತಲೆದೋರಿದೆ. ದ.ಕ. ಜಿಲ್ಲೆಯಲ್ಲೇ ಸಮರ್ಪಕವಾಗಿ ಲಸಿಕೆ ಸಿಲುತ್ತಿಲ್ಲ. ಅಲ್ಲದೆ, ಮುಂದಿನ ಮೇ ತಿಂಗಳಿನಲ್ಲೂ ಲಸಿಕೆ ಸಿಗೋದು ಡೌಟು ಎನ್ನಲಾಗುತ್ತಿದೆ. ಲಸಿಕೆ ಪಡೆದುಕೊಳ್ಳಲು ಜೂನ್ ವರೆಗೂ ಕಾಯಬೇಕಾ? ಎನ್ನುವ ಪ್ರಶ್ನೆ ಕಾದಲಾರಂಭಿಸಿದೆ. ಇದಕ್ಕೆ ಪುಷ್ಠಿ ಎಂಬಂತೆ ರಾಜ್ಯದ ಮುಖ್ಯ ಕಾರ್ಯದರ್ಶಿ ರವಿ ಕುಮಾರ್ ಅವರು ಕೂಡ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.
ಎಲ್ಲಿದ್ದಾರೆ ದ.ಕ. ಜಿಲ್ಲೆಯ ಜನಪ್ರತಿನಿಧಿಗಳು?
ಜನರಿಗೆ ಎಲ್ಲಿಯೂ ಕೂಡಾ ವ್ಯಾಕ್ಸಿನ್ ಸಿಗುತ್ತಿಲ್ಲ. ಮತ್ತೊಂಡೆಡೆ ಸೋಂಕು ಪ್ರಕರಣಗಳು ಕೂಡ ತೀವ್ರ ಹೆಚ್ಚಳವಾಗುತ್ತಿದೆ. ಇದರ ಜೊತೆಗೆ ಕೋವಿಡ್ ಪರೀಕ್ಷೆ ನಡೆಸಿದ ವರದಿಗಳು ಕೂಡ ಸೂಕ್ತ ಸಮಯದೊಳಗೆ ಲಭ್ಯವಾಗುತ್ತಿಲ್ಲ. ಇಷ್ಟೆಲ್ಲದರ ಜೊತೆಯಲ್ಲೇ ರಾಜ್ಯದಲ್ಲಿ ಲಾಕ್ ಡೌನ್ ಬಿಸಿ ತಟ್ಟಿದೆ. ಇದರಿಂದಾಗಿ ಜನರು ಗೊಂದಲಕ್ಕೀಡಾಗಿದ್ದಾರೆ. ಆದರೆ, ಜನರಿಗೆ ಧೈರ್ಯ ತುಂಬುವವರೇ ಇಲ್ಲದಂತಹ ಪರಿಸ್ಥಿತಿ ದ.ಕ. ಜಿಲ್ಲೆಯಲ್ಲಿ ತಲೆದೋರಿದೆ. ದ.ಕ. ಜಿಲ್ಲೆಯೊಂದರಲ್ಲೇ ಉಸ್ತುವಾರಿ ಸಚಿವರು ಸೇರಿದಂತೆ ಇಬ್ಬರು ಸಚಿವರುಗಳಿದ್ದಾರೆ. ಅಲ್ಲದೆ ಆರು ಮಂದಿ ಶಾಸಕರು, ಓರ್ವ ಸಂಸದರಿದ್ದಾರೆ. ಬಿಜೆಪಿ ರಾಜ್ಯಧ್ಯಕ್ಷರು ಕೂಡ ನಮ್ಮ ಜಿಲ್ಲೆಯ ಸಂಸದರೇ ಆಗಿದ್ದಾರೆ. ಇಷ್ಟೆಲ್ಲ ಇದ್ದ ಬಳಿಕ ಜಿಲ್ಲೆಯ ಜನತೆಗೆ ದೈರ್ಯ ಹೇಳುವವರು ಮಾತ್ರ ಯಾರೂ ಇಲ್ಲ. ಅಲ್ಲದೆ, ವಿರೋಧ ಪಕ್ಷದ ಮಾಜಿ ಸಚಿವರು ನಮ್ಮ ಜಿಲ್ಲೆಯಲ್ಲಿದ್ದರೂ ತುಟಿ ಬಿಚ್ಚುತ್ತಿಲ್ಲ. ಆಡಳಿತ ಪಕ್ಷ ವಿರೋಧ ಪಕ್ಷಗಳೆರಡೂ ಜಿಲ್ಲೆಯಲ್ಲಿ ನೆಲಕ್ಕಚ್ಚಿವೆ.
ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ಜನರೊಂದಿಗೆ ನೀತು ಜನರ ಸಮಸ್ಯೆಗಳನ್ನಾಲಿಸಿ, ಜನರಲ್ಲಿರುವ ಗೊಂದಲಗಳನ್ನು ನಿವಾರಿಸುವ ನಿಟ್ಟಿನಲ್ಲಿ ಆಡಳಿತ ಪಕ್ಷದ ನಾಯಕರು, ಸಂಸದರು, ಸಚಿವರು, ಶಾಸಕರು, ವಿರೋಧ ಪಕ್ಷದವರು ಜನರ ಧ್ವನಿಯಾಗಿ ಕೆಲಸ ನಿರ್ವಹಿಸಬೇಕಾಗಿದೆ.