ಉಡುಪಿ, ಎ.29 (DaijiworldNews/PY): "ಕೈಗಾರಿಕೆಗಳು ಹಾಗೂ ಕೈಗಾರಿಕ ಸಂಸ್ಥೆಗಳು (ಖಾಸಗಿ ಮತ್ತು ಸರ್ಕಾರಿ) ಕಂಟೈನ್ಮೆಂಟ್ ವಲಯದ ಹೊರಗಿನ ಪ್ರದೇಶಗಳಲ್ಲಿ ಅಂದರೆ ಎಲ್ಲಾ ಕೈಗಾರಿಕಾ ಸಂಸ್ಥೆಗಳು, ಉತ್ಪಾದನಾ ಘಟಕಗಳಲ್ಲಿ ಕೊರೊನಾ ಸಮುಚಿತ ವರ್ತನೆಯನ್ನು ಪಾಲಿಸಿಕೊಂಡು ಕಾರ್ಯನಿರ್ವಹಿಸಲು ಅನುಮತಿ ನೀಡಲಾಗಿದೆ" ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ಅವರು ಆದೇಶಿಸಿದ್ದಾರೆ.
"ಜಿಲ್ಲೆಯಲ್ಲಿ ಕೊರೊನಾ ಸೋಂಕು ಪ್ರಕರಣಗಳು ಉಲ್ಬಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಏಪ್ರಿಲ್ 27 ರ ರಾತ್ರಿ 9 ರಿಂದ ಮೇ 12 ರ ಬೆಳಗ್ಗೆ 6 ಗಂಟೆಯವರೆಗೆ ದಂಡ ಪ್ರಕ್ರಿಯೆಯಡಿಯಲ್ಲಿ ಜಿಲ್ಲೆಯಾದ್ಯಂತ ನಿಷೇಧಾಜ್ಞೆಯನ್ನು ವಿಧಿಸಲಾಗಿದ್ದು, ಸರಕಾರದ ಆದೇಶದನ್ವಯ ಬದಲಾವಣೆ ಮಾಡಿ ಆದೇಶಿಸಲು ಸೂಚಿಸಿದ ಹಿನ್ನೆಲೆ ಸಾರ್ವಜನಿಕರ ಹಿತದೃಷ್ಟಿಯಿಂದ ಅತಿ ಅವಶ್ಯವೆಂದು ಕಂಡುಬಂದ ಹಿನ್ನೆಲೆ ಕೈಗಾರಿಕೆಗಳು ಮತ್ತು ಕೈಗಾರಿಕ ಸಂಸ್ಥೆಗಳು (ಖಾಸಗಿ ಮತ್ತು ಸರ್ಕಾರಿ) ಕಂಟೈನ್ಮೆಂಟ್ ವಲಯದ ಹೊರಗಿನ ಪ್ರದೇಶಗಳಲ್ಲಿ ಅಂದರೆ ಎಲ್ಲಾ ಕೈಗಾರಿಕಾ ಸಂಸ್ಥೆಗಳು, ಉತ್ಪಾದನಾ ಘಟಕಗಳಲ್ಲಿ ಕೊರೊನಾ ಸಮುಚಿತ ವರ್ತನೆಯನ್ನು ಪಾಲಿಸಿಕೊಂಡು ಕಾರ್ಯನಿರ್ವಹಿಸಲು ಅನುಮತಿ ನೀಡಲಾಗಿದೆ" ಎಂದು ತಿಳಿಸಿದ್ದಾರೆ.
"ಉಡುಪುಗಳ ಉತ್ಪಾದನಾ ಘಟಕಗಳು ಅದರ ಶೇ. 50 ರಷ್ಟು ಉದ್ಯೋಗಿಗಳೊಂದಿಗೆ ಕೊರೊನಾ ಸಮುಚಿತ ವರ್ತನೆಯನ್ನು ಪಾಲಿಸಿಕೊಂಡು ಕಾರ್ಯನಿರ್ವಹಿಸಲು ಅನುಮತಿ ನೀಡಲಾಗಿದೆ. ಕಾರ್ಮಿಕರು ಕೈಗಾರಿಕಾ ಸ್ಥಾಪನೆಯಿಂದ ಸಂಬಂಧಪಟ್ಟವರು ನೀಡಿರುವ ಗುರುತಿನ ಚೀಟಿಯನ್ನು ತೋರಿಸಿ ಸಿಬ್ಬಂದಿಗಳ ಚಲನೆಯನ್ನು ಅನುಮತಿಸಲಾಗುವುದು" ಎಂದು ಹೇಳಿದ್ದಾರೆ.
"ಈ ಆದೇಶಗಳನ್ನು ಪಾಲಿಸದೇ ಇದ್ದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು" ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.