ಕಾಸರಗೋಡು, ಏ.29 (DaijiworldNews/MB) : ವಿಧಾನಸಭಾ ಚುನಾವಣೆಯ ಮತಎಣಿಕೆ ಮೇ ಎರಡರಂದು ನಡೆಯಲಿದ್ದು, ಎಲ್ಲಾ ಸಿದ್ದತೆಗಳು ಪೂರ್ಣಗೊಂಡಿದೆ. ಕೊರೊನಾ ಮಾನದಂಡ ಪಾಲಿಸಿ ಎಣಿಕೆ ನಡೆಯಲಿದ್ದು, ಅಂತಿಮ ಫಲಿತಾಂಶ ವಿಳಂಬಗೊಳ್ಳಲಿದೆ ಎಂದು ಜಿಲ್ಲಾಧಿಕಾರಿ ಡಾ. ಡಿ. ಸಜಿತ್ ಬಾಬು ತಿಳಿಸಿದ್ದಾರೆ.
ಗುರುವಾರ ಆನ್ಲೈನ್ ಮೂಲಕ ನಡೆಸಿದ ಸುದ್ದಿಗೋಷ್ಠಿಯಲ್ಲಿ ಅವರು ಈ ಬಗ್ಗೆ ಮಾಹಿತಿ ನೀಡಿದರು.
ಜಿಲ್ಲೆಯ ಐದು ಕೆಂದ್ರಗಳಲ್ಲಿ ಮತ ಎಣಿಕೆ ನಡೆಯಲಿದೆ. ಬೆಳಿಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭಗೊಳ್ಳಲಿದ್ದು, ಪ್ರತಿ ವಿಧಾನಸಭಾ ಕ್ಷೇತ್ರದ ಮತ ಎಣಿಕೆ ಒಂದೊಂದು ಕೇಂದ್ರಗಳಲ್ಲಿ ನಡೆಯಲಿದೆ. ಮೊದಲು ಪೂರ್ಣ ಫಲಿತಾಂಶ ಸಂಜೆ ನಾಲ್ಕು ಗಂಟೆ ವೇಳೆಗೆ ಲಭಿಸಲಿದೆ. ವಿಜಯೋತ್ಸವ ಹಾಗೂ ಮತಗಟ್ಟೆ ಸುತ್ತ ಗುಂಪುಗೂಡಲು ಅವಕಾಶ ಇಲ್ಲ. ಮತಎಣಿಕಾ ಕೇಂದ್ರಕ್ಕೆ ಬರುವ ಏಜಂಟ್ಗಳಿಗೆ ಕೊರೊನಾ ನೆಗಟಿವ್ ಸರ್ಟಿಫಿಕೇಟ್ ಅಗತ್ಯ. ಏಜಂಟ್ಗಳು ಬೆಳಿಗ್ಗೆ 7 ಗಂಟೆಗೂ ಮೊದಲು ಎಣಿಕಾ ಕೇಂದ್ರಕ್ಕೆ ತಲುಪಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಮಂಜೇಶ್ವರ ಕ್ಷೇತ್ರದ ಮತ ಎಣಿಕೆ 17 ಸುತ್ತುಗಳಲ್ಲಿ ನಡೆಯಲಿದೆ. 336 ಮತಗಟ್ಟೆಗಳಿದ್ದು, ತಲಾ 20 ಮತಗಟ್ಟೆಗಳ ಮತ ಎಣಿಕೆ ಒಂದು ಸುತ್ತಿನಲ್ಲಿ ನಡೆಯಲಿದೆ. ಕಾಸರಗೋಡು 296 ಮತಗಟ್ಟೆ 15 ಸುತ್ತು, ಉದುಮ 316 ಮತಗಟ್ಟೆ 16 ಸುತ್ತು, ಕಾಞಂಗಾಡ್ 336 ಮತಗಟ್ಟೆ 17 ಸುತ್ತು, ತೃಕ್ಕರಿಪುರ 307 ಮತಗಟ್ಟೆಗಳಿದ್ದು 16 ಸುತ್ತುಗಳಲ್ಲಿ ಮತ ಎಣಿಕೆ ನಡೆಯಲಿದೆ.
ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಎಣಿಕೆ ಕುಂಬಳೆ ಸರಕಾರಿ ಹಯರ್ ಸೆಕಂಡರಿ ಶಾಲೆಯಲ್ಲಿ, ಕಾಸರಗೋಡು ಕ್ಷೇತ್ರದ ಎಣಿಕೆ ಕಾಸರಗೋಡು ಸರಕಾರಿ ಕಾಲೇಜಿನಲ್ಲಿ, ಉದುಮ ಕ್ಷೇತ್ರದ ಮತ ಎಣಿಕೆ ಪೆರಿಯ ಪಾಲಿಟೆಕ್ನಿಕ್ ಕಾಲೇಜಿನಲ್ಲಿ, ಕಾಞಂಗಾಡ್ ಕ್ಷೇತ್ರದ ಮತ ಎಣಿಕೆ ಪಡನ್ನಕಾಡ್ ನೆಹರೂ ಕಾಲೇಜಿನಲ್ಲಿ, ತೃಕ್ಕರಿಪುರ ಕ್ಷೇತ್ರದ ಎಣಿಕೆ ತೃಕ್ಕರಿಪುರ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ನಡೆಯಲಿದೆ.
ಮೊದಲು ಅಂಚೆ ಮತದಾನದ ಎಣಿಕೆ ನಡೆಯಲಿದೆ. 8. 30 ರಿಂದ ಮತಯಂತ್ರಗಳ ಎಣಿಕೆ ಆರಂಭಗೊಳ್ಳಲಿದೆ. ಮಂಜೇಶ್ವರ ಮತ್ತು ಕಾಸರಗೋಡಿನಲ್ಲಿ ತಲಾ 2,500, ಉದುಮ ಮತ್ತು ಕಾಞಂಗಾಡ್ನಲ್ಲಿ ತಲಾ 4 ಸಾವಿರ ಹಾಗೂ ತೃಕ್ಕರಿಪುರದಲ್ಲಿ 7 ಸಾವಿರದಷ್ಟು ಅಂಚೆ ಮತಗಳಿವೆ. 500 ಅಂಚೆ ಮತಗಳಿಗೆ ಒಂದು ಟೇಬಲ್ನಂತೆ ಎಣಿಕೆಗೆ ವ್ಯವಸ್ಥೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಮೇ ಎರಡರಂದು ಬೆಳಿಗ್ಗೆ 7. 59ರ ತನಕ ಅಂಚೆ ಮೂಲಕ ಲಭಿಸುವ ಮತಪತ್ರಗಳನ್ನು ಎಣಿಕೆ ಮಾಡಲಾಗುವುದು. ಈ ಬಗ್ಗೆ ಅಂಚೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಮತ ಎಣಿಕೆ ದಿನ ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. ಅಗತ್ಯ ಪೊಲೀಸ್ ಬಂದೋ ಬಸ್ತ್ ಏರ್ಪಡಿಸಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು.
ಮತ ಎಣಿಕಾ ಕೇಂದ್ರಗಳಿಗೆ ಪ್ರವೇಶಿಸಲು ಕೊರೊನಾ ನೆಗಟಿವ್ ಸರ್ಟಿಫಿಕೇಟ್ ಅಥವಾ ಎರಡು ಡೋಸ್ ವ್ಯಾಕ್ಸಿನೇಷನ್ ಪಡೆದ ಸರ್ಟಿಫಿಕೇಟ್ ಕಡ್ಡಾಯವಾಗಿ ಹೊಂದಿರಬೇಕು ಎಂದು ಜಿಲ್ಲಾಧಿಕಾರಿ ವಿವರಿಸಿದರು.