ಕುಂದಾಪುರ, ಏ 29(DaijiworldNews/MS): ತಾಲೂಕು ಸರ್ಕಾರಿ ಆಸ್ಪತ್ರೆಯನ್ನು ಸಂಪೂರ್ಣವಾಗಿ ಕೋವಿಡ್-19 ರೋಗಿಗಳಿಗೆ ಮಾತ್ರ ಮೀಸಲಿಟ್ಟು, ಏಕಾಏಕಿಯಾಗಿ ಆಸ್ಪತ್ರೆಯ ಹೊರರೋಗಿ ಮತ್ತು ಒಳರೋಗಿ ವಿಭಾಗವನ್ನು ಉಡುಪಿ ಜಿಲ್ಲಾ ಆಸ್ಪತ್ರೆಗೆ ಸ್ಥಳಾಂತರಿಸಿರುವುದು ಖಂಡನೀಯ ಹಾಗೂ ಜನವಿರೋಧಿ ಕ್ರಮವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಕೆ.ಪ್ರತಾಪಚಂದ್ರ ಶೆಟ್ಟಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಕುಂದಾಪುರ ಸರ್ಕಾರಿ ಆಸ್ಪತ್ರೆಯ ಹೊಸ ಕಟ್ಟಡವನ್ನು ಕೋವಿಡ್-19 ರೋಗಿಗಳಿಗೆ ಮಾತ್ರ ಮೀಸಲಿರಿಸಿ, ಆಸ್ಪತ್ರೆಯ ಹೊರರೋಗಿ ಹಾಗೂ ಒಳರೋಗಿ ವಿಭಾಗಗಳನ್ನು ಆಸ್ಪತ್ರೆಯ ಹಳೆ ಬ್ಲಾಕ್ ಕಟ್ಟಡದಲ್ಲಿಯೇ ಮುಂದುವರಿಸಿ, ಸಾಮಾನ್ಯ ರೋಗಿಗಳ ಚಿಕಿತ್ಸೆಗಾಗಿ ವೈದ್ಯರು ಹಾಗೂ ವೈದ್ಯಕೀಯ ಸಿಬಂದಿಗಳನ್ನು ನಿಯೋಜಿಸಲು ಅಗತ್ಯ ಕ್ರಮವಿಸುವಂತೆ ಮನವಿ ಸಲ್ಲಿಸಲಾಗಿದ್ದರೂ ಅದನ್ನು ಪರಿಗಣಿಸದೇ ಏಕಾಏಕಿ ಸ್ಥಳಾಂತರ ಮಾಡಲಾಗಿದೆ ಎಂದು ಅವರು ಖಂಡನೆ ವ್ಯಕ್ತಪಡಿಸಿದ್ದಾರೆ.
ಕುಂದಾಪುರ ಪುರಸಭೆ ವ್ಯಾಪ್ತಿಯಲ್ಲಿ 30444 ಜನಸಂಖ್ಯೆ ಇದ್ದು, ಕುಂದಾಪುರ ತಾಲೂಕಿನ ಇತರೇ ಪ್ರದೇಶಗಳ 223296 ಜನಸಂಖ್ಯೆಯನ್ನು ಹೊಂದಿದೆ. ಪುರಸಭೆ ವ್ಯಾಪ್ತಿ ಹಾಗೂ ತಾಲೂಕಿನ ಗ್ರಾಮಗಳ ಜನ ಚಿಕಿತ್ಸೆಗಾಗಿ ಕುಂದಾಪುರ ಸರ್ಕಾರಿ ಆಸ್ಪತ್ರೆಯನ್ನು ಆಶ್ರಯಿಸುತ್ತಾರೆ. ಆದರೆ ಕೋವಿಡ್ ನೆಪ ನೀಡಿ ಸಾಮಾನ್ಯ ರೋಗಗಳಿಗೆ ದೂರದ ಜಿಲ್ಲಾಸ್ಪತ್ರೆಗಳಿಗೆ ಹೋಗುವ ಅನಿವಾರ್ಯತೆ ಸೃಷ್ಟಿಸಿರುವುದು, ಆರ್ಥಿಕವಾಗಿ ಹಿಂದುಳಿದ ಬಡರೋಗಿಗಳು ತಮ್ಮ ಚಿಕಿತ್ಸೆಗಾಗಿ ಅನಿವಾರ್ಯವಾಗಿ ಸ್ಥಳೀಯ ಖಾಸಗಿ ಆಸ್ಪತ್ರೆಯನ್ನೇ ಅವಲಂಬಿಸುವಂತೆ ಮಾಡುವ ಹುನ್ನಾರವೆಂಬಂತೆ ಮೇಲ್ನೋಟಕ್ಕೆ ಕಂಡು ಬರುತ್ತಿದೆ.
ಕುಂದಾಪುರ ತಾಲೂಕು ಹೊರತುಪಡಿಸಿ, ಉಡುಪಿ, ಕಾರ್ಕಳ ತಾಲೂಕು ಆಸ್ಪತ್ರೆಗಳಲ್ಲಿ ಸಾಮಾನ್ಯ ರೋಗಿಗಳು ಹಾಗೂ ಕೋವಿಡ್-19 ರೋಗಿಗಳಿಗೆ ಸಮಾನ ಅವಕಾಶ ನೀಡಿ ಪ್ರತ್ಯೇಕವಾಗಿ ಅಗತ್ಯ ನುರಿತ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಗಳ ನಿಯೋಜಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ವಿಭಾಗ ಮಟ್ಟದ ಆಸ್ಪತ್ರೆಯಾಗಿರುವ ಕುಂದಾಪುರದಲ್ಲಿ ಮಾತ್ರ ಇದಕ್ಕೆ ವ್ಯತಿರಿಕ್ತವಾಗಿ ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ, ಅದೇ ಆಸ್ಪತ್ರೆಯ ಹೊಸ ಕಟ್ಟಡವು 250ರಿಂದ 300 ಹಾಸಿಗೆಗಳನ್ನು ಹೊಂದಿ ಕೋವಿಡ್ ರೋಗಿಗಳಿಗೆ ಸೂಕ್ತ ವ್ಯವಸ್ಥೆ ಸಾಮಥ್ರ್ಯ ಹೊಂದಿದ್ದರೂ ಕೂಡಾ ದುರುದ್ದೇಶಪೂರ್ವಕವಾಗಿ ಒಳರೋಗಿ ಮತ್ತು ಹೊರರೋಗಿ ವಿಭಾಗವನ್ನೇ ಉಡುಪಿಗೆ ಸ್ಥಳಾಂತರಿಸಲಾಗಿದೆ. ಸರ್ಕಾರಿ ಆಸ್ಪತ್ರೆಯ ಹೊರಗೆ ಪ್ರತ್ಯೇಕವಾಗಿ ಕೋವಿಡ್ ಆಸ್ಪತ್ರೆಗಳನ್ನು ವ್ಯವಸ್ಥೆಗೊಳಿಸಿದ ನಿದರ್ಶನಗಳಿವೆಯೇ ಹೊರತು ಕೋವಿಡ್ ಕೇಂದ್ರಕ್ಕಾಗಿ ಇರುವ ಸರ್ಕಾರಿ ಆಸ್ಪತ್ರೆಯನ್ನೇ ಹೊರಗಿಟ್ಟಿರುವುದು ಎಲ್ಲಿಯೂ ಕಂಡು ಬರುವುದಿಲ್ಲ. ಇಂತಹ ಸ್ವೇಚ್ಚಾಚಾರದ, ಭ್ರಷ್ಟಾಚಾರಕ್ಕೆ ಆಸ್ಪದ ನೀಡುವ ಕ್ರಮವನ್ನು ತೀವ್ರವಾಗಿ ಖಂಡಿಸುವುದಾಗಿ ಅವರು ತಿಳಿಸಿದ್ದಾರೆ.
ಆದ್ದರಿಂದ ಜಿಲ್ಲಾಧಿಕಾರಿಗಳು ತುರ್ತಾಗಿ ಗಮಹರಿಸಿ, ಸರ್ಕಾರಿ ಆಸ್ಪತ್ರೆಯಿರುವುದು ಜನರ ಸೇವೆಗಾಗಿಯೇ ಹೊರತು ಖಾಸಗೀ ಆಸ್ಪತ್ರೆಗಳ ಅನುಕೂಲಕ್ಕಾಗಿ ಅಲ್ಲ ಎನ್ನುವುದನ್ನು ಗಮನದಲ್ಲಿರಿಸಿಕೊಂಡು, ಈ ಸ್ವೇಚ್ಚಾಚಾರದ, ನಿಯಮಬಾಹಿರ, ಜನವಿರೋಧಿ ಕ್ರಮವನ್ನು ತುರ್ತಾಗಿ ಸರಿಪಡಿಸುವುದರೊಂದಿಗೆ , ಕುಂದಾಪುರ ಸರ್ಕಾರಿ ಆಸ್ಪತ್ರೆಯ ಹೊಸಕಟ್ಟಡವನ್ನು ಕೋವಿಡ್-19 ರೋಗಿಗಳಿಗೆ ಮಾತ್ರ ಮೀಸಲಿರಿಸಿ, ಆಸ್ಪತ್ರೆಯ ಹೊರರೋಗಿ ಮತ್ತು ಒಳರೋಗಿ ವಿಭಾಗಗಳನ್ನು ಆಸ್ಪತ್ರೆಯ ಹಳೆ ಬ್ಲಾಕ್ ಕಟ್ಟಡದಲ್ಲಿಯೇ ಹಿಂದಿನ ವರ್ಷಗಳಂತೆಯೇ ಮುಂದುವರಿಸಿ, ಸಾಮಾನ್ಯ ರೋಗಿಗಳ ಚಿಕಿತ್ಸೆಗಾಗಿ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಗಳನ್ನು ನಿಯೋಜಿಸಲು ಅಗತ್ಯ ಕ್ರಮವಹಿಸುವಂತೆ ಮನವಿಯಲ್ಲಿ ಉಲ್ಲೇಖಿಸಿದ್ದಾರೆ.