ಕಡಬ, ಎ.29 (DaijiworldNews/PY): ಮಾಸ್ಕ್ ಧರಿಸಿಲ್ಲವೆಂದು ಕೂಲಿಕಾರ್ಮಿಕನೋರ್ವನಿಗೆ ಕೊರೊನಾ ವಾರಿಯರ್ ಅಧಿಕಾರಿಯೋರ್ವರು ದಂಡ ವಿಧಿಸಿ ಪೇಚಿಗೆ ಸಿಲುಕಿದ ಘಟನೆ ನಡೆದಿದೆ.
ಕೂಲಿ ಕೆಲಸಕ್ಕೆಂದು ಹೋಗಿ ವಾಪಾಸ್ಸಾಗುತ್ತಿದ್ದ ದಂಪತಿ ಕಡಬ ಬಸ್ ನಿಲ್ದಾಣದಲ್ಲಿ ನಿಂತಿದ್ದ ಸಂದರ್ಭ ಮಾಸ್ಕ್ ಧರಿಸಿರಲಿಲ್ಲ. ಇದನ್ನು ನೋಡಿದ ಕಡಬ ಪಟ್ಟಣ ಪಂಚಾಯತ್ನ ಕೊರೊನಾ ವಾರಿಯರ್ ಅಧಿಕಾರಿ 100 ರೂ. ದಂಡ ವಿಧಿಸಿದ್ದು, ಜಿಲ್ಲಾಡಳಿತದ ರಶೀದಿಯನ್ನು ನೀಡಿದ್ದಾರೆ. ಈ ಸಂದರ್ಭ ಕೂಲಿ ಕಾರ್ಮಿಕ ತನ್ನ ಹಣವಿಲ್ಲ ಎಂದು ಬೇಡಿಕೊಂಡಿದ್ದಾರೆ. ಕೊನೆಗೆ ತನ್ನ ಬಳಿ ಇದ್ದ 10 ರೂ. ಅನ್ನು ಅಧಿಕಾರಿಗೆ ನೀಡಿದ್ದಾರೆ. ಆದರೆ, 100 ರೂ. ರಶೀದಿಯನ್ನು ನೀಡಿದ್ದ ಅಧಿಕಾರಿಗೆ ಬೇರೆ ದಾರಿ ಕಾಣದೆ ತನ್ನ ಕೈಯಿಂದ 90 ರೂ. ಅನ್ನು ಸೇರಿಸಿ ಸರ್ಕಾರಕ್ಕೆ ಪಾವತಿಸಿದ್ದಾರೆ.
ಮಾಸ್ಕ್ ಧರಿಸದ ಕಾರಣ ನಾವು ದಂಡ ವಿಧಿಸಲೇಬೇಕಾಗುತ್ತದೆ. ಆದರೆ, ಸಾರ್ವಜನಿಕರೊಂದಿಗೆ ಹಣ ಇಲ್ಲ ಎನ್ನುವ ವಿಚಾರವು ನಮ್ಮ ಗಮನಕ್ಕೆ ಬರುವುದಿಲ್ಲ. ಹಣ ನೀಡಿದ ಬಳಿಕ ರಶೀದಿ ನೀಡಿದರೆ ತನ್ನ ಬಳಿ ಹಣ ಇರುವ ಬಗ್ಗೆ ಹೇಳುವುದಿಲ್ಲ. ಇನ್ನು ದಂಡ ಬರೆದು ರಶೀದಿ ನೀಡಿದರೆ, ಈ ರೀತಿಯಾದ ಸ್ಥಿತಿ ಉಂಟಾಗುತ್ತದೆ ಎಂದು ಅಧಿಕಾರಿ ತಿಳಿಸಿದ್ದಾರೆ.