ಮಂಗಳೂರು, ಏ.29 (DaijiworldNews/MB) : ಕರ್ನಾಟಕದಲ್ಲಿ ಲಾಕ್ಡೌನ್ ಕಾರಣದಿಂದಾಗಿ ಆತಂಕಕ್ಕೆ ಒಳಗಾದ ಇತರ ರಾಜ್ಯಗಳ ವಲಸೆ ಕಾರ್ಮಿಕರು ತಮ್ಮ ಸ್ಥಳೀಯ ಸ್ಥಳಗಳಿಗೆ ಮರಳುತ್ತಿದ್ದಾರೆ. ತಮ್ಮ ರಾಜ್ಯಗಳಿಗೆ ತೆರಳಲು ರೈಲು ಸಿಗಬಹುದು ಎಂಬ ನಿರೀಕ್ಷೆಯಲ್ಲಿ, ರೈಲ್ವೆ ನಿಲ್ದಾಣಗಳಲ್ಲಿ ಉಳಿದಿದ್ದಾರೆ.
ರಾಜ್ಯದಲ್ಲಿ 14 ದಿನಗಳ ಕಾಲ ಸರ್ಕಾರ ಲಾಕ್ಡೌನ್ ಘೋಷಣೆ ಮಾಡಿದ್ದರೂ, ಅದರ ವಿಸ್ತರಣೆಯ ಸಾಧ್ಯತೆಗಳ ಬಗ್ಗೆ ಕಾರ್ಮಿಕರು ಆತಂಕದಲ್ಲಿದ್ದಾರೆ. ಸೋಮವಾರದಿಂದಲೇ ಕಾರ್ಮಿಕರು ತಮ್ಮ ಗ್ರಾಮಗಳಿಗೆ ಮರಳಲು ಪ್ರಾರಂಭಿಸಿದ್ದು ಆ ಪೈಕಿ ಹೆಚ್ಚಿನವರು ಕರ್ನಾಟಕದ ಇತರ ಜಿಲ್ಲೆಗಳಿಗೆ ಸೇರಿದವರಾಗಿದ್ದಾರೆ.
ಈ ಕಾರ್ಮಿಕರಲ್ಲಿ ಹೆಚ್ಚಿನವರು ಕಟ್ಟಡ ಕಾರ್ಮಿಕರಾಗಿದ್ದಾರೆ. ಹಾಗೆಯೇ ವಿವಿಧ ಕೈಗಾರಿಕಾ ಘಟಕಗಳು, ಹೋಟೆಲ್ಗಳು, ಮೀನುಗಾರಿಕೆ, ವೃತ್ತಿಪರ ಚಟುವಟಿಕೆಗಳು ಮತ್ತು ಇತರ ಕೆಲವು ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಅಧಿಕ ಚಟುವಟಿಕೆಗಳು ಸ್ಥಗಿತವಾದ ಕಾರಣ, ಕಳೆದ ವರ್ಷ ಲಾಕ್ಡೌನ್ ಸಮಯದಲ್ಲಿ ಅಗ್ನಿಪರೀಕ್ಷೆಗೆ ಒಳಗಾಗಬೇಕಾದ ಕಾರ್ಮಿಕರು ಈ ಬಾರಿ ತಮ್ಮ ಸ್ವಂತ ರಾಜ್ಯಗಳಿಗೆ ಮರಳಲು ಎಲ್ಲಾ ಪ್ರಯತ್ನವನ್ನು ಮಾಡುತ್ತಿದ್ದಾರೆ.
ಅವರಿಗೆ ತಮ್ಮ ಊರುಗಳಿಗೆ ಮರಳಲು ಲಭ್ಯವಿರುವ ಏಕೈಕ ದಾರಿ ರೈಲುಗಳಾಗಿವೆ. ಮಂಗಳೂರಿನ ಮೂಲಕ ಹಾದುಹೋಗುವ ಸೀಮಿತ ಸಂಖ್ಯೆಯ ರೈಲುಗಳಲ್ಲಿನ ಸೀಟುಗಳು ಹೆಚ್ಚಾಗಿ ಮುಂಚಿತವಾಗಿ ಬುಕ್ ಮಾಡಲಾಗುತ್ತದೆ.
ಇಲ್ಲಿನ ಕೇಂದ್ರ ಮತ್ತು ಜಂಕ್ಷನ್ ರೈಲ್ವೆ ನಿಲ್ದಾಣಗಳಲ್ಲಿ ನೂರಾರು ಕಾರ್ಮಿಕರು ರೈಲುಗಳಿಗಾಗಿ ಕಾಯುತ್ತಿದ್ದಾರೆ. ಅನೇಕರು ಗುರುವಾರ ರೈಲುಗಳಿಗೆ ಟಿಕೆಟ್ ಕಾಯ್ದಿರಿಸಿದ್ದಾರೆ.
ಉದ್ಯೋಗವಿಲ್ಲದೆ ಜೀವನ ಸಾಗಿಸುವುದು ಕಷ್ಟಕರವಾಗಿದೆ. ಆದ್ದರಿಂದ ಮನೆಗೆ ತೆರಳುತ್ತಿದ್ದೇವೆ ಎಂದು ಹೇಳಿರುವ ಕಾರ್ಮಿಕರು, ಕಳೆದ ವರ್ಷ ತಾವು ಉದ್ಯೋಗವಿಲ್ಲದೆ, ತಮ್ಮ ಮನೆಗೆ ಹಿಂತಿರುಗಲೂ ಸಾಧ್ಯವಾಗದೆ ಪಟ್ಟ ಕಷ್ಟವನ್ನು ನೆನಪಿಸಿಕೊಂಡಿದ್ದಾರೆ.