ಕೋಟ, ಏ.28 (DaijiworldNews/MB) : ನಾಪತ್ತೆಯಾಗಿದ್ದ ಪೆರ್ಡೂರು ಮೇಳದಲ್ಲಿ ಯಕ್ಷಗಾನ ಕಲಾವಿದರಾಗಿರುವ ಉದಯ ಹೆಗಡೆ (37) ಅವರು ಬೆಂಗಳೂರಿನಲ್ಲಿ ಪತ್ತೆಯಾಗಿದ್ದಾರೆ.
ಕಾರಿನಲ್ಲಿ ಮನೆಯಿಂದ ಹೊರಹೋಗಿದ್ದ ಪೆರ್ಡೂರು ಮೇಳದಲ್ಲಿ ಯಕ್ಷಗಾನ ಕಲಾವಿದರಾಗಿರುವ, ಮತ್ಯಾಡಿ ಗ್ರಾಮದ ಗುಡ್ಡೆಯಂಗಡಿ, ಪ್ರಧಾನ ನಗರದ ನಿವಾಸಿಯಾಗಿರುವ ನನ್ನ ಪತಿ, ಉದಯ ಹೆಗಡೆ (37) ಮನೆಗೆ ಹಿಂತಿರುಗದೆ ನಾಪತ್ತೆಯಾಗಿದ್ದಾರೆ. ಮೊಬೈಲ್ ಗೆ ಕರೆ ಮಾಡಿದಾಗ ಸಂಪರ್ಕ ಸಾಧ್ಯವಾಗಿಲ್ಲ. ಸಂಬಂಧಿಕರು ಹಾಗೂ ಪತಿಯ ಸ್ನೇಹಿತರಲ್ಲಿ ವಿಚಾರಿಸಿದರೂ ಪತ್ತೆಯಾಗಿಲ್ಲ ಎಂದು ಪತ್ನಿ ಅಶ್ವಿನಿ ಹೆಗಡೆ ದೂರು ದಾಖಲಿಸಿದ್ದರು.
ಖ್ಯಾತ ಯಕ್ಷಗಾನ ಕಲಾವಿದರೊಬ್ಬರ ನಾಪತ್ತೆಯೂ ಭಾರೀ ಸುದ್ದಿಯಾಗಿತ್ತು. ಆದರೆ ಈಗ ಕಲಾವಿದ ಉದಯ ಹೆಗಡೆ ಅವರು ಬೆಂಗಳೂರಿನಲ್ಲಿ ಪತ್ತೆಯಾಗಿದ್ದಾರೆ.
ಉದಯ ಹೆಗಡೆ ಅವರ ಸಹೋದರನಿಗೆ ಆರೋಗ್ಯ ಸಮಸ್ಯೆ ಕಾಣಿಸಿಕೊಂಡ ಕಾರಣ ಉದಯ ಹೆಗಡೆ ಅವರು ಬೆಂಗಳೂರಿಗೆ ತೆರಳಿದ್ದರು. ಆದರೆ ಮೊಬೈಲ್ನಲ್ಲಿ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆ ಸಂಪರ್ಕ ಸಾಧಿಸಲು ಸಾಧ್ಯವಾಗಿರಲಿಲ್ಲ. ಅತೀ ಶೀಘ್ರದಲ್ಲೇ ಮನೆಗೆ ಹಿಂತಿರುಗುತ್ತೇನೆ ಎಂದು ಅವರು ತಿಳಿಸಿದರುವುದಾಗಿ ಪೊಲೀಸರು ಹೇಳಿದ್ದಾರೆ.