ಮಂಗಳೂರು, ಏ.28 (DaijiworldNews/MB) : ಕೊರೊನಾ ಸೋಂಕಿತರಿಗೆ ಚಿಕಿತ್ಸೆ ಒದಗಿಸಲು ಆಕ್ಸಿಜಿನ್ ಘಟಕಗಳ ನಿರ್ಮಾಣ, ಆಕ್ಸಿಜಿನ್ ಸಿಲೆಂಡರ್ ಸೇರಿದಂತೆ ಮತ್ತಿತರ ಅತ್ಯಗತ್ಯ ವೈದ್ಯಕೀಯ ನೆರವು ನೀಡುವಂತೆ ಸಂಸದ ನಳಿನ ಕುಮಾರ್ ಕಟೀಲ್ ಜಿಲ್ಲೆಯಲ್ಲಿರುವ ಸರ್ಕಾರಿ ಸಹಭಾಗಿತದ್ವದ ಕಂಪೆನಿಗಳಿಗೆ ಹಾಗೂ ಖಾಸಗಿ ಕಂಪನೆಗಳಿಗೆ ಸೂಚನೆ ನೀಡಿದರು.
ಅವರು ಇಂದು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ, ಕೋವಿಡ್ ನಿಯಂತ್ರಣ ಹಾಗೂ ಚಿಕಿತ್ಸೆ ನಿರ್ವಹಣೆ ಕುರಿತು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ದೇಶದಲ್ಲಿ ಹಿಂದೆಂದೂ ಕಾಣದಂತಹ ಸಾಂಕ್ರಾಮಿಕ ರೋಗ ವ್ಯಾಪಕವಾಗಿ ಹರಡುವುದರೊಂದಿಗೆ ಸಂಕಷ್ಟದ ಪರಿಸ್ಥಿತಯಲ್ಲಿ ನಾವಿದ್ದೇವೆ. ಕೊರೋನಾ ಸೋಂಕು ದಿನೇ ದಿನೇ ಹೆಚ್ಚಾಗತೊಡಗಿದ್ದು, ಸೋಕಿತರನ್ನು ಉಳಿಸಿಕೊಳ್ಳುವುದು ಸರ್ಕಾರ ಮತ್ತು ವೈದ್ಯರಿಗೆ ದೊಡ್ಡ ಸವಾಲಾಗಿದೆ. ಇಂತಹ ಸಂಕಷ್ಟ ಪರಿಸ್ಥಿತಿಯಲ್ಲಿ ಸರ್ಕಾರಿ ಸಹಭಾಗಿತ್ವದ ಕಂಪೆನಿಗಳು ಹಾಗೂ ಖಾಸಗಿ ಕಂಪೆನಿಗಳು ಸರ್ಕಾರಕ್ಕೆ ನೆರವಿನ ಹಸ್ತ ಚಾಚಬೇಕು ಎಂದು ಮನವಿ ಮಾಡಿದರು.
ಜಿಲ್ಲೆಯಲ್ಲಿ ಮುಂದಿನ ದಿನಗಳಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆಗಳಿದ್ದು ಅವರುಗಳಿಗೆ ಉತ್ತಮ ಚಿಕತ್ಸೆ ನೀಡಲು ಅತ್ಯಗತ್ಯವಿರುವ ಆಕ್ಸಿಜಿನ್ ಬೆಡ್ಗಳನ್ನು ಹೆಚ್ಚು ಕಾಯ್ದಿರಿಸಿಕೊಳ್ಳುವುದರೊಂದಿಗೆ ಅವರುಗಳಿಗೆ ಉತ್ತಮ ಚಿಕಿತ್ಸೆ ನೀಡಲು ಜಿಲ್ಲಾಡಳಿತ ಮುಂದಾಗಬೇಕು ಎಂದು ಸೂಚನೆ ನೀಡಿದರು.
ಹೊರರಾಜ್ಯ ಮತ್ತು ಜಿಲ್ಲೆಗಳಿಂದ ಬಂದಿರುವವರಿಂದ ಜಿಲ್ಲೆಯಲ್ಲಿ ಸೋಂಕು ಹೆಚ್ಚಾಗುವುದು ಕಂಡು ಬರುತ್ತಿದೆ. ಈ ಹಿನ್ನಲೆ ಅವರುಗಳನ್ನು ತಪ್ಪದೇ ಕೋವಿಡ್ ಪರೀಕ್ಷೆಗೆ ಒಳಪಡಿಸಬೇಕೆಂದು ಸೂಚನೆ ನೀಡಿದರು.
ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವ್ ಪ್ರಕರಣಗಳು ತೀವ್ರವಾಗಿ ಹೆಚ್ಚಾದಲ್ಲಿ, ಅಗತ್ಯ ಕಂಡುಬಂದಾಗ ವಿಶ್ವಿವಿದ್ಯಾನಿಲಯಗಳ ವಿದ್ಯಾರ್ಥಿ ನಿಲಯಗಳು, ಸರ್ಕಾರಿ ವಿದ್ಯಾರ್ಥಿ ನಿಲಯ ಹಾಗು ಶಾಲೆಗಳಲ್ಲಿ ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡಲು ಅಗತ್ಯ ಮೂಲಭೂತ ಸೌಕರ್ಯ ಒಳಗೊಂಡ ವ್ಯವಸ್ಥೆಯನ್ನು ಮಾಡಿಕೊಳ್ಳುವಂತೆ ಜಿಲ್ಲಾಡಳಿತಕ್ಕೆ ಸೂಚಿಸಿದರು.
ಜಿಲ್ಲೆಯಲ್ಲಿನ ಖಾಸಗಿ ಸಂಸ್ಥೆಗಳಾದ ಮಂಗಳೂರು ರಿಫೈನರಿ ಮತ್ತು ಪೆಟ್ರೊಕೆಮಿಕಲ್ಸ್ ಲಿಮಿಟೆಡ್ (ಎಂಆರ್ಪಿಎಲ್) ವತಿಯಿಂದ ವೆನ್ ಲಾಕ್ ಜಿಲ್ಲಾ ಆಸ್ಪತ್ರೆಯಲ್ಲಿ 930 ಟನ್ ಸಾಮರ್ಥ್ಯದ ಆಕ್ಸಿಜನ್ ಉತ್ಪಾದನಾ ಘಟಕ ಸ್ಥಾಪನೆ, ಮಂಗಳೂರು ಕೆಮಿಕಲ್ ಮತ್ತು ಫರ್ಟಿಲೈಸರ್ಸ್ ಲಿಮಿಟೆಡ್ (ಎಂಸಿಎಫ್) ವತಿಯಿಂದ ಕಾರ್ಮಿಕರ ರಾಜ್ಯ ವಿಮಾ ಆಸ್ಪತ್ರೆ (ಇಎಸ್ಐ) ಹಾಗೂ ಬಂಟ್ವಾಳ ತಾಲೂಕು ಆಸ್ಪತ್ರೆಗಳಲ್ಲಿ 80 ಟನ್ ಸಾಮರ್ಥ್ಯದ ಆಮ್ಲಜನಕ ಉತ್ಪಾದನಾ ಘಟಕ ಸ್ಥಾಪನೆ, ಗೇಲ್ ಇಂಡಿಯಾ ಲಿಮಿಟೆಡ್ ಮತ್ತು ಗೇಲ್ ಗ್ಯಾಸ್ ವತಿಯಿಂದ ಪುತ್ತೂರು ಮತ್ತು ಬೆಳ್ತಂಗಡಿಗಳಲ್ಲಿ ಆಮ್ಲಜನಕ ಉತ್ಪಾದನಾ ಘಟಕ ಸ್ಥಾಪನೆ, ಕುದುರೆಮುಖ ಐರನ್ ಓರ್ ಕಂಪನಿ ಲಿಮಿಟೆಡ್ (ಕೆಐಒಸಿಲ್) ವತಿಯಿಂದ ಉಪ್ಪಿನಂಗಡಿ ಮತ್ತು ಮೂಡುಬಿದಿರೆಗಳಲ್ಲಿ ಆಮ್ಲಜನಕ ಉತ್ಪಾದನಾ ಘಟಕ ಸ್ಥಾಪನೆ, ಇನ್ಫೊಸಿಸ್ ಮಂಗಳೂರು ವತಿಯಿಂದ ಉಳ್ಳಾಲದಲ್ಲಿ ವಿದ್ಯುತ್ ಚಿತಾಗಾರ ಸ್ಥಾಪನೆ, ಮಂಗಳೂರು ವಿಶೇಷ ಆರ್ಥಿಕ ವಲಯ ಲಿಮಿಟೆಡ್ ವತಿಯಿಂದ ಜಿಲ್ಲೆಯಾದ್ಯಂತ ಆ್ಯಂಬುಲೆನ್ಸ್ ನಿರ್ವಹಣೆ, ಆ್ಯಂಬುಲೆನ್ಸ್ಗಳನ್ನು ಬಾಡಿಗೆ ಆಧಾರದಲ್ಲಿ ಪಡೆದು ಅವಶ್ಯಕತೆಗನುಗುಣವಾಗಿ ತಕ್ಷಣ ಒದಗಿಸಲು ಕ್ರಮವಹಿಸುವುದು, ಭಾರತೀಯ ಉದ್ಯಮಗಳ ಒಕ್ಕೂಟ ಮಂಗಳೂರು ಘಟಕ (ಸಿಐಐ) ವತಿಯಿಂದ ಬಾಡಿಗೆ ಆಧಾರದಲ್ಲಿ 100 ಆಮ್ಲಜನಕ ಸಿಲಿಂಡರ್ಗಳ ಪೂರೈಕೆ, ನವಮಂಗಳೂರು ಪೋರ್ಟ್ ಟ್ರಸ್ಟ್ ವತಿಯಿಂದ 20 ಡ್ಯೂರೋ ಸಿಲಿಂಡರ್, ಬಿಎಎಸ್ ಎಫ್ ಇಂಡಿಯಾ ಲಿಮಿಟೆಡ್ ವತಿಯಿಂದ 20 ಡ್ಯೂರೋ ಸಿಲಿಂಡರ್ ನೆರವನ್ನು ಒದಗಿಸುವಂತೆ ಸಂಸದರು ಸೂಚಿಸಿದರು.
ಸಂಸದರು ಸೂಚಿಸಿದ ಕಾರ್ಯಗಳಿಗೆ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒದಗಿಸಲು, ಸಭೆಯಲ್ಲಿ ಹಾಜರಿದ್ದ ಎಲ್ಲಾ ಸಂಸ್ಥೆಗಳು ಪ್ರತಿನಿಧಿಗಳು ಒಪ್ಪಿಕೊಂಡು, ಜಿಲ್ಲಾಡಳಿತಕ್ಕೆ ಅಗತ್ಯ ನೆರವಿನ ಹಸ್ತಚಾಚುವುದಾಗಿ ತಿಳಿಸಿದರು.
ನೆರವು ನೀಡುವ ಸಂಸ್ಥೆಗಳು ವೈದ್ಯಕೀಯ ಮೂಲಸೌಕರ್ಯವನ್ನು ಒದಗಿಸುವ ಬಗ್ಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಯವರೊಂದಿಗೆ ಸಮನ್ವಯ ಸಾಧಿಸಿ ತುರ್ತಾಗಿ ಕ್ರಮ ಕೈಗೊಂಡು ಮೂರು ದಿನಗಳೊಳಗೆ ಕಾರ್ಯಾದೇಶ ನೀಡಿ ಜಿಲ್ಲಾಧಿಕಾರಿಯವರ ಕಛೇರಿಗೆ ಮಾಹಿತಿ ನೀಡಲು ಸೂಚಿಸಲಾಯಿತು.
ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ, ಮಾತನಾಡಿ, ಜಿಲ್ಲೆಯಲ್ಲಿ ಸರ್ಕಾರಿ ವೆನ್ಲಾಕ್ ಆಸ್ಪತ್ರೆ , 4 ತಾಲೂಕು ಆಸ್ಪತ್ರೆಗಳು ಅಲ್ಲದೇ ಖಾಸಗಿ ಅಸ್ಪತ್ರೆಗಳಲ್ಲಿ ಶೇ. 50 ರಷ್ಟು ಬೆಡ್ಗಳನ್ನು ಜಿಲ್ಲಾಡಳಿತಕ್ಕೆ ಮೀಸಲಿಡಲಾಗಿದೆ ಎಂದ ಅವರು ಒಟ್ಟು 4816 ಬೆಡ್ಗಳಿದ್ದು, ಅವುಗಳಲ್ಲಿ 837 ಬೆಡ್ಗಳಲ್ಲಿ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದು, 3979 ಬೆಡ್ಗಳು ಖಾಲಿ ಉಳಿದಿವೆ ಎಂದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್, ಶಾಸಕ ರಾಜೇಶ್ ನಾಯ್ಕ್ ಮತ್ತಿತರರು ಉಪಸ್ಥಿತರಿದ್ದರು.