ಮಂಗಳೂರು, ಎ.28 (DaijiworldNews/PY): ಪ್ರಧಾನಿ ನರೇಂದ್ರ ಮೋದಿ ವಿರುದ್ದ ಅವಾಚ್ಯವಾಗಿ ನಿಂದಿಸಿ ಫೇಸ್ಬುಕ್ ಖಾತೆಯಲ್ಲಿ ಲುಕ್ಮನ್ ಅಡ್ಯಾರ್ ಎಂಬವರು ವಿಕೃತವಾಗಿ ಪೋಸ್ಟ್ ಮಾಡಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಎ.28ರ ಬುಧವಾರ ಲುಕ್ಮನ್ ಅಡ್ಯಾರ್ ಅವರ ಪತ್ನಿಯನ್ನು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಸಹಸದಸ್ಯರ ಸ್ಥಾನದಿಂದ ವಜಾ ಮಾಡಿದೆ.
ವಜಾ ಮಾಡಿದ ಸದಸ್ಯೆಯನ್ನು ನಫೀಸ ಮಿಸ್ರಿಯ ಎಂದು ಗುರುತಿಸಲಾಗಿದೆ. ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ರಹೀಂ ಉಚ್ಚಿಲ್ ಅವರು ಬರೆದ ಪತ್ರದ ಬಳಿಕ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯು ನಫೀಸ ಮಿಸ್ರಿಯ ಅವರನ್ನು ಸಹಸದಸ್ಯರ ಸ್ಥಾನದಿಂದ ವಜಾ ಮಾಡಿದೆ.
ದಾಯ್ಜಿವಲ್ಡ್ ಜೊತೆ ಮಾತನಾಡಿದ ರಹೀಂ ಉಚ್ಚಿಲ್, "ನಫೀಸಾ ಮಿಸ್ರಿಯಾ ಅವರು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ನಾಮನಿರ್ದೇಶಿತ ಸದದ್ಯರಾಗಿದ್ದರು. ಇವರ ಪತಿ ದೇಶದ ಪ್ರಧಾನ ಮಂತ್ರಿಯ ವಿರುದ್ದ ಅವಹೇಳನಕಾರಿ ಪೋಸ್ಟ್ ಮಾಡಿದ್ದರು. ಹಾಗಾಗಿ, ನಫೀಸಾ ಅವರನ್ನು ನಾಮನಿರ್ದೇಶಿತ ಸದಸ್ಯ ಹುದ್ದೆಯಿಂದ ವಜಾಗೊಳಿಸುವಂತೆ ನಾನು ರಿಜಿಸ್ಟ್ರಾರ್ಗೆ ಪತ್ರ ಬರೆದಿದ್ದೇನೆ" ಎಂದು ಹೇಳಿದ್ದಾರೆ.
"ಲುಕ್ಮನ್ ಅಡ್ಯಾರ್ ಎಂಬ ಎಂಬ ಫೇಸ್ಬುಕ್ ಖಾತೆ ಹೊಂದಿದ್ದ ವ್ಯಕ್ತಿ ಫೇಸ್ಬುಕ್ ಪೋಸ್ಟ್ನಲ್ಲಿ ದೇಶದ ಪ್ರಧಾನಿಯನ್ನು ಏಕವಚನದಲ್ಲಿ ಸಂಭೋಧಿಸಿದ್ದಲ್ಲದೆ, ಪ್ರಧಾನಿ ಸಾವನ್ನಪ್ಪಲಿ ಎಂಬರ್ಥದಲ್ಲಿ ಪೋಸ್ಟ್ ಮಾಡಿ ವಿಕೃತಿ ಮೆರೆದಿದ್ದಾರೆ. ದೇಶದ ವಿರುದ್ದ ಸಮರ ಸಾರುವ ಹಾಗೂ ದೇಶಾದ್ಯಂತ ವಿವಿಧ ಜಾತಿ ಮತಗಳ ಮಧ್ಯೆ ವಿಷಬೀಜುವ ಬಿತ್ತುವ ಹಾಗೂ ದೇಶದ ಭದ್ರತೆಗೆ ಅಪಾಯವನ್ನುಂಟು ಮಾಡುವ ಹಾಗೂ ಅರಾಜಕತೆಯನ್ನು ಸೃಷ್ಟಿಸುವ ಲೇಖನ ಬರೆದು ಸಾಮಾಜಿಕ ತಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ" ಎಂದು ಫಝಲ್ ಅಸೈಗೋಳಿ ಅವರು ಕೊಣಾಜೆ ಠಾಣೆಯಲ್ಲಿ ದೂರು ದಾಖಲಿಸಿದ್ದರು.