ಮಂಗಳೂರು, ಏ.28 (DaijiworldNews/MB) : ಜಿಲ್ಲೆಯಲ್ಲಿ ಕೊರೊನಾ ಸೋಂಕು ವೇಗವಾಗಿ ಹಡರುತ್ತಿದೆ. ಏತನ್ಮಧ್ಯೆ ಆರ್ಟಿ-ಪಿಸಿಆರ್ ಪರೀಕ್ಷೆಗಳ ವರದಿಯು ಬರುವುದು ವಿಳಂಬವಾಗುತ್ತಿವೆ. ಸಾಮಾನ್ಯವಾಗಿ ಆರ್ಟಿ-ಪಿಸಿಆರ್ ಪರೀಕ್ಷೆಗಳ ವರದಿಯು 24 ರಿಂದ 48 ಗಂಟೆಗಳಲ್ಲಿ ಬರುತ್ತದೆ. ಆದರೆ ವರದಿ ಬರಲು ಈಗ ನಾಲ್ಕರಿಂದ ಆರು ದಿನಗಳು ಆಗುತ್ತಿದೆ.
ಇನ್ನು ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಕಿಶೋರ್, ಪ್ರತಿದಿನ 5,000 ರಿಂದ 6,000 ಮಂದಿ ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳುತ್ತಿದ್ದಾರೆ. ಈ ಕಾರಣದಿಂದಾಗಿ ವರದಿ ಬರುವುದು ವಿಳಂಬವಾಗುತ್ತಿದೆ ಎಂದು ತಿಳಿಸಿದ್ದಾರೆ.
ತಾಂತ್ರಿಕ ತಂಡಗಳು ಈ ವ್ಯವಸ್ಥೆಯನ್ನು ನವೀಕರಿಸುವ ಪ್ರಯತ್ನ ಮಾಡುತ್ತಿವೆ. ಸುಮಾರು ಒಂದು ವಾರದ ಅವಧಿಯಲ್ಲಿ ವರದಿ ಬರುವ ನಿರೀಕ್ಷೆಯಿದೆ ಎಂದು ಕೂಡಾ ಅವರು ಹೇಳಿದ್ದಾರೆ.
ಜಿಲ್ಲೆಯ ಎಂಟು ವೈದ್ಯಕೀಯ ಕಾಲೇಜುಗಳು ಮತ್ತು ಸರ್ಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ ಕೊರೊನಾ ಪರೀಕ್ಷೆಯನ್ನು ನಡೆಸಲಾಗುತ್ತಿದೆ. ವೆನ್ಲಾಕ್ ಆಸ್ಪತ್ರೆಯಲ್ಲಿ ಸುಮಾರು 2,500 ಮಂದಿ ಪರೀಕ್ಷೆಗೆ ಒಳಪಡುತ್ತಾರೆ. ವೈದ್ಯಕೀಯ ಕಾಲೇಜುಗಳಲ್ಲಿ ದಿನಕ್ಕೆ ಸರಾಸರಿ 300 ಮಂದಿ ಪರೀಕ್ಷೆಗೆ ಒಳಪಡುತ್ತಾರೆ. ಕೊರೊನಾ ಹರಡುವುದನ್ನು ತಡೆಯಲು ಕೊರೊನಾ ಸೋಂಕು ಇರುವುದನ್ನು ಖಾತ್ರಿ ಪಡಿಸುವುದು ಬಹುಮುಖ್ಯವಾಗಿದೆ.
ಇನ್ನು ಉಡುಪಿ ಜಿಲ್ಲೆಯಲ್ಲೂ ಇದೇ ರೀತಿಯ ಸಮಸ್ಯೆ ಉಂಟಾಗಿದೆ. ಪ್ರತಿದಿನ 3,000 ರಿಂದ 4,000 ಮಾದರಿಗಳ ಸಂಗ್ರಹ ಮಾಡಲಾಗುತ್ತದೆ. ಜಿಲ್ಲಾ ಆಸ್ಪತ್ರೆ ಪ್ರಯೋಗಾಲಯವು ಪ್ರತಿದಿನ ಸುಮಾರು 1,500 ಪರೀಕ್ಷೆಗಳನ್ನು ನಡೆಸುತ್ತದೆ. ಇದರಿಂದಾಗಿ ವಿಳಂಬವಾಗುತ್ತಿದೆ ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಸುಧೀರ್ ಚಂದ್ರ ಸೂಡಾ ಸ್ಪಷ್ಟಪಡಿಸಿದರು.
ಲಸಿಕೆ ಪಡೆಯುವವರ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿದೆ. ಅದೇ ಸಮಯದಲ್ಲಿ, ಲಸಿಕೆಗಳ ಕೊರತೆ ಕಂಡುಬಂದಿದೆ. ಈ ವಾರದ ಆರಂಭದಲ್ಲಿ, 12,000 ಲಸಿಕೆ ಬಾಟಲುಗಳು ಲಭ್ಯವಾಗಿದೆ. ಇದು ಎರಡು ಮೂರು ದಿನಗಳವರೆಗೆ ಸಾಕಾಗಬಹುದು. ಅಷ್ಟರಲ್ಲಿ ಮತ್ತೆ ಲಸಿಕೆ ಬರಬೇಕಾಗಿದೆ ಎಂದು ತಿಳಿಸಿದರು.