ಮಂಗಳೂರು, ಏ.28 (DaijiworldNews/MB) : ''ಸರ್ಕಾರ ಜಾರಿಗೆ ತಂದಿರುವ ಲಾಕ್ಡೌನ್ ಸಾಮಾನ್ಯ ಜನರ ಜೀವನೋಪಾಯದ ಮೇಲೆ ಪ್ರಭಾವ ಬೀರದಂತೆ ನೋಡಿಕೊಳ್ಳುವುದು ಸರ್ಕಾರದ ಜವಾಬ್ದಾರಿ'' ಎಂದು ಮಾಜಿ ಸಚಿವ ರಮಾನಾಥ್ ರೈ ಹೇಳಿದರು.
ಬುಧವಾರ ಕಾಂಗ್ರೆಸ್ ಭವನದಲ್ಲಿ ಮಾಧ್ಯಮಗೋಷ್ಠಿ ನಡೆಸಿದ ಮಾತನಾಡಿದ ಅವರು, ''ಲಾಕ್ಡೌನ್ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಅಗತ್ಯವಿರುವವರಿಗೆ ಸರ್ಕಾರವು ಆಹಾರದ ಕಿಟ್ ಒದಗಿಸಬೇಕು. ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ವಾಪಾಸ್ ಹೋಗುವುದನ್ನು ತಡೆಯುವುದು ಕೂಡಾ ಸರ್ಕಾರದ ಜವಾಬ್ದಾರಿ'' ಎಂದು ಹೇಳಿದರು.
''ಹಾಗೆಯೇ ಸರ್ಕಾರವು ಎಲ್ಲಾ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಗಂಜಿ ಕೇಂದ್ರವನ್ನು ಸ್ಥಾಪಿಸಬೇಕು. ಕೊರೊನಾ ಹರಡುವುದನ್ನು ತಡೆಯಲು ಎಲ್ಲಾ ತಾಲೂಕುಗಳಲ್ಲಿ ನೋಡಲ್ ಅಧಿಕಾರಿಗಳನ್ನು ನೇಮಿಸಬೇಕು'' ಎಂದು ಆಗ್ರಹಿಸಿದ ಅವರು, ''ಸರ್ಕಾರಕ್ಕೆ ಇಚ್ಛಾ ಶಕ್ತಿ ಇದ್ದರೆ ಈ ಕಾರ್ಯವನ್ನು ಮಾಡಬಹುದು. ಆದರೆ ಸರ್ಕಾರಕ್ಕೆ ಯಾವುದೇ ಆದ ಒಂದು ದೃಷ್ಟಿ ಕೋನ ಹೊಂದಿಲ್ಲ'' ಎಂದು ದೂರಿದರು.
''ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟುವಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಹೇಳುವುದರಲ್ಲಿ ಯಾವುದೇ ತಪ್ಪಿಲ್ಲ. ಕೇಂದ್ರ ಸರ್ಕಾರವು ಆಕ್ಸಿಜನ್ ಪೂರೈಕೆ ವಿಚಾರದಲ್ಲಿ ರಾಜ್ಯಗಳ ನಡುವೆ ತಾರತಮ್ಯ ನಡೆಸುತ್ತಿದೆ'' ಎಂದು ಆರೋಪಿಸಿದ್ದಾರೆ.
''ಕೊರೊನಾ ಲಾಕ್ಡೌನ್ ಕಾರಣದಿಂದಾಗಿ ರಾಜ್ಯ ಸರ್ಕಾರವು ವಿದ್ಯುತ್, ನೀರು ಹಾಗೂ ಟೆಲಿಪೋನ್ ಬಿಲ್ಗಳನ್ನು ಮನ್ನಾ ಮಾಡಬೇಕು. ಇದಲ್ಲದೆ, ಕೇಂದ್ರ ಸರ್ಕಾರವು ಪಿಎಂ-ಕೇರ್ಸ್ ನಿಧಿಗಾಗಿ ಸಂಗ್ರಹಿಸಿದ ಹಣ ಮತ್ತು ಖರ್ಚು ವೆಚ್ಚದ ಬಗ್ಗೆ ಶ್ವೇತಪತ್ರವನ್ನು ಹೊರಡಿಸಬೇಕು'' ಎಂದು ಆಗ್ರಹಿಸಿದರು.
''ಸರ್ಕಾರದಲ್ಲಿ ಚುನಾಯಿತ ಪ್ರತಿನಿಧಿಗಳು ಗವರ್ನರ್ ಅಧ್ಯಕ್ಷತೆಯಲ್ಲಿ ಸಭೆ ನಡೆಯುವುದು ಸರ್ಕಾರದ ಅಸಮರ್ಥತೆಯನ್ನು ತೋರಿಸುತ್ತದೆ. ರಾಜ್ಯಪಾಲರು ಸರ್ಕಾರದ ಅಸಮರ್ಥತೆಯನ್ನು ಗಮನಿಸಿದ್ದು ಈ ಹಿನ್ನೆಲೆ ಸಭೆಯ ಅಧ್ಯಕ್ಷತೆ ವಹಿಸಲು ಮುಂದೆ ಬಂದಿದ್ದಾರೆ'' ಎಂದು ಹೇಳಿದ ಅವರು, ''ಸರ್ಕಾರದ ಸಚಿವರುಗಳ ನಡುವೆ ಸಹಕಾರವಿಲ್ಲ. ವಿಪಕ್ಷಗಳ ವಿಶ್ವಾಸವನ್ನು ಪಡೆಯುವ ಮೂಲಕ ಕೊರೊನಾ ಹರಡುವುದನ್ನು ತಡೆಯುವ ಸರ್ಕಾರದ ಯುದ್ದದಲ್ಲಿ ಸರ್ಕಾರವು ವೇಗವನ್ನು ಸಾಧಿಸಬಹುದಾಗಿದೆ'' ಎಂದು ಸಲಹೆ ನೀಡಿದರು.
ಇನ್ನು ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸಚಿವ ಅಭಯಚಂದ್ರ ಜೈನ್, ''ಕೊರೊನಾ ಸೋಂಕನ್ನು ಸಫಲವಾಗಿ ನಿಯಂತ್ರಿಸುವ ಮೂಲಕ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿ ನಮ್ಮ ಜಿಲ್ಲೆಯನ್ನು ಆದರ್ಶ ಜಿಲ್ಲೆಯನ್ನಾಗಿಸಬೇಕು'' ಎಂದು ಹೇಳಿದರು.
ಎಐಸಿಸಿ ವಕ್ತಾರ ಐವಾನ್ ಡಿಸೋಜಾ, ''ಜಿಲ್ಲೆಯಲ್ಲಿ ಇನ್ನೂ ಶೇ.5 ರಷ್ಟು ಜನರಿಗೂ ಕೊರೊನಾ ಲಸಿಕೆ ನೀಡಿಲ್ಲ. ಕೇಂದ್ರ ಸರ್ಕಾರವು ಕೊರೊನಾ ಲಸಿಕೆ ಒದಗಿಸುವುದಕ್ಕೆ ರಾಜ್ಯ ಸರ್ಕಾರ ಕಾಯುವ ಬದಲಾಗಿ ರಾಜ್ಯ ಸರ್ಕಾರದ ನಿಧಿಯನ್ನು ಬಳಸಿ ಲಸಿಕೆ ಖರೀದಿ ಮಾಡಬೇಕು. ಲಸಿಕೆಗಳು ಖಾಸಗಿ ಆಸ್ಪತ್ರೆಗಳಿಗೆ ಸಿಗುತ್ತಿದೆ. ಆದರೆ ಸರ್ಕಾರಿ ಆಸ್ಪತ್ರೆಗೆ ಜನರು ಹೋದಾಗ ಅಲ್ಲಿ ಕೊರೊನಾ ಲಸಿಕೆ ಇಲ್ಲ ಎಂದು ಹೇಳುತ್ತಾರೆ'' ಎಂದು ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದರು.