ಮಂಗಳೂರು, ಏ.28 (DaijiworldNews/MB) : ಪ್ರಸ್ತುತ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವೈದ್ಯಕೀಯ ಆಮ್ಲಜನಕದ ಯಾವುದೇ ಕೊರತೆ ಕಂಡು ಬಂದಿಲ್ಲ. ಆದರೂ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲೆಯಲ್ಲಿ ಹೆಚ್ಚುವರಿ ಆಕ್ಸಿಜನ್ ಘಟನೆ ಸ್ಥಾಪನೆಗೆ ತಯಾರಿ ನಡೆಸಲಾಗುತ್ತಿದೆ. ಈಗಾಗಲೇ ಕೇಂದ್ರ ಸರ್ಕಾರವು ಸ್ಥಳೀಯಾಡಳಿತಕ್ಕೆ ಸೂಚಿಸಿದ ಹಿನ್ನೆಲೆಯಲ್ಲಿ ವಿವಿಧ ಕೈಗಾಗಿಕಾ ಸಂಸ್ಥೆಗಳ ನೆರವಿನಲ್ಲಿ ಘಟಕ ಸ್ಥಾಪನೆಗೆ ಜಿಲ್ಲಾಡಳಿತವು ಯೋಜಿಸಿದೆ. ಈ ಹಿನ್ನೆಲೆ ಬುಧವಾರ ಎಂಆರ್ಪಿಎಲ್ ಹಾಗೂ ಎಂಸಿಎಫ್ ಸೇರಿದಂತೆ ಬೃಹತ್ ಕೈಗಾರಿಕೆಗಳ ಜೊತೆಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ನಡೆಯಲಿದೆ. ಸಂಸದ ನಳಿನ್ ಕುಮಾರ್ ಕಟೀಲ್ ಅಧ್ಯಕ್ಷತೆ ವಹಿಸಲಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ವೆನ್ಲಾಕ್ ಆಸ್ಪತ್ರೆ ಸೇರಿದಂತೆ ಎಲ್ಲಾ ತಾಲ್ಲೂಕು ಮಟ್ಟದ ಆಸ್ಪತ್ರೆಗಳಲ್ಲಿ ಪ್ರತ್ಯೇಕ ಆಮ್ಲಜನಕ ಘಟಕಗಳನ್ನು ಸ್ಥಾಪಿಸುವುದು ಉದ್ದೇಶವಾಗಿದೆ ಎಂದು ತಿಳಿದು ಬಂದಿದೆ. ಹಾಗೆಯೇ ದೊಡ್ಡ ಸಿಲಿಂಡರ್ಗಳನ್ನು ಖರೀದಿಸಲು ಸಹ ನಿರ್ಧರಿಸಲಾಗಿದೆ ಎನ್ನಲಾಗಿದೆ.
ಇನ್ನು ಹೆಚ್ಚುವರಿ ಆಮ್ಲಜನಕ ಘಟಕವನ್ನು ಸ್ಥಾಪಿಸಲು ಕೈಗಾರಿಕೆಗಳು ಸಹಾಯವನ್ನು ನೀಡುವ ನಿರೀಕ್ಷೆಯಿದೆ. ಗೈಲ್ ಗ್ಯಾಸ್ ಸಂಸ್ಥೆ ವಿಶೇಷ ನೆರವು ನೀಡುವ ನಿರೀಕ್ಷೆಯಿದೆ.
ಪ್ರಸ್ತುತ ದಕ್ಷಿಣ ಕನ್ನಡದಲ್ಲಿ ಸುಮಾರು 6,000 ಕ್ಯುಬಿಕ್ ಲೀಟರ್ ಹಾಗೂ ಉಡುಪಿ ಜಿಲ್ಲೆಯಲ್ಲಿ 4,000 ಕ್ಯುಬಿಕ್ ಆಮ್ಲಜನಕದ ಬೇಡಿಕೆ ಇದೆ. ಈ ಬೇಡಿಕೆಯನ್ನು ಮಂಗಳೂರಿನ ಉತ್ಪಾದನಾ ಘಟಕಗಳು ಪೂರೈಸುತ್ತಿದೆ.
ಜಿಲ್ಲೆಯಲ್ಲಿ ಎಂಟು ವೈದ್ಯಕೀಯ ಕಾಲೇಜು ಆಸ್ಪತ್ರೆಗಳು ಮತ್ತು ವೆನ್ಲಾಕ್ ಆಸ್ಪತ್ರೆ ಆಮ್ಲಜನಕ ಸಂಗ್ರಹ ಘಟಕಗಳನ್ನು ಹೊಂದಿರುವುದರಿಂದ, ಕೆಲವು ದಿನಗಳವರೆಗೆ ಅಗತ್ಯವಿರುವ ಆಮ್ಲಜನಕವನ್ನು ಇಲ್ಲಿ ಸಂಗ್ರಹಿಸಬಹುದಾಗಿದೆ.
ಕೇರಳದಿಂದ ಲಭ್ಯವಾದ ಲಿಕ್ವಿಡ್ ಆಕ್ಸಿಜನ್ ಅನ್ನು ರಿ ಫಿಲ್ಲಿಂಗ್ ಮಾಡುವ ಒಂದು ಘಟಕವು ಮಂಗಳೂರಿನ ಬೈಕಂಪಾಡಿಯಲ್ಲಿದೆ. ಹಾಗೆಯೇ ನ್ಯಾಚುರಲ್ ಏರ್ ಅನ್ನು ಕಂಪ್ರೆಸ್ ಮಾಡಿ ಪ್ರತ್ಯೇಕಿಸಿ ಆಕ್ಸಿಜನ್ ತಯಾರಿಸುವ ಮತ್ತು ರಿ ಫಿಲ್ಲಿಂಗ್ ಮಾಡುವ ಎರಡು ಪ್ರತ್ಯೇಕ ಉತ್ಪಾದನಾ ಘಟಕಗಳು ಕಾರ್ಯಾಚರಿಸುತ್ತಿದೆ.
ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಬಹುತೇಕ ಎಲ್ಲ ಆಸ್ಪತ್ರೆಗಳಿಗೆ ಇಲ್ಲಿಂದಲೇ ಸರಬರಾಜು ಮಾಡಲಾಗುತ್ತಿದೆ.