ಉಡುಪಿ, ಎ.28 (DaijiworldNews/PY): ಉಡುಪಿ ಲಾಕ್ಡೌನ್ ನಿಯಮಾವಳಿ ಕಠಿಣ ಜಾರಿಯಾಗಿದ್ದು, ಅಗತ್ಯ ವಸ್ತುಗಳ ಖರೀದಿಗೆ ಬೆಳಗ್ಗೆ 6 ರಿಂದ 10 ಗಂಟೆಯವರೆಗೆ ಅವಕಾಶ ನೀಡಲಾಗಿದೆ. ಈ ಹಿನ್ನೆಲೆ, ಜಿಲ್ಲೆಯಲ್ಲಿ ಜನರು ಬೆಳ್ಳಂಬೆಳಗ್ಗೆಯೇ ಅಗತ್ಯ ವಸ್ತುಗಳನ್ನು ಖರೀದಿಸಿ ಮನೆಗೆ ಹಿಂತಿರುಗಿದ್ದಾರೆ.
10 ಗಂಟೆಯ ಬಳಿಕ ಅಗತ್ಯ ಸೇವೆಯಲ್ಲಿರುವವರಿಗೆ ಮಾತ್ರವೇ ರಸ್ತೆಯಲ್ಲಿ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದ್ದು, ಬ್ಯಾಂಕ್, ಎಟಿಎಂ ಸೇರಿದಂತೆ ಅಗತ್ಯ ಸೇವೆಗಳಿಗೆ ಮಾತ್ರವೇ ದಾಖಲೆ ಪತ್ರ ತೋರಿಸಿ ಸಂಚರಿಸಲು ಅವಕಾಶ ಕಲ್ಪಿಸಲಾಗಿದೆ. ಅನಗತ್ಯವಾಗಿ ಮನೆಯಿಂದ ಹೊರಬಾರದಂತೆ ಸೂಚನೆ ನೀಡಲಾಗಿದೆ. ಜಿಲ್ಲೆಯಲ್ಲಿ ಜನರ, ವಾಹನಗಳ ಓಡಾಟ ನಿರ್ಬಂಧಿಸಲು ನಗರದ ಹಲವೆಡೆ ಪೊಲೀಸ್ ಚೆಕ್ ಪೋಸ್ಟ್ಗಳನ್ನು ತೆರೆಯಲಾಗಿದೆ.
ಈ ನಡುವೆ ಬೆಳಗ್ಗೆ 10 ಗಂಟೆಗೆ ಉಡುಪಿ ಸರ್ಕಲ್ ಇನ್ಸ್ ಪೆಕ್ಟರ್ ಪ್ರಮೋದ್ ಕುಮಾರ್ ಹಾಗೂ ತಂಡ ಉಡುಪಿ ಮೀನು ಮಾರುಕಟ್ಟೆ, ತರಕಾರಿ ಮಾರುಕಟ್ಟೆ, ಆದಿ ಉಡುಪಿ ಮಾಂಸದ ಅಂಗಡಿ, ಸಂತೆಕಟ್ಟೆ ಮತ್ತಿತರೆಡೆಗಳಲ್ಲಿ ರೌಂಡ್ಸ್ ನಡೆಸಿದ್ದು, ಈ ಸಂದರ್ಭ ಮಾರ್ಗಸೂಚಿ ನಿಯಮ ಮೀರಿ ವ್ಯವಹಾರ ಮಾಡುತ್ತಿದ್ದವರಿಗೆ ಎಚ್ಚರಿಕೆ ನೀಡಿದ್ದಾರೆ.
ಲಾಕ್ಡೌನ್ ನಿಯಮಾವಳಿ ಕಠಿಣ ಜಾರಿಯಲ್ಲಿದ್ದರೂ ಕೂಡಾ ರಸ್ತೆಯಲ್ಲಿ ಸಂಚರಿಸುತ್ತಿದ್ದ ಪ್ರತಿಯೋರ್ವರ ದಾಖಲೆಗಳನ್ನು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.