ಉಳ್ಳಾಲ, ಏ. 27 (DaijiworldNews/SM): ಉಳ್ಳಾಲ ಸಮುದಾಯ ಆರೋಗ್ಯ ಕೇಂದ್ರದಲ್ಲಿ 50 ಬೆಡ್ ಗೆ ಬೇಕಾಗುವಂತಹ ಆಕ್ಸಿಜನ್ ಕನೆಕ್ಷನ್ ಅನ್ನು ಯಶಸ್ವಿಯಾಗಿ ಇಂದು ಡೆಮೋ ಮಾಡಲಾಗಿದೆ ಎಂದು ಮಾಜಿ ಸಚಿವ ಹಾಗೂ ಶಾಸಕ ಯು.ಟಿ ಖಾದರ್ ತಿಳಿಸಿದ್ದಾರೆ.
50 ಬೆಡ್ಗಳಿಗೆ ಬೇಕಾಗಿರುವ ಮೂಲಭೂತ ಸೌಕರ್ಯಗಳಾದ ನರ್ಸ್, ಅಟೆಂಡರುಗಳು, ವೈದ್ಯರನ್ನು ನೇಮಿಸಲು ಜಿಲ್ಲಾಧಿಕಾರಿ, ಜಿಲ್ಲಾ ವೈದ್ಯಾಧಿಕಾರಿ ಹಾಗೂ ಖಾಸಗಿ ಆಸ್ಪತ್ರೆಗಳ ಜೊತೆಗೆ ಚರ್ಚಿಸಿ ರೂಪುರೇಷೆಯನ್ನು ತಯಾರಿಸಲಾಗಿದೆ. ತುರ್ತು ಕಾಲಘಟ್ಟಕ್ಕೆ ಮಾತ್ರ ವ್ಯವಸ್ಥೆಯನ್ನು ಮಾಡಲಾಗಿದೆ.
ಭವಿಷ್ಯದಲ್ಲಿ ಗುಜರಾತ್ ಮತ್ತು ಬೆಂಗಳೂರಿನಲ್ಲಿ ಆದ ಪರಿಸ್ಥಿತಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಗಬಾರದು ಅನ್ನುವ ಉದ್ದೇಶದಿಂದ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಅಂತಹ ಸ್ಥಿತಿ ಜಿಲ್ಲೆಯಲ್ಲಿ ಆಗಲು ಅಸಾಧ್ಯ. ಇಲ್ಲಿ ಬೇಕಾದಂತಹ ಸರಕಾರಿ ಆಸ್ಪತ್ರೆಗಳು, ವೈದ್ಯಕೀಯ ಕಾಲೇಜು ಆಸ್ಪತ್ರೆಗಳು, ಖಾಸಗಿ ಆಸ್ಪತ್ರೆಗಳು ಸೇರಿದಂತೆ ಒಟ್ಟು 4,000 ಬೆಡ್ ಗಳು ಜಿಲ್ಲೆಯಲ್ಲಿವೆ. ಅಲ್ಲಿಯೂ ವ್ಯವಸ್ಥೆಗಳನ್ನು ಕಲ್ಪಿಸಲು ಅಸಾಧ್ಯವಾದಲ್ಲಿ ಮಾತ್ರ ಉಳ್ಳಾಲದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವ್ಯವಸ್ಥೆ ಕಲ್ಪಿಸಲಾಗುವುದು. ಶೀಘ್ರದಲ್ಲಿ ಕೋವಿಡ್ ಆಸ್ಪತ್ರೆಯನ್ನಾಗಿ ಮಾಡಲಾಗುವುದಿಲ್ಲ. ಇಲ್ಲಿ ದಿನನಿತ್ಯ ಲಸಿಕೆಗೆ, ಪರೀಕ್ಷೆಗೆ 150 ರಿಂದ 200 ಮಂದಿ ಬರುತ್ತಾ ಇರುತ್ತಾರೆ. ವೃದ್ಧರು, ಮಕ್ಕಳು, ಗರ್ಭಿಣಿಯರು ಆಯುರ್ವೇದ, ಯುನಾನಿ, ಹೋಮಿಯೋಪತಿ ಚಿಕಿತ್ಸೆಯನ್ನು ಪಡೆಯುತ್ತಾರೆ. ಅವರಿಗೆ ತೊಂದರೆಯಾಗದ ಉದ್ದೇಶದಿಂದ ಸದ್ಯಕ್ಕೆ ಕೋವಿಡ್ ಆಸ್ಪತ್ರೆ ಎಂದು ಘೋಷಿಸಲಾಗುವುದಿಲ್ಲ ಎಂದರು.