ಮಂಗಳೂರು, ಏ.27 (DaijiworldNews/MB) : ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ನ ಐದು ವರ್ಷಗಳ ಚುನಾಯಿತಿ ಅವಧಿಯು ಎ.27 ಕ್ಕೆ ಕೊನೆಯಾಗಲಿದೆ. ಹಾಗೆಯೇ ಜಿಲ್ಲಾ ಪಂಚಾಯತ್ನ ಹಾಲಿ ಚುನಾಯಿತ ಸದಸ್ಯರ ಅಧಿಕಾರಾವಧಿಯು ಕೂಡಾ ಇಂದಿಗೆ ಮುಕ್ತಾಯವಾಗಿದೆ.
2016 ರ ಫೆಬ್ರವರಿಯಲ್ಲಿ ರಾಜ್ಯದಲ್ಲಿ ಜಿ.ಪಂ. ಹಾಗೂ ತಾಪಂ.ಗಳಿಗೆ ಎರಡು ಹಂತದಲ್ಲಿ ಚುನಾವಣೆ ನಡೆದಿತ್ತು. ಜಿಲ್ಲೆಯಲ್ಲಿ2016 ರ ಫೆ.20 ರಂದು ಚುನಾವಣೆ ನಡೆದು ಫೆ.23 ರಂದು ಮತ ಎಣಿಕೆ ನಡೆದಿತ್ತು. ಎ.28 ರಂದು ಚುನಾಯಿತ ಸದಸ್ಯರ ಪ್ರಥಮ ಸಭೆ ನಡೆದು ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ಆಯ್ಕೆ ಆಗಿತ್ತು. 5 ವರ್ಷಗಳ ಆಡಳಿತಾವಧಿಯು ಪ್ರಥಮ ಅಭೆ ನಡೆದ ದಿನದಿಂದ ಗಣನೆಗೆ ಬರಲಿರುವ ಹಿನ್ನೆಲೆ ಜಿಲ್ಲೆಯಲ್ಲಿ ಪಂಚಾಯತ್ನ ಐದು ವರ್ಷಗಳ ಆಡಳಿತಾವಧಿಯು ಕೊನೆಯಾಗಿದೆ. ಜನಪ್ರತಿನಿಧಿಗಳ ಅಧಿಕರಾವಧಿ ಮುಗಿದ ನಂತರ ಸರ್ಕಾರದಿಂದ ನೇಮಕವಾಗುವ ಆಡಳಿತಾಧಿಕಾರಿಗಳು ಆಡಳಿತ ಕೈಗೆ ತೆಗೆದುಕೊಳ್ಳುತ್ತಾರೆ.
ಜಿಲ್ಲಾ ಪಂಚಾಯತ್ ಒಟ್ಟು 36 ಸದಸ್ಯ ಬಲ ಹೊಂದಿದ್ದು ಈಗ ಪುನರ್ ವಿಂಗಡಣೆಯಿಂದಾಗಿ ಪಂಚಾಯತ್ನ ಬಲ 42 ಕ್ಕೆ ಏರಿಕೆ ಕಂಡಿದೆ.
ಇನ್ನು ಈ ಬಗ್ಗೆ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿರುವ ಜಿ.ಪಂ.ನ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ''ಆಡಳಿತಾವಧಿಯು ಫಲಪ್ರದವಾಗಿ ಕೊನೆಯಾಗಿದೆ ಎಂಬುದು ತೃಪ್ತಿದಾಯಕ. ಜಿಲ್ಲೆಯ ಅಭಿವೃದ್ದಿಗಾಗಿ ಆಡಳಿತ ಪಕ್ಷ, ಪ್ರತಿಪಕ್ಷ ಜೊತೆಯಾಗಿ ಕಾರ್ಯನಿರ್ವಹಿಸಿದೆ. ಒಂದಾಗಿ ಕಾರ್ಯನಿರ್ವಹಿಸಿದ ಫಲವಾಗಿ ಜಿ.ಪಂ.ನ ಅಭಿವೃದ್ದಿ ಕಾರ್ಯಗಳ ಅನುಷ್ಠಾನವು ಯಶಸ್ವಿಯಾಗಿದೆ. ರಾಷ್ಟ್ರಮಟ್ಟದಲ್ಲೂ ಗುರುತಿಸಿಕೊಂಡಿರುವ ಜಿಲ್ಲಾ ಪಂಚಾಯತ್ ನಮ್ಮ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಆಗಿದೆ'' ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಹಾಗೆಯೇ ''ನಮ್ಮ ಜಿ. ಪಂ. ಕಾರ್ಯಗಳಿಗೆ ಜಿಲ್ಲೆಯ ಸಂಸದರು, ಸಚಿವರು, ಶಾಸಕರು ನೆರವು ನೀಡಿದ್ದಾರೆ. ಅಧಿಕಾರಿಗಳು, ಸಿಬ್ಬಂದಿಗಳೂ ಕೂಡಾ ಆಡಳಿತಕ್ಕೆ ಸಹಕಾರ ನೀಡಿದ್ದಾರೆ'' ಎಂದು ಹೇಳಿದ್ದಾರೆ.
ಇನ್ನು ಜಿಲ್ಲಾ ಪಂಚಾಯತ್ನ ಆಡಳಿತ ಅವಧಿ ಮುಕ್ತಾಯ ಆಗುವುದರ ಒಳಗೆ ಮುಂದಿನ ಅವಧಿಯ ಚುನಾವಣೆ ನಡೆಯಬೇಕು. ಈ ಹಿನ್ನೆಲೆ ರಾಜ್ಯ ಚುನಾವಣಾ ಆಯೋಗ ಅಗತ್ಯ ಸಿದ್ದತೆಗಳನ್ನು ನಡೆಸಿತ್ತು. ಆದರೆ ಕೊರೊನಾ ಕಾರಣದಿಂದಾಗಿ ಎಲ್ಲಾ ಚುನಾವಣೆಗಳನ್ನು ಆರು ತಿಂಗಳು ನಡೆಸದಿರಲು ರಾಜ್ಯ ಸರ್ಕಾರ ಚುನಾವಣಾ ಆಯೋಗಕ್ಕೆ ಶಿಫಾರಸ್ಸು ಮಾಡಿದ್ದು ಚುನಾವಣೆ ಆರು ತಿಂಗಳು ವಿಳಂಬವಾಗುವ ಸಾಧ್ಯತೆಯಿದೆ. ಏತನ್ಮಧ್ಯೆ ಕೆಲವೆಡೆ ಮಂಗಳವಾರ ನಿಗದಿಯಾಗಿದ್ದ ಚುನಾವಣೆಗಳು ನಡೆಯುತ್ತಿದೆ.
ಇನ್ನು ಮೇ 10 ರ ಒಳಗೆ ಜಿಲ್ಲೆಯ ಎಲ್ಲಾ 7 ತಾಲೂಕು ಪಂಚಾಯತ್ಗಳ ಚುನಾವಣಾ ಅವಧಿ ಕೂಡಾ ಕೊನೆಯಾಗಲಿದೆ. ಸುಳ್ಯ ತಾ. ಪಂ. ಅವಧಿ ಮೇ 5 ಕ್ಕೆ, ಮಂಗಳೂರು, ಕಡಬ, ಪುತ್ತೂರು, ಮೂಡುಬಿದರೆ ತಾ.ಪಂ. ನ ಅವಧಿ ಮೇ.7 ರಂದು ಹಾಗೂ ಬೆಳ್ತಂಗಡಿ, ಬಂಟ್ವಾಳ ತಾ.ಪಂ. ನ ಅವಧಿ ಮೇ. 10 ಕ್ಕೆ ಕೊನೆಯಾಗಲಿದೆ.
ಇನ್ನು ಜಿಲ್ಲೆಗೆ ಹೊಸದಾಗಿ ಉಳ್ಳಾಲ ಹಾಗೂ ಮುಲ್ಕಿ ತಾಲೂಕು ಪಂಚಾಯತ್ ಸೇರ್ಪಡೆಯಾಗಿದ್ದು ಈ ಮೂಲಕ ಜಿಲ್ಲೆಯಲ್ಲಿ ಪ್ರಸ್ತುತ ಒಟ್ಟು 9 ತಾಲೂಕು ಪಂಚಾಯತ್ಗಳು ಇದೆ. ಆದರೆ ಸದಸ್ಯರ ಸಂಖ್ಯೆ 136 ರಿಂದ 118 ಕ್ಕೆ ಇಳಿಕೆ ಕಂಡಿದೆ. 2016 ರ ಚುನಾವಣಾ ಅವಧಿಯಲ್ಲಿ ಜಿಲ್ಲೆಯಲ್ಲಿ 5 ತಾಲೂಕು ಪಂಚಾಯತ್ ಮಾತ್ರ ಇತ್ತು.