ಮಂಗಳೂರು, ಏ 27 (DaijiworldNews/MS): ಕೊರೊನಾ ಹಿನ್ನಲೆಯಲ್ಲಿ ಮಂಗಳವಾರ ರಾತ್ರಿಯಿಂದ ರಾಜ್ಯಾದ್ಯಂತ ಲಾಕ್ ಡೌನ್ ಘೋಷಿಸಿರುವ ಸುದ್ದಿ ತಿಳಿಯುತ್ತಿದ್ದಂತೆ ಬೆಂಗಳೂರು ಸೇರಿದಂತೆ ರಾಜ್ಯದ ಇತರ ಜಿಲ್ಲೆಗಳಲ್ಲಿ ಕೆಲಸ ಮಾಡುತ್ತಿರುವ ಕರಾವಳಿ ಮಂದಿ ಧಿಡೀರ್ ತಾಯ್ನಾಡಿಗೆ ಮರಳುತ್ತಿದ್ದಾರೆ.
ಸಾಂದರ್ಭಿಕ ಚಿತ್ರ
ಇದನ್ನೇ ನೆಪವಾಗಿಸಿದ ಖಾಸಗಿ ಬಸ್ ಗಳು ಟಿಕೆಟ್ ದರವನ್ನು ದುಪ್ಪಟ್ಟು ಮಾಡಿದೆ. ಬೆಂಗಳೂರಿನಿಂದ ಮಂಗಳೂರಿಗೆ ಸಾಮಾನ್ಯವಾಗಿ 600ರೂ. ಇರುತ್ತಿದ್ದ ಬಸ್ ದರ ಸೋಮವಾರ 1600ರ ಗಡಿ ದಾಟಿತ್ತು. ಬೆಂಗಳೂರಿನಿಂದ ಕುಂದಾಪುರಕ್ಕೆ ಸಾಮಾನ್ಯವಾಗಿ ಇರುತ್ತಿದ್ದ ಸುಮಾರು 900ರೂ ದರ ಸೋಮವಾರ 1800 ಏರಿತ್ತು.
ಇದಲ್ಲದೇ ಕೆಲವು ಬಸ್ ಗಳಲ್ಲಿ ಬೇಕಾಬಿಟ್ಟಿ ಟಿಕೆಟ್ ದರ ವಸೂಲಿ ಮಾಡಲಾಗಿದೆ ಎಂದು ಪ್ರಯಾಣಿಕರು ಆರೋಪಿಸಿದ್ದಾರೆ.
ಖಾಸಗಿ ಬಸ್ ನೊಂದಿಗೆ ಕೆ.ಎಸ್. ಆರ್.ಟಿ.ಸಿ ವಿಶೇಷ ಬಸ್ ಗಳ ದರ ಏರಿಕೆ ಮಾಡಲಾಗಿತ್ತು.ಮುಂದಿನ 14 ದಿನಗಳವರೆಗೆ ಲಾಕ್ ಡೌನ್ ಮಾದರಿಯಲ್ಲಿ ನಿರ್ಬಂಧವಿರುವ ಬಗ್ಗೆ ಸೋಮವಾರ ಮಧ್ಯಾಹ್ನವೇ ಮಾಹಿತಿ ಪಡೆದ ಕರಾವಳಿಯ ಜನರು ತಾವಿದ್ದ ಬೆಂಗಳೂರು ಸೇರಿದಂತೆ ಇತರ ಭಾಗಗಳಿಂದ ಹಿಂತಿರುಗುವ ಬಗ್ಗೆ ನಿರ್ಧಾರ ಮಾಡಿದರು.ಹೀಗಾಗಿ ಹಲವು ಜನರು ರಾಜಧಾನಿಯಿಂದ ಮಧ್ಯಾಹ್ನವೇ ಬಸ್ ಮೂಲಕ ಕರಾವಳಿಗೆ ಆಗಮಿಸಿದ್ದಾರೆ. ಸಂಜೆಯ ವೇಳೆಗಾಗಲೇ ಹಲವು ಬಸ್ ಗಳಲ್ಲಿ ಜನರು ವಾಪಸಾಗಿದ್ದಾರೆ. ರಾತ್ರಿ ವೇಳೆಗೆ ಬಸ್ ಗಳ ಸಂಖ್ಯೆ ದುಪ್ಪಟ್ಟಾಗಿದೆ.
ಮಂಗಳವಾರ ಸಂಚಾರಕ್ಕೆ ಅವಕಾಶ ಇರುವ ಹಿನ್ನೆಲೆಯಲ್ಲಿ ಮಂಗಳವಾರ ಬಹುಸಂಖ್ಯೆಯಲ್ಲಿ ಜನರು ಕರಾವಳಿಗೆ ಆಗಮಿಸುವ ನಿರೀಕ್ಷೆಯಿದೆ ಇದೇ ವೇಳೆ ಬಸ್ ದರ ದುಬಾರಿಯಾದ ಕಾರಣ ಹಲವು ಮಂದಿ ವಾಹನಗಳನ್ನು ಬಾಡಿಗೆಗೆ ಪಡೆದು ಕರಾವಳಿಗೆ ಆಗಮಿಸಿದ್ದಾರೆ.