ಕುಂಬಳೆ, ಏ. 26 (DaijiworldNews/SM): ಸ್ನಾನಕ್ಕಿಳಿದ ಮೂವರು ಯುವಕರು ನದಿಯಲ್ಲಿ ಮುಳುಗಿ ಮೃತಪಟ್ಟ ಘಟನೆ ಸೋಮವಾರ ಸಂಜೆ ಕುಂಬಳೆ ಸಮೀಪದ ಆರಿಕ್ಕಾಡಿಯಲ್ಲಿ ನಡೆದಿದೆ.
ಪುತ್ತೂರು ನಿವಾಸಿಗಳಾದ ಕೀರ್ತನ್(19), ಕಾರ್ತಿಕ್(18), ನಿರಂಜನ್(15) ಮೃತಪಟ್ಟವರು. ಸಂಜೆ ನಾಲ್ಕು ಗಂಟೆ ಸುಮಾರಿಗೆ ಶಿರಿಯ ನದಿಯ ಆರಿಕ್ಕಾಡಿಯಲ್ಲಿ ಈ ದುರ್ಘಟನೆ ನಡೆದಿದೆ.
ಒಟ್ಟು 13 ಮಂದಿ ನದಿ ಬದಿಗೆ ಬಂದಿದ್ದು, ಈ ಪೈಕಿ ಮೂವರು ಸ್ನಾನಕ್ಕಿಳಿದ ಸಂದರ್ಭದಲ್ಲಿ ಮುಳುಗಿದ್ದಾರೆ. ಓರ್ವ ಮುಳುಗುವುದನ್ನು ಕಂಡ ಇತರ ಇಬ್ಬರು ರಕ್ಷಿಸಲೆತ್ನಿಸಿದಾಗ ಮೂವರು ಮುಳುಗಿದ್ದಾರೆ. ಜೊತೆಗಿದ್ದವರ ಬೊಬ್ಬೆ ಕೇಳಿ ಸ್ಥಳೀಯರು ಹಾಗೂ ಮೀನುಗಾರರು ಮತ್ತು ಉಪ್ಪಳದಿಂದ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಶೋಧ ನಡೆಸಿ ಇಬ್ಬರ ಮೃತದೇಹವನ್ನು ಮೇಲಕ್ಕೆತ್ತಿದ್ದಾರೆ.
ಇನ್ನೋರ್ವ ನಾಪತ್ತೆಯಾಗಿದ್ದಾನೆ. ರಾತ್ರಿ ತನಕ ಶೋಧ ನಡೆಸಿದರೂ ಪತ್ತೆಯಾಗಲಿಲ್ಲ. ನಾಳೆ ಮತ್ತೆ ಶೋಧ ಮುಂದುವರಿಯಲಿದೆ. ಕುಂಬಳೆಯಲ್ಲಿ ನಡೆದ ವಿವಾಹದಲ್ಲಿ ಪಾಲ್ಗೊಳ್ಳಲು ಬಂದಿದ್ದರು ಎನ್ನಲಾಗಿದೆ.
ಕುಂಬಳೆ ಪೊಲೀಸರು ಸ್ಥಳಕ್ಕಾಗಮಿಸಿ ಮಹಜರು ನಡೆಸಿದ್ದಾರೆ.