ಮಂಗಳೂರು, ಎ.26 (DaijiworldNews/PY): ಕಳೆದ ಬಾರಿ ಲಾಕ್ ಡೌನ್ ಆದಾಗ ಮದ್ಯ ಸಿಗದೆ ಒದ್ದಾಡಿದ್ದ ಮದ್ಯಪ್ರಿಯರು, ಈ ಬಾರಿಯೂ ಹಾಗೆ ಆಗಿಬಿಡುತ್ತೆ ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಅತ್ತಕಡೆ ಲಾಕ್ ಡೌನ್ ಘೋಷಣೆ ಮಾಡುತ್ತಿದ್ದಂತೆ ಇತ್ತ ಕಡೆ ಎದ್ದು ಬಿದ್ದು ಮದ್ಯದಂಗಡಿಗಳಿಗೆ ಪಾನಪ್ರಿಯರು ದಾಂಗುಡಿ ಇಡುತ್ತಿದ್ದಾರೆ.
ನಗರದ ಬಿಜೈ ಬಳಿಯ ವೈನ್ ಗೇಟ್ ಹಾಗೂ ಇತರ ಕಡೆಗಳಲ್ಲಿ ಮದ್ಯಪ್ರಿಯರು ಒಮ್ಮೆಲೆ ವೈನ್ ಶಾಪ್ಗಳಿಗೆ ಮುಗಿಬಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಈ ನಡುವೆ ಮದ್ಯಪ್ರಿಯರಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಿದ್ದು, ಮದ್ಯ ಪಾರ್ಸೆಲ್ ತೆಗೆದುಕೊಂಡು ಹೋಗಲು ಅವಕಾಶ ನೀಡಿದೆ. ನಗರ ಹೊರತಾಗಿ ಬೇರೆ ಜಿಲ್ಲೆಗಳಲ್ಲಿ ಈ ಪಾರ್ಸೆಲ್ ಸೇವೆ ಇಲ್ಲದ ಕಾರಣ ಕೆಲವು ಕಡೆಗಳಲ್ಲಿ ಪಾನಪ್ರಿಯರು ಮದ್ಯದ ಅಂಗಡಿ ಮುಂದೆ ಸಾಲುಗಟ್ಟಿ ನಿಂತಿದ್ದಾರೆ.
ಕಳೆದ ಬಾರಿ ಏಕಾಏಕಿ ಲಾಕ್ಡೌನ್ ಜಾರಿ ಮಾಡಿದ್ದು, ಮದ್ಯದಂಗಡಿಗಳು ತೆರೆಯದೇ ಇದ್ದ ಕಾರಣ ಪಾನಪ್ರಿಯರು ಮದ್ಯಕ್ಕಾಗಿ ಪರದಾಡಿದ್ದರು. ಈ ಬಾರಿ ಅದೇ ರೀತಿ ಆಗಬಾರದು ಎಂದು ಮೊದಲೇ ಮದ್ಯ ಸ್ಟಾಕ್ ಮಾಡಲು ಮುಂದಾಗಿದ್ದಾರೆ.