ಕುಂದಾಪುರ, ಏ 26(DaijiworldNews/MS): ಇಲ್ಲಿನ ಶಾಸ್ತ್ರೀ ಸರ್ಕಲ್ ಬಳಿಯ ರಾಷ್ಟ್ರೀಯ ಹೆದ್ದಾರಿ 66 ರಲ್ಲಿನ ಫ್ಲೈಓವರ್ ಗೆ ಕೊನೆಗೂ ಮುಕ್ತಿ ದೊರಕಿದೆ. ಯಾವುದೇ ಪೂರ್ವ ಯೋಜಿತ ಕಾರ್ಯಕ್ರಮಗಳಿಲ್ಲದೆ ಭಾನುವಾರ ಸಂಜೆಯ ಬಳಿಕ ಫ್ಲೈಓವರ್ ಮೇಲೆ ಅಧಿಕೃತ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡುವ ಮೂಲಕ ಫ್ಲೈಓವರ್ ಲೋಕಾರ್ಪಣೆಗೊಂಡಿದೆ.
ಕಳೆದ ಕೆಲವು ವರ್ಷಗಳಿಂದ ಆಮೆ ನಡಿಗೆಯಲ್ಲಿ ಸಾಗುತ್ತಿದ್ದ ಫ್ಲೈಓವರ್ ಕಾಮಗಾರಿ ವಿಳಂಬದ ಕುರಿತಂತೆ ಅನೇಕ ಪ್ರತಿಭಟನೆಗಳು ನಡೆದಿತ್ತು. ಪುರಸಭೆ, ತಾಲ್ಲೂಕು ಪಂಚಾಯಿತಿ ಹಾಗೂ ಕೆಡಿಪಿ ಸಭೆಗಳಲ್ಲಿಯೂ ಪ್ರಸ್ತಾಪವಾಗಿತ್ತು. ಕಾಮಗಾರಿಗೆ ಶೀಘ್ರದಲ್ಲಿ ಮುಕ್ತಾಯ ಮಾಡುವಂತೆ ಜಿಲ್ಲಾಡಳಿತ ಹಾಗೂ ಉಪವಿಭಾಗಾಧಿಕಾರಿಗಳು ಎಚ್ಚರಿಕೆಯನ್ನು ನೀಡಿದ್ದರು.
ಫ್ಲೈಓವರ್ ಸಂಚಾರಕ್ಕೆ ಮುಕ್ತವಾಗಿರುವುದನ್ನು ಸ್ವಾಗತಿಸಿರುವ ಸಾರ್ವಜನಿಕರು ಸಾಮಾಜಿಕ ಜಾಲ ತಾಣಗಳಲ್ಲಿ ಸಂಭ್ರಮ ಹಂಚಿಕೊಳ್ಳುತ್ತಿದ್ದಾರೆ.
ಅನೇಕ ವರ್ಷಗಳ ಬಳಿಕ ಕುಂದಾಪುರದ ಶಾಸ್ತ್ರಿ ಸರ್ಕಲ್ ಬಳಿ ಇರುವ ರಾಷ್ಟ್ರೀಯ ಹೆದ್ದಾರಿ ಫ್ಲೈಓವರ್ ನಲ್ಲಿ ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿರುವುದು ಒಂದು ಸಂತೋಷದ ವಿಷಯ ,ಆದರೆ ಇನ್ನುಳಿದ ಅನೇಕ ಕೆಲಸಗಳನ್ನು ಕೂಡಲೇ ಪೂರ್ಣಗೊಳಿಸಬೇಕು ಎನ್ನುವ ವಿಷಯನ್ನು ಹೆದ್ದಾರಿ ಹೋರಾಟ ಸಮಿತಿಯಿಂದ ಒತ್ತಡವನ್ನು ಹಾಕಿದ್ದೇವೆ ,ಈ ಭಾಗದ ಸಹಾಯಕ ಕಮಿಷನರ್ ಅವರು ನಮಗೆ ಎಲ್ಲವನ್ನು ಸರಿಪಡಿಸುವ ಭರವಸೆಯನ್ನು ನೀಡಿದ್ದಾರೆ ಎಂದು ಹೆದ್ದಾರಿ ಹೋರಾಟ ಸಮಿತಿಯ ಬಿ. ಕಿಶೋರ್ ಕುಮಾರ್ ಹಾಗೂ ರಾಜೇಶ್ ಕಾವೇರಿ ಪ್ರತಿಕ್ರಿಯಿಸಿದ್ದಾರೆ.