ಕಾರ್ಕಳ,ಏ 26(DaijiworldNews/MS): ಅಪ್ರಾಪ್ತ ವಯಸ್ಸಿನ ಬಾಲಕಿ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡು ಮೂಲದ ರಾಘವೇಂದ್ರ (25) ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಕುಕ್ಕುಂದೂರು ಗ್ರಾಮದ ಜಾರ್ಕಳದ 15ರ ಹರೆಯದ ಬಾಲಕಿ ನಾಪತ್ತೆಯಾದ ಕುರಿತು ಆಕೆಯ ಹೆತ್ತವರು 2020ರ ನವಂಬರ್ ನಲ್ಲಿ ಕಾರ್ಕಳ ನಗರ ಠಾಣೆಯಲ್ಲಿ ದೂರು ನೀಡಿದ್ದರು.ಗೆಳತಿಯ ಮನೆಗೆ ಹೋಗಿ ಬರುವುದಾಗಿ ಹೇಳಿದ ಬಾಲಕಿ ನಾಪತ್ತೆಯಾಗಿದ್ದಳು. ನೆರೆಮನೆಯ ರಾಘವೇಂದ್ರ ಅಪಹರಿಸಿದ್ದಾಗಿ ದೂರಿನಲ್ಲಿ ತಿಳಿಸಲಾಗಿತ್ತು.
ತನಿಖೆ ನಡೆಸುತ್ತಿದ್ದ ಪೊಲೀಸರಿಗೆ ಆಕೆ ಪಿರಿಯಾಪಟ್ಟಣದ ಚಾಕೂರು ಬಳಿ ರಾಘವೇಂದ್ರನ ಜೊತೆ ಇರುವ ಬಗ್ಗೆ ಮಾಹಿತಿ ದೊರಕಿತ್ತು. ಕಾರ್ಕಳ ನಗರ ಠಾಣಾ ಪಿಎಸ್ಐ ಮಧು ಬಿ ಅವರ ಮಾರ್ಗದರ್ಶನದಲ್ಲಿ ಎ.ಎಸ್.ಐ ರಾಜೇಶ್ , ಕಾನ್ಸ್ಟೇಬಲ್ ರಾಘವೇಂದ್ರ , ಸಂಜಯ್ , ಗೀತಾ ಅವರು ಪಿರಿಯಪಟ್ಟಣಕ್ಕೆ ತೆರಳಿ ಆರೋಪಿಯ ಪತ್ತೆ ಹಚ್ಚಿ ಯುವತಿಯ ಹೇಳಿಕೆ ಆಧಾರಿಸಿ ಪ್ರಕರಣದಡಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.