ಮಂಗಳೂರು, ಏ.25 (DaijiworldNews/SM): ರಾಜ್ಯದಲ್ಲಿ ಶುಕ್ರವಾರ ರಾತ್ರಿ 9 ಗಂಟೆಯಿಂದ ಜಾರಿಗೆ ಬಂದಿರುವ ವೀಕೆಂಡ್ ಕರ್ಫ್ಯೂ ಸೋಮವಾರ ಬೆಳಿಗ್ಗೆ ಆರು ಗಂಟೆಯ ತನಕ ಮುಂದುವರೆಯಲಿದೆ. ಸೋಮವಾರ ಬೆಳಿಗ್ಗೆ ಆರು ಗಂಟೆಯ ಬಳಿಕ ಮತ್ತೆ ಎಂದಿನಂತೆ ಜನಜೀವನಕ್ಕೆ ಅವಕಾಶ ಕಲ್ಪಿಸಲಾಗಿದೆ.
ಶನಿವಾರ ಹಾಗೂ ರವಿವಾರದಂದು ಕರಾವಳಿ ಸಂಪೂರ್ಣ ಸ್ತಬ್ಧಗೊಂಡಿತ್ತು. ಬೆಳಿಗ್ಗಿನ ಸಮಯದಲ್ಲಿ ಅಗತ್ಯ ಸೇವೆಗಳಿಗೆ ಮಾತ್ರಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಅದರಂತೆ ಜಿಲ್ಲೆಯ ಜನತೆ ಸರಕಾರದ ಮಾರ್ಗಸೂಚಿಗಳನ್ನು ಪಾಲಿಸಿ ಸರಕಾರದೊಂದಿಗೆ ಸಹಕರಿಸಿದರು.
ಇನ್ನು ಸೋಮವಾರದಿಂದ ಅಗತ್ಯ ಸೇವೆಗಳಿಗೆ ವಿನಾಯಿತಿ ನೀಡಲಾಗಿದೆ. ಅಲ್ಲದೆ, ಆಟೋ, ಬಸ್, ವಾಹನ ಸಂಚಾರ ಕೂಡ ಇರಲಿದೆ. ಸಾರ್ವಜನಿಕರಿಗೆ ತಮ್ಮ ತಮ್ಮ ಕೆಲಸ ಕಾರ್ಯಗಳಿಗೆ ತೆರಳಲು ಅವಕಾಶವಿದೆ. ಆಸ್ಪತ್ರೆಗಳು, ಮೆಡಿಕಲ್ ಸೇವೆಗಳು ಲಭ್ಯವಿದೆ. ಅನಗತ್ಯ ಸೇವೆಗಳಿಗೆ, ಅನಗತ್ಯ ಓಡಾಟಕ್ಕೆ ಅವಕಾಶವಿಲ್ಲ ಎಂದು ತಿಳಿಸಲಾಗಿದೆ. ರಾತ್ರಿ 9 ಗಂಟೆಯ ತನಕ ವಿನಾಯಿತಿ ಇರಲಿದ್ದು, 9 ಗಂಟೆಯ ಬಳಿಕ ರಾತ್ರಿ ಕರ್ಫ್ಯೂ ಜಾರಿಗೆ ಬರಲಿದೆ.