ಮಂಗಳೂರು, ಏ. 25 (DaijiworldNews/SM): ನಗರ ಕಮಿಷನರ್ ಶಶಿಕುಮಾರ್ ಅವರ ಹೆಸರಿನಲ್ಲಿ ಕಿಡಿಗೇಡಿಗಳು ನಕಲಿ ಫೇಸ್ ಬುಕ್ ಖಾತೆ ತೆರೆದಿದ್ದಾರೆ. ದುಷ್ಕರ್ಮಿಗಳು ಈ ರೀತಿಯ ಕೃತ್ಯದಲ್ಲಿ ಕೈ ಜೋಡಿಸಿದ್ದು, ಕಮಿಷನರ್ ಹೆಸರಿನಲ್ಲಿ ಫೇಸ್ ಬುಕ್ ನಲ್ಲಿ ನಕಲಿ ಖಾತೆ ತೆರೆದು ವಂಚಿಸಲು ಮುಂದಾಗಿದ್ದಾರೆ.
ಇನ್ನು ನಕಲಿ ಖಾತೆಯ ಬಗ್ಗೆ ಮಾಹಿತಿ ತಿಳಿದಾಕ್ಷಣ ಕಮಿಷನರ್ ಪ್ರತಿಕ್ರಿಯೆ ನೀಡಿದ್ದಾರೆ. ತನ್ನ ಹೆಸರಿನಲ್ಲಿ ನಕಲಿ ಖಾತೆ ತೆರೆಯಲಾಗಿದೆ. ಸಾರ್ವಜನಿಕರು ಎಚ್ಚರದಿಂದಿರಬೇಕೆಂದು ಮನವಿ ಮಾಡಿದ್ದಾರೆ. ತಮ್ಮ ಅಸಲಿ ಫೇಸ್ ಬುಕ್ ಖಾತೆಯ ಮೂಲಕವೇ ಕಮಿಷನರ್ ಮನವಿ ಮಾಡಿಕೊಂಡಿದ್ದಾರೆ.
ದುಷ್ಕರ್ಮಿಗಳು ಅಸಲಿ ಅಕೌಂಟನ್ನು ಯತಾವತ್ತಾಗಿ ಒಂದೇ ಫೊಟೋ, ವಿವರಗಳನ್ನು ಬಳಸಿ ನಕಲಿ ಮಾಡಿದ್ದಾರೆ. ನಕಲಿ ಖಾತೆಯ ಬಗ್ಗೆ ಎಲ್ಲರೂ ಜಾಗರೂಕರಾಗಿರಬೇಕು. ಹಣ ವರ್ಗಾಯಿಸಲು ವಿನಂತಿಸಲು ಆರಂಭಿಸಬಹುದು. ಅಂತಹ ವಿನಂತಿಗಳ ಬಗ್ಗೆ ಎಲ್ಲರೂ ಜಾಗರೂಕರಾಗಿರಿ ಎಂಬುವುದಾಗಿ ಮಂಗಳೂರು ಕಮಿಷನರ್ ಎನ್. ಶಶಿಕುಮಾರ್ ಮನವಿ ಮಾಡಿಕೊಂಡಿದ್ದಾರೆ.