ಬೆಳ್ತಂಗಡಿ, ಏ.25 (DaijiworldNews/MB) : ಇಲ್ಲಿನ ಪುಂಜಾಲಕಟ್ಟೆಯಲ್ಲಿ ಬಿಜೆಪಿಯ ದಕ್ಷಿಣ ಕನ್ನಡ ಜಿಲ್ಲಾ ಮುಖಂಡ ಹಾಗೂ ಜಿಲ್ಲಾ ಪಂಚಾಯತ್ ಸದಸ್ಯ ತುಂಗಪ್ಪ ಬಂಗೇರ ಅವರ ನೇತೃತ್ವದಲ್ಲಿ ರಾಜ್ಯ ಸರ್ಕಾರ ಘೋಷಿಸಿದ ವೀಕೆಂಡ್ ಕರ್ಫ್ಯೂ ಮತ್ತು ಇತರ ಕೊರೊನಾ ನಿಯಮಗಳನ್ನು ಉಲ್ಲಂಘಿಸಿ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಏಪ್ರಿಲ್ 25 ರ ಭಾನುವಾರ ನಡೆಸಲಾಗಿದೆ.
ಕೊರೊನಾ ಕರ್ಫ್ಯೂ ಹಾಗೂ ಕೊರೊನಾ ಮಾರ್ಗಸೂಚಿಯನ್ನು ಉಲ್ಲಂಘಿಸಿದ ಜಿಲ್ಲಾ ಪಂಚಾಯತ್ ಸದಸ್ಯದ ಮೇಲೆ ಹಾಗೂ ಪೊಲೀಸರ ವಿರುದ್ದ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವೀಕೆಂಡ್ ಕರ್ಫ್ಯೂ ನಡುವೆಯೇ ಈ ವಿವಾಹ ಕಾರ್ಯಕ್ರಮದಲ್ಲಿ ನೂರಾರು ಜನರು ಸೇರಿದ್ದರು. ಹಾಗೆಯೇ ಕಾರ್ಯಕ್ರಮದಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಂಡಿಲ್ಲ ಎಂದು ಆರೋಪಿಸಲಾಗಿದೆ.
ಸದ್ಯ ಈ ಸಾಮೂಹಿಕ ವಿವಾಹ ಕಾರ್ಯಕ್ರಮದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ದೇಶದಾದ್ಯಂತ ಕೊರೊನಾ ಸೋಂಕು ತೀವ್ರತರವಾಗಿ ಹರಡುತ್ತಿದೆ. ದಿನದಿಂದ ದಿನಕ್ಕೆ ಕೊರೊನಾ ಪ್ರಮಾಣವು ಭಾರೀ ಪ್ರಮಾಣದಲ್ಲಿ ಏರಿಕೆ ಕಾಣುತ್ತಿದೆ. ಆಕ್ಸಿಜನ್ ಕೊರತೆಯಿಂದ ಹಲವಾರು ಮಂದಿ ಕೊರೊನಾ ಸೋಂಕಿತರು ಸಾವನ್ನಪ್ಪಿದ ಘಟನೆಯೂ ಕೂಡಾ ನಡೆದಿದೆ. ಏತನ್ಮಧ್ಯೆ ನೂರಾರು ಜನರನ್ನು ಸೇರಿಸಿ ವಿವಾಹ ಕಾರ್ಯಕ್ರಮವನ್ನು ನಡೆಸಿದ್ದರ ಹಿನ್ನೆಲೆ ಸಾಮಾಜಿಕ ಮಾಧ್ಯಮದಲ್ಲಿ ಹಲವು ಮಂದಿ ಜಿಲ್ಲಾ ಪಂಚಾಯತ್ ಸದಸ್ಯ ತುಂಗಪ್ಪ ಬಂಗೇರ ಅವರ ವಿರುದ್ದ ತೀವ್ರ ಟೀಕೆ ಮಾಡಿದ್ದಾರೆ.
ಇನ್ನು ಈ ಕಾರ್ಯಕ್ರಮವನ್ನು ಪುಂಜಾಲಕಟ್ಟೆಯ ಪೊಲೀಸ್ ಠಾಣೆಯ ಸಮೀಪದಲ್ಲೇ ನಡೆಸಲಾಗಿದೆ ಎಂದು ಕೂಡಾ ಹೇಳಲಾಗಿದೆ. ನೂರಾರು ಜನರು ಸೇರಿ ಕೊರೊನಾ ಉಲ್ಲಂಘನೆಯಾಗುತ್ತಿದ್ದರೂ ಕೂಡಾ ಪೊಲೀಸರು ಮಧ್ಯಪ್ರವೇಶ ಮಾಡಿಲ್ಲ ಎಂದು ದೂರಲಾಗಿದೆ. ಈ ಸಾಮೂಹಿಕ ವಿವಾಹಕ್ಕೆ ಯಾರು ಅನುಮತಿ ನೀಡಿದವರು ಎಂದು ಪ್ರಶ್ನಿಸಿರುವ ಸ್ಥಳೀಯರು, ಸಾಮಾನ್ಯ ಜನರ ವಿರುದ್ದ ಪ್ರಕರಣ ದಾಖಲಿಸಿ, ದಂಡ ವಿಧಿಸುವ ಪೊಲೀಸರು ಈ ವಿವಾಹದ ವಿಚಾರದಲ್ಲಿ ಸುಮ್ಮನಿರುವುದಕ್ಕೆ ಪೊಲೀಸರ ವಿರುದ್ದ ಕಿಡಿಕಾರಿದ್ದಾರೆ.