ಮಂಗಳೂರು, ಎ.25 (DaijiworldNews/PY): ಕೊರೊನಾ ಸೋಂಕು ನಿಯಂತ್ರಣದ ಉದ್ದೇಶದಿಂದ ಎಪ್ರಿಲ್ 25ರ ರವಿವಾರವೂ ವಾರಾಂತ್ಯದ ಕರ್ಫ್ಯೂ ಮುಂದುವರೆದಿದ್ದು, ಕರಾವಳಿಯ ಜನತೆ ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆ.
ಅಂಗಡಿ-ಮುಂಗಟ್ಟುಗಳು ಬಂದ್ ಆಗಿದ್ದು, ಜನನಿಬಿಡ ಸ್ಥಳಗಳು ಬಿಕೋ ಎನ್ನುತ್ತಿತ್ತು. ಅಗತ್ಯ ವಸ್ತುಗಳು ಹಾಗೂ ಮೆಡಿಕಲ್ಗಳು ಮಾತ್ರವೇ ತೆರೆದಿದ್ದವು.
ದಿನಸಿ ಹಾಗೂ ಇತರೆ ಅಗತ್ಯ ವಸ್ತುಗಳನ್ನು ಖರೀದಿ ಮಾಡಲು ಜನರು ಮಾರುಕಟ್ಟೆಯಲ್ಲಿ ಸೇರಿರುವ ದೃಶ್ಯ ಕಂಡು ಬಂತು. ಕರ್ಫ್ಯೂ ಸಮಯದಲ್ಲಿ ಬೆಳಗ್ಗೆ 6 ಗಂಟೆಯಿಂದ 10 ಗಂಟೆಯವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶವಿದೆ.
ಕೊರೊನಾ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸಬೇಕು ಎನ್ನುವ ಸೂಚನೆ ಇದ್ದರೂ ಕೂಡಾ, ಹಲವಾರು ಮಂದಿ ಮಾಸ್ಕ್ಗಳನ್ನು ಸರಿಯಾದ ರೀತಿಯಲ್ಲಿ ಧರಿಸಿರಲಿಲ್ಲ. ಇನ್ನೂ ಕೆಲವರೂ ಮಾಸ್ಕ್ ಅನ್ನೇ ಧರಿಸಿರಲಿಲ್ಲ.
ದಿನಸಿ, ಹಣ್ಣು-ತರಕಾರಿ, ಹಾಲು, ಮಾಂಸ ಸೇರಿದಂತೆ ಅಗತ್ಯ ವಸ್ತುಗಳ ಅಂಗಡಿಗಳನ್ನು ಹೊರತುಪಡಿಸಿ, ಉಳಿದ ಎಲ್ಲಾ ವಾಣಿಜ್ಯ ಸಂಸ್ಥೆಗಳು ಸೋಮವಾರ ಬೆಳಗ್ಗೆ ತನಕ ಬಂದ್ ಆಗಿರಲಿವೆ. ಇನ್ನು ಕೆಲವೇ ಹೊಟೇಲ್ಗಳು ತೆರೆದಿದ್ದು, ಪಾರ್ಸೆಲ್ಗೆ ಮಾತ್ರವೇ ಅವಕಾಶ ನೀಡಲಾಗಿದೆ.
ಜನರು ಅನಗತ್ಯವಾಗಿ ಮನೆಯಿಂದ ಹೊರಬಾರದಂತೆ ತಡೆಯಲು ಇಡೀ ಜಿಲ್ಲೆಯಲ್ಲಿ ಪೊಲೀಸ್ ಪಡೆ ನಿಯೋಜಿಸಲಾಗಿದೆ. ನಗರದ ಕಮೀಷನರೇಟ್ ವ್ಯಾಪ್ತಿಯಲ್ಲಿ ಪೊಲೀಸರು 45 ಚೆಕ್ಪೋಸ್ಟ್ಗಳನ್ನು ನಿಯೋಜಿಸಿದ್ದಾರೆ. ಪ್ರತಿ ಚೆಕ್ ಪೋಸ್ಟ್ನಲ್ಲಿ ಸುಮಾರು 5 ರಿಂದ 6 ಪೊಲೀಸರನ್ನು ನಿಯೋಜಿಸಲಾಗಿದೆ. ಅವರು ಎರಡು ಪಾಳಿಯಲ್ಲಿ ಕೆಲಸ ಮಾಡಲಿದ್ದಾರೆ. ಬಂದೋಬಸ್ತ್ಗಾಗಿ ಸುಮಾರು 800 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಮಾಸ್ಕ್ ಧರಿಸದೇ ಕೊರೊನಾ ನಿಯಮವನ್ನು ಉಲ್ಲಂಘಿಸಿದ್ದಕ್ಕಾಗಿ ಕಳೆದ ಒಂದು ವಾರದಲ್ಲಿ ಪೊಲೀಸರು ಸುಮಾರು 1,400 ಪ್ರಕರಣಗಳನ್ನು ದಾಖಲಿಸಿದ್ದಾರೆ.
35 ಮೊಬೈಲ್ ಸ್ಕ್ವಾಡ್ಗಳು ಹಾಗೂ ಕೊರೊನಾ ಮಾರ್ಷಲ್ಗಳನ್ನು ಸಹ ನಿಯೋಜಿಸಲಾಗಿದೆ.