ಬಂಟ್ವಾಳ, ಏ 24 (DaijiworldNews/MS): ಪಾಣೆಮಂಗಳೂರು ಗೂಡಿನಬಳಿಯ ಸೇತುವೆ ಮೇಲಿಂದ ಯುವಕನೊಬ್ಬ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದು, ತಕ್ಷಣ ಎಚ್ಚೆತ್ತ ಸ್ಥಳೀಯರು ಆತನನ್ನು ರಕ್ಷಣೆ ಮಾಡಿದ ಘಟನೆ ಏ.23 ರ ಶುಕ್ರವಾರ ಸಂಜೆ ನಡೆದಿದೆ.
ಆತ್ಮಹತ್ಯೆಗೆ ಯತ್ನಿಸಿದವನನ್ನು ಶ್ರವಣಬೆಳಗೊಳದ ಮೂಲದವನು ಎನ್ನಲಾಗಿದೆ. ಶುಕ್ರವಾರ ಸಂಜೆ ಹೊಸ ನೇತ್ರಾವತಿ ಸೇತುವೆ ಮೇಲಿಂದ ನದಿಗೆ ಹಾರಿದ್ದು, ಇದನ್ನು ಕಂಡ ಸ್ಥಳೀಯರು ತಕ್ಷಣ ಜೀವರಕ್ಷಕ ಗೂಡಿನಬಳಿಯ ಸತ್ತಾರ್ ಮತ್ತವರ ಸ್ನೇಹಿತ ಸಾದಿಕ್ ವಿಚಾರ ತಿಳಿಸಿದ್ದು ತಕ್ಷಣ ಇವರು ನದಿಗೆ ಧುಮುಕಿ ಯುವಕನನ್ನು ಮೇಲೆತ್ತುವಲ್ಲಿ ಯಶಸ್ವಿಯಾಗಿದ್ದಾರೆ.
ಬಳಿಕ ಯುವಕನನ್ನು ಪೊಲೀಸರ ಸಹಾಯದಿಂದ ಬಂಟ್ವಾಳ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ನೀಡಿದ್ದಾರೆ. ನದಿಗೆ ಹಾರಿದ ಯುವಕ ತನ್ನ ಮೊಬೈಲನ್ನು ಸೇತುವೆಯಲ್ಲಿ ಇಟ್ಟು ಹಾರಿದ್ದರಿಂದ ಮೊಬೈಲ್ನ ಸಹಾಯದಿಂದ ಆತನ ಮನೆಯವರನ್ನು ಸಂಪರ್ಕಿಸಿದ್ದಾರೆ. ಬಳಿಕ ಯುವಕ ಸಂಬಂಧಿಕರು ಆಸ್ಪತ್ರೆಗೆ ಆಗಮಿಸಿದ್ದು ಅವರ ಜೊತೆ ಕಳುಹಿಸಿ ಕೊಡಲಾಗಿದೆ.