ಬೆಳ್ಮಣ್ , ಏ.24 (DaijiworldNews/HR): ವೀಕೆಂಡ್ ಕರ್ಫ್ಯೂನಿಂದಾಗಿ ಬೆಳ್ಮಣ್ ಪರಿಸರ ಶನಿವಾರ ಸಂಪೂರ್ಣ ಸ್ತಬ್ದಗೊಂಡಿದ್ದು, ಬೆಳ್ಮಣ್, ಕೆದಿಂಜೆ, ಮುಂಡ್ಕೂರು ಭಾಗದ ಎಲ್ಲಾ ಅಂಗಡಿ ಮುಗ್ಗಟ್ಟುಗಳು ಸಂಪೂರ್ಣ ಬಂದ್ ಆಗಿದ್ದು ಜನ ಸಂಚಾರವಿಲ್ಲದೇ ಇಡೀ ಪರಿಸರ ಬಿಕೋ ಎನ್ನುತ್ತಿದೆ.
ಕೆಲವೊಂದು ಸರಕು ಸಾಗಾಟದ ವಾಹನಗಳು ಓಡಾಟವನ್ನು ನಡೆಸುತ್ತಿದ್ದು. ರಿಕ್ಷಾ, ಕಾರು ಟ್ಯಾಕ್ಸಿ ಸಹಿತ ಬಸ್ಸು ಸಂಚಾರ ನಡೆಸುತ್ತಿಲ್ಲ.
ಕೊರೊನಾ ನಿಯಂತ್ರಣಕ್ಕೆ ಸರ್ಕಾರ ಕೈಗೊಂಡ ನಿರ್ಧಾರಕ್ಕೆ ಕಾರ್ಕಳ ತಾಲೂಕಿನ ಬೆಳ್ಮಣ್ ಆಸುಪಾಸಿ ಪರಿಸರದಲ್ಲಿಯೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಬೆಳಿಗ್ಗೆ 10 ಗಂಟೆಯ ವರೆಗೆ ಅಗತ್ಯ ವಸ್ತುಗಳ ಪೂರೈಕೆಯ ಅಂಗಡಿಗಳು ತೆರೆದಿದ್ದು ಬಳಿಕ ಎಲ್ಲಾ ಅಂಗಡಿ ಮುಗ್ಗಟ್ಟುಗಳು ಸ್ವಯಂ ಪ್ರೇರಿತವಾಗಿ ಬಂದ್ ಮಾಡಲಾಗಿತ್ತು.
ಇನ್ನು ಶಿರ್ವ ಪೇಟೆ ಪರಿಸರ ಕೂಡ ಸಂಪೂರ್ಣ ಬಿಕೋ ಎನ್ನುವಂತಿದ್ದು, ಅಂಗಡಿ ಮುಗ್ಗಟ್ಟುಗಳು ಸಂಪೂರ್ಣ ಬಂದ್ ಮಾಡಲಾಗಿದ್ದು. ಬೆಳಿಗ್ಗೆ 10 ಗಂಟೆಯ ವರೆಗೆ ಕೆಲವೊಂದು ಅಗತ್ಯ ಪೂರೈಕೆಯ ಅಂಗಡಿಗಳು ತೆರೆದಿದ್ದು ಬಳಿಕ ಎಲ್ಲಾ ಅಂಗಡಿ ಮುಗ್ಗಟ್ಟುಗಳು ಮುಚ್ಚಿದ್ದು ಕರ್ಫ್ಯೂಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ರಿಕ್ಷಾ ನಿಲ್ದಾಣದಲ್ಲಿ ಬೆಳಿಗ್ಗೆ ರಿಕ್ಷಗಳು ಸಾಲುಗಟ್ಟಿ ನಿಂತಿದ್ದರೂ ಬಾಡಿಗೆ ಇಲ್ಲದೆ ಚಾಲಕರು ಮರಳಿ ಮನೆಗೆ ತೆರಳುವಂತಾಗಿದೆ. ಬೆಳ್ಮಣ್ ಶಿರ್ವ ಉಡುಪಿ ರಸ್ತೆಯಲ್ಲಿ ವಾಹನ ಸಂಚಾರವಿಲ್ಲದೆ ಸಂಪೂರ್ಣ ಸ್ತಬ್ದಗೊಂಡಿತ್ತು.