ಮಂಗಳೂರು, ಏ 24 (DaijiworldNews/MS): ಹೆಚ್ಚುತ್ತಿರುವಕೊರೊನಾ ಪ್ರಕರಣಗಳ ಹಿನ್ನೆಲೆಯಲ್ಲಿ,ರಾಜ್ಯ ಸರ್ಕಾರ ಶುಕ್ರವಾರದಿಂದ ಕಟ್ಟುನಿಟ್ಟಾದ ವಾರಾಂತ್ಯದ ಕರ್ಫ್ಯೂ ವಿಧಿಸಿದ ನಂತರ, ನಗರದ ಸಾಮಾನ್ಯ ಜೀವನ ಸ್ಥಗಿತಗೊಂಡಿದೆ. ಅಗತ್ಯ ವಸ್ತುಗಳ ಖರೀದಿ ಸಮಯ ಮುಗಿಯುತ್ತಿದ್ದಂತೆ ಜನರು ತಮ್ಮ ಮನೆಗಳಿಂದ ಅನಗತ್ಯವಾಗಿ ಹೊರಗೆ ಬರದಂತೆ ತಡೆಯಲು ಪೊಲೀಸ್ ಇಲಾಖೆ ಜಿಲ್ಲೆಯಲ್ಲಿ ಪೊಲೀಸ್ ಪಡೆಯನ್ನು ನಿಯೋಜಿಸಿದೆ.
ಇನ್ನು ಮಂಗಳೂರು ಕಮಿಷನರೇಟ್ ವ್ಯಾಪ್ತಿಯ ಆಯಾ ಕಟ್ಟಿನ ಸ್ಥಳಗಳಲ್ಲಿ ಬ್ಯಾರಿಕೇಡ್ ಹಾಕಿ ಸಂಚಾರ ತಡೆ ಹಿಡಿಯಲಾಗಿದ್ದು, ಅನಗತ್ಯವಾಗಿ ಓಡಾಡುವವ ಮೇಲೆ ಪೊಲೀಸ್ ಕ್ರಮ ಕೈಗೊಳ್ಳಲಾಗುತ್ತಿದೆ. ಇದಲ್ಲದೆ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್, ಡಿಸಿಪಿಗಳಾದ ಹರಿರಾಂ ಶಂಕರ್, ವಿನಯ್ ಗಾಂವ್ಕರ್ ನೇತೃತ್ವದಲ್ಲಿ ಪೊಲೀಸರು ವಾಹನ ಸಂಚಾರ ತಪಾಸಣೆ ನಡೆಸುತ್ತಿದ್ದಾರೆ.
ಇದೇ ವೇಳೆ ಮಾದ್ಯಮಗಳೊಂದಿಗೆ ಮಾತನಾಡಿ ಆಯುಕ್ತರು, ನಗರದಲ್ಲಿ," 54 ಚೆಕ್ ಪೋಸ್ಟ್ ಗಳು ನಿರ್ಮಿಸಲಾಗಿದ್ದು ಪ್ರತಿ ಚೆಕ್ ಪೋಸ್ಟ್ ನಲ್ಲೂ 6 ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. 35 ಮೊಬೈಲ್ ಸ್ಕಾಡ್ ಗಳು, ಸಾವಿರಕ್ಕೂ ಅಧಿಕ ಸಿಬ್ಬಂದಿ , ಕೊವೀಡ್ ಮಾರ್ಷಲ್ ನೇಮಕ ಮಾಡಲಾಗಿದೆ.
ಕಳೆದ ಒಂದು ವಾರದಿಂದ 1400 ಮಾಸ್ಕ್ ಉಲ್ಲಂಘನೆ ಪ್ರಕರಣ ಹಾಗೂ ಶುಕ್ರವಾರ ಒಂದೇ ದಿನ ಸರಕಾರದ ಆದೇಶ ಉಲ್ಲಂಘಿಸಿದ ಮಳಿಗೆಗಳ ವಿರುದ್ಧ 30 ಪ್ರಕರಣ ದಾಖಲಾಗಿದೆ. ನಗರದಲ್ಲಿ ಬೆಳಗ್ಗೆ ದೂರದೂರಿನಿಂದ ಬಂದವರಿಗಾಗಿ ಬೆಳಗ್ಗೆ ಬೆರಳಣಿಕೆಯ ಕೆ.ಎಸ್ .ಆರ್ ಟಿ ಸಂಚಾರ ನಡೆಸಿದೆ ಎಂದು ಮಾಹಿತಿ ನೀಡಿದರು