ಉಡುಪಿ, ಏ 24 (DaijiworldNews/MS): ಸಾರ್ವಜನಿಕರಿಗೆ ಮಾಸ್ಕ್ ಧರಿಸುವಂತೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಆಜ್ಞಾಪಿಸುವ ಉಡುಪಿ ಜಿಲ್ಲಾಧಿಕಾರಿಗಳೇ ತಮ್ಮ ಕೋವಿಡ್ ನಿಯಮಗಳನ್ನು ಗಾಳಿಗೆ ತೂರಿದರೇ ಎನ್ನುವ ಚರ್ಚೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಎಡೆಮಾಡಿಕೊಟ್ಟಿದೆ.
ಇಷ್ಟಕ್ಕೆಲ್ಲಾ ಕಾರಣವಾಗಿದ್ದು, ಜಿಲ್ಲಾಧಿಕಾರಿ ಜಿ. ಜಗದೀಶ್ ಅವರು ಶುಕ್ರವಾರ ರಾತ್ರಿ 8. 45 ರ ಸುಮಾರಿಗೆ ಎಡಿಷನಲ್ ಎಸ್ಪಿ ಅವರ ಮಗಳ ಮದುವೆಯ ಮೆಹಂದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ಮಾತ್ರವಲ್ಲದೆ ಮಾಸ್ಕ್ ಇಲ್ಲದೇ ಫೋಟೋ ಫೋಸ್ ಕೊಟ್ಟಿರುವ ಘಟನೆ. ಅವರು ಭಾಗವಹಿಸಿರುವ ಕಾರ್ಯಕ್ರಮಗಳ ಪೋಟೋ ವಿಡಿಯೋ ಇದೀಗ ವೈರಲ್ ಆಗಿದೆ.
ರಾಜ್ಯ ಸರ್ಕಾರ ಕೊರೊನಾ ಹಿನ್ನಲೆಯಲ್ಲಿ ಕಾರ್ಯಕ್ರಮಗಳಲ್ಲಿ ಇಂತಿಷ್ಟೇ ಜನರು ಭಾಗಿಯಾಗಬೇಕೆಂಬ ನಿಯಮ ಜಾರಿಗೊಳಿಸಿದೆ. ಅದರೂ ಇಲ್ಲಿ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಲಾಗಿದೆ. ಮೊನ್ನೆಯಷ್ಟೇ ಬಸ್ಸಿನಿಂದ ವಿದ್ಯಾರ್ಥಿಗಳನ್ನು ಕೆಳಗಿಳಿಸಿ ಆಕ್ರೋಶಕ್ಕೆ ಗುರಿಯಾಗಿದ್ದ ಜಿಲ್ಲಾಧಿಕಾರಿ ವಿರುದ್ದ ನೆಟ್ಟಿಗರು ಕಿಡಿಗಾರಿದ್ದು "ಬಡವರಿಗೊಂದು ಕಾನೂನು, ಸಿರಿವಂತರಿಗೆ ಒಂದು ಕಾನೂನು" ಎಂಬ ಸಂದೇಹ ಬರುತ್ತದೆ ಎಂದು ಟೀಕಿಸಿದ್ದಾರೆ.
ಈ ಸಂಬಂಧ ಕೂಡಲೇ ಜಿಲ್ಲಾಧಿಕಾರಿಯವರ ಪ್ರತಿಕ್ರಿಯೆಗೆ ಪ್ರಯತ್ನಿಸಿದರೂ ಸಂಪರ್ಕ ಸಾಧ್ಯವಾಗುತ್ತಿಲ್ಲ.