ಉಡುಪಿ, ಏ. 23 (DaijiworldNews/SM): ಜಿಲ್ಲೆಯಲ್ಲಿ ಬೆಳಗ್ಗೆ 6 ಗಂಟೆಯಿಂದ 10ರವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶವಿದೆ. ಹೋಟೆಲ್ ಗಳಲ್ಲಿ ಪಾರ್ಸೆಲ್ ಗೆ ಮಾತ್ರ ಅವಕಾಶ ವಿರುತ್ತದೆ. ಜನಸಂಚಾರ ಇರದ ಈ ಸಂದರ್ಭದಲ್ಲಿ ಖಾಸಗಿ ಬಸ್ಸುಗಳು ಸಂಚಾರ ಇರುವುರಿಲ್ಲ ಎಂಬುದಾಗಿ ಜಿಲ್ಲಾಧಿಕಾರಿ ಜಿ. ಜಗದೀಶ್ ಸ್ಪಷ್ಟನೆ ನೀಡಿದ್ದಾರೆ.
ಅವರು ಇಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, 'ಪ್ರತಿದಿನ 3000ದಷ್ಟು ಸ್ವ್ಯಾಬ್ ಮಾದರಿ ಸಂಗ್ರಹವಾಗುತ್ತಿದ್ದು, ಕಳೆದ ಮೂರೂ ದಿನಗಳಿಂದ 10.50% ರಷ್ಟು ಪಾಸಿಟಿವ್ ಪ್ರಮಾಣ ಕಂಡು ಬರುತ್ತಿದೆ. ಶೇಕಡಾವಾರು ನೋಡುವುದಾದರೆ, ಕೋವಿಡ್ ಸೋಂಕು ಅತೀ ವೇಗವಾಗಿ ಹರಡುತ್ತಿದೆ.
ಉಡುಪಿಯಲ್ಲಿ ಸದ್ಯ ಆಕ್ಸಿಜನ್ ಕೊರತೆ ಇಲ್ಲ ಎಂದರು. ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ 20 ಕೆಎಲ್, ಅಜ್ಜರಕಾಡು ಜಿಲ್ಲಾ ಆಸ್ಪತ್ರೆಯಲ್ಲಿ 6 ಕೆ ಎಲ್ ಸಾಮರ್ಥ್ಯದ ಆಕ್ಸಿಜನ್ ಟ್ಯಾಂಕ್ ಲಭ್ಯವಿದೆ. ಜಂಬೊ ಸಿಲಿಂಡರ್ಸ್ ಕೂಡ ಲಭ್ಯವಿದೆ. 25 ಕೆ ಎಲ್ ಸಾಮರ್ಥ್ಯದ ರೀ ಫಿಲ್ಲಿಂಗ್ ಪ್ಲಾಂಟ್ ಬೆಳಪುವಿನಲ್ಲಿ ಸಿದ್ಧವಾಗ್ತಿದೆ. ಸೋಮವಾರದಿಂದ ಅದು ಕಾರ್ಯಾರಂಭ ಮಾಡುತ್ತದೆ ಎಂದರು.
ಉಡುಪಿಯಲ್ಲಿ ಸದ್ಯ ಐಸಿಯು ಕೊರತೆ ಇಲ್ಲ. ಆದರೆ ಇದೇ ಸಂಖ್ಯೆ ಮುಂದುವರಿದರೆ ಐಸಿಯು ಕೊರತೆ ಕಂಡು ಬರುವುದು ಗ್ಯಾರಂಟಿ. ಐಸಿಯು ದಾಖಲಾತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತದೆ. ಹಾಗಾಗಿ ಕೊನೆಯ ಕ್ಷಣದಲ್ಲಿ ಆಸ್ಪತ್ರೆಗೆ ಕರೆದುಕೊಂಡು ಬರಬೇಡಿ ಎಂದು ಡಿಸಿ ಸಾರ್ವಜನಿಕರಲ್ಲಿ ಮನವಿ ಮಾಡಿದರು. ಮೊದಲು 5% ಇದ್ದ ಲಕ್ಷಣ ಕಂಡು ಬರುತ್ತಿದ್ದು, 25% ಮಂದಿಯಲ್ಲಿ ಸೋಂಕಿನ ಲಕ್ಷಣ ಕಂಡುಬರುತ್ತವೆ. ಇದು ಆತಂಕಕಾರಿ ಬೆಳವಣಿಗೆಯಾಗಿದೆ. ಈಗ ರೋಗ ಗಂಭೀರತೆ ಹೆಚ್ಚಾಗಿದೆ. ಜನವರಿಯಿಂದ ಎಪ್ರಿಲ್ ವರೆಗೆ ಒಟ್ಟು 4 ಮರಣ ದಾಖಲೆಯಾಗಿದೆ. ಇತ್ತಿಚೆಗೆ ಹೆಚ್ಚೆಚ್ಚು ಮಂದಿ ಐಸಿಯು ದಾಖಲೆಯಾಗುತ್ತಿರುವುದು ಆತಂಕಕಾರಿ ವಿಷಯ ಎಂದರು.