ಕಾಸರಗೋಡು, ಏ. 23 (DaijiworldNews/SM): ಜಿಲ್ಲೆಯ 15 ಸ್ಥಳೀಯಾಡಳಿತ ಸಂಸ್ಥೆಗಳ ವ್ಯಾಪ್ತಿಯಲ್ಲಿ 7 ದಿನಗಳ ಕಾಲ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಜಿಲ್ಲೆಯಲ್ಲಿ ಕೊರೋನಾ ಪ್ರಕರಣಗಳು ಅಧಿಕಗೊಂಡಿರುವ ಹಿನ್ನೆಲೆಯಲ್ಲಿ ಹೆಚ್ಚುವರಿ ಕೋವಿಡ್ ರೋಗಿಗಳಿರುವ 15 ಸ್ಥಳೀಯಾಡಳಿತ ಸಂಸ್ಥೆಗಳ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಯಾಗಿದೆ. ಸಿ.ಆರ್.ಪಿ.ಸಿ. 144 ಪ್ರಕಾರ ಏ.23ರ ರಾತ್ರಿ 12 ಗಂಟೆಯಿಂದ 7 ದಿನಗಳ ಕಾಲ ನಿಷೇಧಾಜ್ಞೆ ಜಾರಿಗೊಳಿಸಿರುವುದಾಗಿ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಆದೇಶ ನೀಡಿದ್ದಾರೆ.
ಈಗಾಗಲೇ ರಾಜ್ಯ ಸರಕಾರ ಪ್ರಕಟಿಸಿರುವ ಎಲ್ಲಾ ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಈ ಆದೇಶದ ಜತೆಗೆ ಕಡ್ಡಾಯವಾಗಿ ಜಾರಿಗೊಳಿಸುವುದಾಗಿ ತಿಳಿಸಲಾಗಿದೆ. ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಜಿಲ್ಲಾ ದುರಂತ ನಿವಾರಣಾ ಪ್ರಾಧಿಕಾರದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಕಾಞಂಗಾಡ್, ನೀಲೇಶ್ವರ ನಗರಸಭೆ ವ್ಯಾಪ್ತಿಗಳಲ್ಲಿ, ಗ್ರಾಮ ಪಂಚಾಯತ್ ಗಳಾದ ಚೆಮ್ನಾಡು, ಪಳ್ಳಿಕ್ಕರೆ, ಉದುಮ, ಅಜಾನೂರು, ಚೆರುವತ್ತೂರು, ಕಳ್ಳಾರ್, ಕಯ್ಯೂರು-ಚೀಮೇನಿ, ಕಿನಾನೂರು-ಕರಿಂದಳಂ, ಕೋಡೋಂ-ಬೇಳೂರು, ಮಡಿಕೈ, ಪಡನ್ನ, ಪುಲ್ಲೂರು-ಪೆರಿಯ, ತ್ರಿಕರಿಪುರಗಳಲ್ಲಿ ಈ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಜನಗುಂಪು ಸೇರವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಈ ಪ್ರದೇಶಗಳಲ್ಲಿ ಪೊಲೀಸ್ ತಪಾಸಣೆ ಸಹಿತ ಬಿಗಿ ನಿಯಂತ್ರಣ ಏರ್ಪಡಿಸಲಾಗಿದೆ.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ಬಿ.ರಾಜೀವ್, ಹೆಚ್ಚುವರಿ ದಂಡನಾಧಿಕಾರಿ ಅತುಲ್ ಎಸ್.ನಾಥ್, ಜಿಲ್ಲಾ ವೈದ್ಯಾಧಿಕಾರಿ(ಆರೋಗ್ಯ) ಡಾ.ಎ.ವಿ.ರಾಮದಾಸ್ ಮೊದಲಾದವರು ಭಾಗವಹಿಸಿದ್ದರು.