ಮಂಗಳೂರು, ಏ. 23 (DaijiworldNews/SM): ಕೊರೋನಾ ನಿಯಂತ್ರಣ ಹಿನ್ನೆಲೆಯಲ್ಲಿ ರಾಜ್ಯ ಸರಕಾರದ ಮಾರ್ಗಸೂಚಿಯಂತೆ ಕೊರೋನಾ ವೀಕೆಂಡ್ ಕರ್ಫ್ಯೂ ಜಾರಿಗೆ ತರಲಾಗಿದೆ. ಇಂದು ರಾತ್ರಿ 9 ಗಂಟೆಯಿಂದ ವೀಕೆಂಡ್ ಕರ್ಫ್ಯೂ ಜಾರಿಯಾಗಿದ್ದು, ಸೋಮವಾರ ಬೆಳಿಗ್ಗೆ 6 ಗಂಟೆ ತನಕ ವೀಕೆಂಡ್ ಕರ್ಫ್ಯೂ ಜಾರಿಯಲ್ಲಿರಲಿದೆ.
ಇಂದು ರಾತ್ರಿ 9 ಗಂಟೆಯ ಬಳಿಕ ಎಲ್ಲಾ ಚಟುವಟಿಕೆಗಳನ್ನು ಜನ ಸಂಚಾರ ಸೇರಿದಂತೆ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ. ಕೇವಲ ಅಗತ್ಯ ಸೇವೆಗಳಿಗಷ್ಟೇ ವಿನಾಯಿತಿ ನೀಡಲಾಗಿದೆ. ಶನಿವಾರ ಹಾಗೂ ರವಿವಾರಗಳಂದು ಬೆಳಗ್ಗೆ ಆರು ಗಂಟೆಯಿಂದ ಹತ್ತು ಗಂಟೆಯ ತನಕ ಅಗತ್ಯ ವಸ್ತುಗಳ ಸೇವೆ ಲಭ್ಯವಿರಲಿದೆ. ಅಲ್ಲದೆ, ಇದೇ ಸಮಯದಲ್ಲಿ ಹೋಟೆಲ್ ಗಳು ತೆರೆದಿರಲಿದ್ದು, ಕೇವಲ ಪಾರ್ಸೆಲ್ ಗಳಿಗೆ ಅವಕಾಶ ನೀಡಲಾಗಿದೆ. ಇನ್ನು ಹೆದ್ದಾರಿ ಸಮೀಪದ ಹೋಟೆಲ್ ಗಳನ್ನು ವೀಕೆಂಡ್ ಕರ್ಫ್ಯೂ ಸಂದರ್ಭದಲ್ಲಿ ತೆರೆಯಲು ಅವಕಾಶ ನೀಡಲಾಗಿದೆ. ರಾಷ್ಟ್ರೀಯ ಹೆದ್ದಾರಿ ಮೂಲಕ ದೂರದ ಪ್ರಯಾಣ ನಡೆಸುವವರು ಹಾಗೂ ಅಗತ್ಯ ಸೇವೆಗಳನ್ನು ಪೂರೈಸುವವರಿಗೆ ನೆರವಾಗುವ ನಿಟ್ಟಿನಲ್ಲಿ ಹೆದ್ದಾರಿ ಬದಿಯ ಹೋಟೆಲ್ ಗಳಿಗೆ ಅವಕಾಶ ನೀಡಲಾಗಿದೆ.