ಮಂಗಳೂರು, ಎ.23 (DaijiworldNews/PY): "ಕೊರೊನಾದ ಎರಡನೇ ಅಲೆ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸರ್ಕಾರ ಅನುಮತಿ ಹಾಗೂ ನಿಷೇಧಿತ ಚಟುವಟುಕೆಗಳ ಬಗ್ಗೆ ಸ್ಪಷ್ಟ ನಿರ್ದೇಶನದೊಂದಿಗೆ ಮಾರ್ಗಸೂಚಿ ಹೊರಡಿಸಿದೆ. ಅದರೂ ಜಿಲ್ಲೆಯಲ್ಲಿ ಕೆಲವೆಡೆ ಶಾಲಾ - ಕಾಲೇಜುಗಳು ತರಗತಿ ನಡೆಸುತ್ತಿರುವ ಬಗ್ಗೆ ದೂರುಗಳನ್ನು ಸ್ವೀಕರಿಸಿದ್ದು ಯಾವುದೇ ಕಾರಣಕ್ಕೂ ನೇರ ತರಗತಿ ನಡೆಸಲು ಅವಕಾಶವಿಲ್ಲ" ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಸ್ಪಷ್ಟಪಡಿಸಿದ್ದಾರೆ.
ಎ.23ರ ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಅವರು, "ಜಿಲ್ಲೆಯಲ್ಲಿ 124 ನರ್ಸಿಂಗ್ ಹೋಂಗಳಿವೆ, . ಈ ಪೈಕಿ 74 ನರ್ಸಿಂಗ್ ಹೋಂಗಳು ಮಂಗಳೂರಿನಲ್ಲಿವೆ. ಜಿಲ್ಲೆಯಲ್ಲಿನ ವಿವಿಧ ಆಸ್ಪತ್ರೆಗಳಲ್ಲಿ 5000 ಬೆಡ್ಗಳು ಲಭ್ಯವಿದೆ. 3800 ಜನರಲ್ ಬೆಡ್ಗಳಿದ್ದು, 300 ಐಸಿಯು, ವೆನ್ಲಾಕ್ನಲ್ಲಿ 274 ಆಕ್ಸಿಜನ್ ಬೆಡ್ಗಳು, 70 ವೆಂಟಿಲೇಟರ್ಗಳು ಲಭ್ಯವಿದೆ. ಮೇಲ್ವಿಚಾರಣೆಗಾಗಿ ನೋಡಲ್ ಅಧಿಕಾರಿಯನ್ನು ನೇಮಿಸಲಾಗಿದೆ" ಎಂದು ತಿಳಿಸಿದ್ದಾರೆ.
"ಅಂತಿಮ ವರ್ಷದ ವೈದ್ಯಕೀಯ ಕಾಲೇಜುಗಳಿಗೆ ನೇರ ತರಗತಿ ನಡೆಸಲು ಅವಕಾಶವಿದೆ. ಏಕೆಂದರೆ, ನಮಗೆ ವೈದ್ಯಕೀಯ ವಿದ್ಯಾರ್ಥಿಗಳ ಅವಶ್ಯಕತೆ ಇದೆ. ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಅಡಿಯಲ್ಲಿ ವಿಶೇಷ ಅವಕಾಶವಿದ್ದು ಹಾಗೂ ವಿಟಿಯು ಎಂಜಿನಿಯರಿಂಗ್ ಪರೀಕ್ಷೆಗಳನ್ನು ಕೇವಲ ಎಸ್ಒಪಿಗಳೊಂದಿಗೆ ನಡೆಸಲಾಗುತ್ತದೆ. ನೇರ ತರಗತಿಗಳನ್ನು ನಡೆಸಲು ಕಾಲೇಜಿನ ಆಡಳಿತಕ್ಕೆ ನೋಟಿಸ್ ನೀಡಿದ್ದೇವೆ" ಎಂದಿದ್ದಾರೆ.
"ಆಫ್ಲೈನ್ ತರಗತಿಗಳನ್ನು ನಡೆಸದ ಹಾಗೂ ಆನ್ಲೈನ್ ತರಗತಿಗಳನ್ನು ನಡೆಸುವ ಕಾಲೇಜುಗಳು, ವಿದ್ಯಾರ್ಥಿಗಳಿಗೆ ಮನೆಗೆ ತೆರಳಲು ಸಿಅವಕಾಶ ನೀಡಬೇಕು. ಅಗತ್ಯ ಸೇವೆಗಳನ್ನು ಹೊರತುಪಡಿಸಿ ಉಳಿದಂತೆ ಎಲ್ಲವನ್ನೂ ಮೇ 4ರವರೆಗೆ ನಿಷೇಧಿಸಲಾಗಿದೆ" ಎಂದು ಹೇಳಿದ್ದಾರೆ.
"ಹೊಟೇಲ್ ಹಾಗೂ ಆಸ್ಪತ್ರೆ ಅಸೋಸಿಯೇಶನ್ನವರೊಂದಿಗೆ ಮಾತುಕತೆ ನಡೆಸಲಾಗುವುದು. ಅವರು ಪರಸ್ಪರ ಹೊಂದಾಣಿಕೆ ಮಾಡಿಕೊಂಡು ಬಿಕ್ಕಟ್ಟಿನ ವೇಳೆ ಬೆಡ್ ಹಾಗೂ ಆಕ್ಸಿಜನ್ ವ್ಯವಸ್ಥೆ ಮಾಡಲು ಕ್ರಮ ತೆಗೆದುಕೊಳ್ಳಲಾಗುವುದು" ಎಂದು ತಿಳಿಸಿದ್ದಾರೆ.
"ಕೊರೊನಾ ಮಾರ್ಗಸೂಚಿಯ ಮೇರೆಗೆ ಸೆಲೂನ್, ಪಾರ್ಲರ್ಗಳನ್ನು ತೆರೆಯಲು ಅವಕಾಶವಿದೆ. ಮಾಲ್, ಕ್ರೀಡಾಂಗಣಗಳು, ಸಾರ್ವಜನಿಕ ಸ್ಥಳಗಳು ಸಂಪೂರ್ಣವಾಗಿ ಬಂದ್ ಆಗಲಿವೆ. ಹೊಟೇಲ್, ವೈನ್ ಶಾಪ್ನಿಂದ ಪಾರ್ಸೆಲ್ಗೆ ಮಾತ್ರವೇ ಅವಕಾಶ. ಧಾರ್ಮಿಕ ಸ್ಥಳಗಳಿಗೆ ಸಾರ್ವಜನಿಕ ಪ್ರವೇಶವನ್ನು ಸಂಪೂರ್ಣ ನಿಷೇಧಿಸಲಾಗಿದೆ" ಎಂದಿದ್ದಾರೆ.
ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಮಾತನಾಡಿ, "ಕೊರೊನಾ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ನಾವು ಜನರಲ್ಲಿ ಮನವಿ ಮಾಡುತ್ತಿದ್ದೇವೆ. ಎರಡು ದಿನದಲ್ಲಿ ನಾವು ಒಟ್ಟು 56 ಮಳಿಗೆಗಳ ವಿರುದ್ದ ಪ್ರಕರಣ ದಾಖಲಿಸಿದ್ದೇವೆ. ಕೊರೊನಾ ಮಾರ್ಗಸೂಚಿಯನ್ನು ಉಲ್ಲಂಘಿಸಿ ವ್ಯಾಪಾರ ನಡೆಸುತ್ತಿದ್ದಾರೆ. ನಾವು ಆಭರಣ ಮಳಿಗೆಗೆ ದಾಳಿ ಮಾಡಿದ ಬಳಿಕವೂ ಕಾರ್ಯನಿರ್ವಹಿಸುತ್ತಿದ್ದಾರೆ. ಇದು ಅವರ ಬೇಜವಾಬ್ದಾರಿತನ ಅಲ್ಲದೇ ಮತ್ತೇನು" ಎಂದಿದ್ದಾರೆ.