ಮಂಗಳೂರು, ಏ 23 (DaijiworldNews/MS): ಕೇರಳ ಮೂಲದ ಉದ್ಯಮಿ ಹನೀಫ್ ಎಂಬವರಿಗೆ ಸುಲಿಗೆ ಮತ್ತು ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸಲಾಗಿದೆ ಎಂದು ಏ.22 ರ ಗುರುವಾರ ಆಯುಕ್ತ ಎನ್.ಶಶಿಕುಮಾರ್ ಅವರು ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದ್ದಾರೆ.
ಬಂಧಿತನನ್ನು 33 ವರ್ಷದ ಫಳ್ನೀರ್ನ ದಿವ್ಯದರ್ಶನ್ ಎಂದು ಗುರುತಿಸಲಾಗಿದೆ. ಆರೋಪಿಯೂ ದುಬೈನಲ್ಲಿ ಉದ್ಯೋಗಿಯಾಗಿದ್ದ ಕೇರಳ ಮೂಲದ ಮುಹಮ್ಮದ್ ಹನೀಫ್ ಎಂಬವರನ್ನು 2019-20ನೆ ಸಾಲಿನ ಅವಧಿಯಲ್ಲಿ ಜೀವ ಬೆದರಿಕೆ ಇದೆ ಎಂಬುದಾಗಿ ಹೇಳಿ ಅವರನ್ನು ತನ್ನ ಕದ್ರಿಯ ಫ್ಲ್ಯಾಟ್ನಲ್ಲಿ ದಿವ್ಯದರ್ಶನ ಗೃಹಬಂಧನದಲ್ಲಿರಿಸಿದ್ದ ಎಂದು ಹೇಳಿದರು.
ಅಲ್ಲದೆ ಹನೀಫ್ ಅವರಿಗೆ ದಿವ್ಯ ದರ್ಶನ್ ಮತ್ತು ಅವರ ಸಹಚರರು ಎರಡು ಬಾರಿ ಬೆದರಿಕೆ ಹಾಕಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದು , ಮೊದಲು ಅವರು 30 ಲಕ್ಷ ರೂ.ಗಳನ್ನು ಎರಡನೇ ಬಾರಿಗೆ 55 ಲಕ್ಷ ರೂ.ಸುಲಿಗೆ ಮಾಡಿದ್ದರು. ಮಾತ್ರವಲ್ಲದೆ ಹನೀಫ್ ಅವರ ಸಹೋದರನೊಂದಿಗಿನ ವಿವಾದವನ್ನು ಬಗೆಹರಿಸುವ ನೆಪದಲ್ಲಿ ಜಾಗ್ವಾರ್ ಕಾರನ್ನು ತೆಗೆದುಕೊಂಡು ಹೋಗಿದ್ದು ಬಳಿಕ ಅದನ್ನು ತನ್ನ ವಶದಲ್ಲಿಟ್ಟುಕೊಂಡಿದ್ದ.
ದುಬೈನಿಂದ ಕೆಲಸ ತೊರೆದು ಮುಹಮ್ಮದ್ ಹನೀಫ್ ಊರಿಗೆ ಬಂದು ವ್ಯವಹಾರ ಮಾಡಬೇಕೆಂದು ಮುಂದಾಗಿದ್ದು, ಅದಕ್ಕಾಗಿ ವಿಟ್ಲದಲ್ಲಿ ಬಾಕ್ಸೈಟ್ ಗಣಿಗಾರಿಕೆಗೆ ಪರವಾನಿಗೆ ಪಡೆಯಲು ಮುಂದಾದಾಗ , ದಿವ್ಯದರ್ಶನ್ ಜತೆ ಸಂಪರ್ಕವಾಗಿ ತನಗೆ ಪ್ರಭಾವಿಗಳ, ರೌಡಿಶೀಟರ್ಗಳ, ವಕೀಲರ ಪರಿಚಯ ಇದೆ ಎಂದು ಹೇಳಿಕೊಂಡು ಹನೀಫ್ರಿಂದ ಸಾಕಷ್ಟು ಸುಲಿಗೆ ಮಾಡಿದ್ದ.
ಕದ್ರಿ ಪೊಲೀಸ್ ಠಾಣೆಯಲ್ಲಿ ಹನೀಫ್ ದೂರು ನೀಡಿದ್ದು, ಇದರಲ್ಲಿ ದಿವ್ಯಾ ದರ್ಶನ್ ಬಂಧನಕ್ಕೊಳಗಾಗಿದ್ದಾನೆ, ಆತನ ಸಹಚರರನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.