ಉಡುಪಿ, ಎ.23 (DaijiworldNews/PY): ಸ್ವಚ್ಛತಾ ಕಾರ್ಮಿಕರೊಬ್ಬರ ಮೇಲೆ ಇಬ್ಬರು ಯುವತಿಯರು ಸೇರಿದಂತೆ ಮೂವರು ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ ಘಟನೆ ಉಡುಪಿಯ ಅಂಬಲಪಾಡಿಯಲ್ಲಿ ನಡೆದಿದೆ.
ಅಂಬಲಪಾಡಿಯ ಅಪಾರ್ಟ್ಮೆಂಟ್ ಬಳಿ ಈ ಘಟನೆ ನಡೆದಿದೆ.
ಸ್ವಚ್ಛತಾ ಕಾರ್ಯಕರ್ತ ಸುರೇಶ್ ಅವರು ನೀಡಿದ ದೂರಿನ ಪ್ರಕಾರ, "ಸುರೇಶ್ ಅವರು ಉಡುಪಿ ನಗರಸಭೆಯ ವ್ಯಾಪ್ತಿಯ ಸ್ವಚ್ಛತಾ ಕೆಲಸ ಮಾಡುತ್ತಿದ್ದು, ಎಪ್ರಿಲ್ 22ರಂದು ಅಂಬಲಪಾಡಿಯ ಅಪಾರ್ಟ್ಮೆಂಟ್ವೊಂದರ ಬಳಿ ಕಸ ವಿಲೇವಾರಿ ವಾಹನದ ಮೂಲಕ ತೆರಳುತ್ತಿದ್ದರು. ಈ ವೇಳೆ ಬೈಕ್ನಲ್ಲಿ ಬಂದ ಮೂವರು ( ಇಬ್ಬರು ಯುವತಿಯರು ಹಾಗೂ ಓರ್ವ ಯುವಕ) ಕಸ ವಿಲೇವಾರಿ ವಾಹನವನ್ನು ತಡೆದು ನಿಲ್ಲಿಸಿ ಸುರೇಶ್ ಅವರ ಮೇಲೆ ಹಲ್ಲೆ ನಡೆಸಿದ್ದು ಅಲ್ಲದೇ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ" ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಸುರೇಶ್ ಅವರ ದೂರಿನ ಆಧಾರದ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.