ಮಂಗಳೂರು, ಎ.23 (DaijiworldNews/PY): ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆ ದೇಶದ ವಿವಿಧ ಭಾಗಗಳಲ್ಲಿ ಆಕ್ಸಿಜನ್ ಬೇಡಿಕೆ ಹೆಚ್ಚಾಗುತ್ತಿದ್ದಂತೆ, ಕರಾವಳಿ ಜಿಲ್ಲೆಗಳಲ್ಲಿಯೂ ಬೇಡಿಕೆ ಏರಿಕೆಯಾಗುತ್ತಿದೆ. ಆದರೆ, ದ.ಕ ಜಾಗೂ ಉಡುಪಿ ಜಿಲ್ಲೆಗಳಲ್ಲಿ ಸದ್ಯ ಆಕ್ಸಿಜನ್ ಕೊರತೆ ಇಲ್ಲ.
ಸಾಂದರ್ಭಿಕ ಚಿತ್ರ
ಜಿಲ್ಲೆಯ ಎಂಟು ವೈದ್ಯಕೀಯ ಕಾಲೇಜುಗಳು ಹಾಗೂ ವೆನ್ಲಾಕ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಸಂಗ್ರಹ ಸ್ಥಾವರವಿದ್ದು, 15 ದಿನಗಳಿಗೆ ಆಗತ್ಯವಿರುವಷ್ಟು ಆಕ್ಸಿಜನ್ ಸಂಗ್ರಹಿಸಬಹುದು.
ದ.ಕದಲ್ಲಿ ಸದ್ಯ ಸುಮಾರು 6,000 ಕ್ಯುಬಿಕ್ ಲೀಟರ್, ಉಡುಪಿಯಲ್ಲಿ 4,000 ಕ್ಯುಬಿಕ್ ಲೀಟರ್ ಆಕ್ಸಿಜನ್ ಬೇಡಿಕೆ ಇದೆ. ಕೇರಳದಿಂದ ಲಿಕ್ವಿಡ್ ಆಕ್ಸಿಜನ್ ಅನ್ನು ತಂದು ರೀಫಿಲ್ಲಿಂಗ್ ಮಾಡುವ ಒಂದು ಘಟಕ ಹಾಗೂ ನ್ಯಾಚುರಲ್ ಏರ್ ಅನ್ನು ಕಂಪ್ರೆಸ್ ಮಾಡಿ ಪ್ರತ್ಯೇಕಿಸಿ ಆಕ್ಸಿಜನ್ ತಯಾರಿಸುವ ಹಾಗೂ ರೀಫಿಲ್ಲಿಂಗ್ ಮಾಡುವ ಎರಡು ಘಟಕಗಳ ದ.ಕ ಜಿಲ್ಲೆಯಲ್ಲಿವೆ. ದ.ಕ ಹಾಗೂ ಉಡುಪಿ ಜಿಲ್ಲೆಯ ಬಹುತೇಕ ಆಸ್ಪತ್ರೆಗಳಿಗೆ ಇಲ್ಲಿಂದಲೇ ಆಕ್ಸಿಜನ್ ಸರಬರಾಜು ಆಗುತ್ತಿದೆ.
ಮಂಗಳೂರು ಸೇರಿ ರಾಜ್ಯದ ವಿವಿಧ ಕೈಗಾರಿಕೆಗಳಿಗೆ ವೆಲ್ಡಿಂಗ್, ಕಟ್ಟಿಂಗ್, ಫ್ಯಾಬ್ರಿಕೇಶನ್ ಸೇರಿದಂತೆ ವಿವಿಧ ಕಾರಣಗಳಿಗೆ ಸಿಲಿಂಡರ್ಗಳ ಅಗತ್ಯವಿರುತ್ತದೆ. ಕಳೆದ ವರ್ಷ ಕೊರೊನಾ ಸಂದರ್ಭ ವೈದ್ಯಕೀಯ ಆಕ್ಸಿಜನ್ ಕೊರತೆಯಾದ ವೇಳೆ ಕೈಗಾರಿಕಾ ಆಕ್ಸಿಜನ್ ಸಿಲಿಂಡರ್ಗಳನ್ನೇ ಆಸ್ಪತ್ರೆಗಳಲ್ಲಿ ಬಳಸುವಂತೆ ಸರ್ಕಾರ ಸೂಚನೆ ನೀಡಿತ್ತು. ಪ್ರಸ್ತುತ ಕೈಗಾರಿಕೆಗಳಿಗೆ ಆಕ್ಸಿಜನ್ ಸಿಲಿಂಡರ್ ನೀಡಲಾಗುತ್ತಿದೆ. ಯಾವುದೇ ಸಂದರ್ಭದಲ್ಲಿ ವೈದ್ಯಕೀಯ ಬಳಕೆಗೆ ಅಗತ್ಯವಾದಲ್ಲಿ ಕೈಗಾರಿಕೆಗೆ ನೀಡುವ ಆಕ್ಸಿಜನ್ ಕಡಿತ ಮಾಡುವ ವಿಚಾರದ ಬಗ್ಗೆ ಜಿಲ್ಲಾಡಳಿತ ಚಿಂತನೆ ನಡೆಸಿದೆ.
"ಜಿಲ್ಲೆಯಲ್ಲಿ ಅಕ್ಸಿಜನ್ ಕೊರತೆ ಇಲ್ಲ. ಅಗತ್ಯವಿದ್ದಷ್ಟನ್ನು ಮಂಗಳೂರಿನಲ್ಲಿಯೇ ಉತ್ಪಾದಿಸಲಾಗುತ್ತಿದೆ. ಮುಂದೆಯೂ ಕೂಡಾ ಸಮಸ್ಯೆಯಾಗದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲಾ ಔಷಧಿ ನಿಯಂತ್ರಕರ ಸಮಿತಿಯನ್ನು ರಚನೆ ಮಾಡಲಾಗಿದೆ. ಈ ಸಮಿತಿಯಲ್ಲಿ, ರಾಜ್ಯದ ಎಲ್ಲಾ ಆಕ್ಸಿಜನ್ ಪೂರೈಕೆ ಮಾಡುವವರು ಹಾಗೂ ಅಧಿಕಾರಿಗಳಿದ್ದಾರೆ" ಎಂದು ದ.ಕ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ತಿಳಿಸಿದ್ದಾರೆ.