ಮಂಗಳೂರು, ಏ 22 (DaijiworldNews/MS): ಉಲ್ಬಣಗೊಳ್ಳುತ್ತಿರುವ ಕೊರೊನಾ 2ನೇ ಅಲೆಯ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಇಂದು ಪರಿಷ್ಕೃತ ಮಾರ್ಗಸೂಚಿ ಬಿಡುಗಡೆ ಮಾಡುತ್ತಿರುವಂತೆ, ಫೀಲ್ಡಿಗಿಳಿದ ಮಂಗಳೂರು ಮಹಾ ನಗರ ಪಾಲಿಕೆ ಅಧಿಕಾರಿಗಳು ಅಗತ್ಯ ಸೇವೆ ಬಿಟ್ಟು ಉಳಿದ ಎಲ್ಲ ಅಂಗಡಿಗಳನ್ನು ಬಂದ್ ಮಾಡುವಂತೆ ಸೂಚಿಸುತ್ತಿದ್ದಾರೆ. ಆದರೆ ಸರ್ಕಾರದ ಮಾರ್ಗಸೂಚಿ ಅರಿಯದ ವ್ಯಾಪಾರಿಗಳು ಏಕಾಏಕಿ ಅಂಗಡಿ ಮುಚ್ಚಲು ಸೂಚಿಸುತ್ತಿರುವಂತೆ ಕಂಗಾಲಾಗಿದ್ದು, ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಕಂದಾಯ ಇಲಾಖೆ ಡೆಪ್ಯುಟಿ ಕಮೀಷನರ್ ಬಿನೋಯ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯುತ್ತಿದ್ದು, ಸೆಂಟ್ರಲ್ ಮಾರುಕಟ್ಟೆ ಸುತ್ತಮುತ್ತದ ಅಂಗಡಿಗಳಿಗೆ ತೆರಳಿದ ಅಧಿಕಾರಿಗಳು ಸರ್ಕಾರದ ಪರಿಷ್ಕೃತ ಮಾರ್ಗಸೂಚಿ ಬಗ್ಗೆ ಮನವರಿಕೆ ಮಾಡಿ ಅಂಗಡಿ ಮುಚ್ಚಿಸಲು ಸೂಚಿಸಿದರು.
ಇದೇ ವೇಳೆ ಪುಟ್ ಪಾತ್ ನಲ್ಲಿ ವ್ಯಾಪಾರದಲ್ಲಿ ತೊಡಗಿದ್ದವರಿಗೆ ಹಾಗೂ ಅಂಗಡಿವ್ಯಾಪ್ತಿಯನ್ನು ಬಿಟ್ಟು ರಸ್ತೆಯನ್ನು ಅತಿಕ್ರಮಿಸಿಕೊಂಡ ವ್ಯಾಪಾರ ಮಾಡುತ್ತಿರುವ ವ್ಯಾಪಾರಿಗಳಿಗೆ ಲೈಸನ್ಸ್ ರದ್ದುಗೊಳಿಸುವ ಎಚ್ಚರಿಕೆ ನೀಡಿದರು.
ಸರ್ಕಾರ ಮಾ.22ರಂದು ಹೊರಡಿಸಿದ ಹೊಸ ಮಾರ್ಗಸೂಚಿ ಪ್ರಕಾರ ದಿನಸಿ, ಹಣ್ಣು, ತರಕಾರಿ ಡೈರಿ, ಮುಂತಾದ ಅಗತ್ಯ ಸಾಮಾಗ್ರಿಗಳ ಅಂಗಡಿ ಹೊರತುಪಡಿಸಿ ಮೊಬೈಲ್ ಶಾಪ್, ಟಿವಿ, ಎಲೆಕ್ಟ್ರಾನಿಕ್ ಶೋ ರೂಮ್, ಬ್ಯಾಂಗಲ್ಸ್ ಸ್ಟೋರ್, ಚಿನ್ನದ ಅಂಗಡಿ ಬುಕ್ ಶಾಪ್, ಚಪ್ಪಲಿ ಅಂಗಡಿಗಳು, ಫ್ಯಾನ್ಸಿ ಸ್ಟೋರ್, ಬಟ್ಟೆ ಅಂಗಡಿಗಳು ಇತ್ಯಾದಿ ಬಂದ್ ಮಾಡುವಂತೆ ಸೂಚಿಸಿದೆ.