ಮಂಗಳೂರು, ಏ. 22(DaijiworldNews/HR): ಕೊರೊನಾ ಸೋಂಕು ಹರಡುವಿಕೆಯನ್ನು ತಡೆಯುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಏಪ್ರಿಲ್ 21 ರಿಂದ ಮೇ 4 ರವರೆಗೆ ರಾತ್ರಿ 9 ರಿಂದ ಬೆಳಿಗ್ಗೆ 6 ಗಂಟೆಯವರೆಗೆ ಕರ್ಫ್ಯೂ ಜಾರಿ ಮಾಡಿದ್ದು ಈ ಹಿನ್ನೆಲೆ ಕ್ಯಾಥೋಲಿಕ್ಸ್ನ ಪೂಜಾ ಸ್ಥಳಗಳಲ್ಲಿ ಅನುಸರಿಸಬೇಕಾದ ಮಾರ್ಗಸೂಚಿಯನ್ನು ಮಂಗಳೂರು ಧರ್ಮ ಪ್ರಾಂತ್ಯದ ಬಿಷಪ್ ಡಾ. ಪೀಟರ್ ಪಾಲ್ ಸಲ್ಡಾನ್ಹಾ ಅವರು ತಿಳಿಸಿದ್ದಾರೆ.
ಮಂಗಳೂರು ಧರ್ಮಪ್ರಾಂತ್ಯದ ವ್ಯಾಪ್ತಿಯಲ್ಲಿ ಬರುವ ಚರ್ಚಗಳ ಪಾದ್ರಿಗಳಿಗೆ ಬರೆದ ಪತ್ರದಲ್ಲಿ "ನಮ್ಮ ಪ್ರಾರ್ಥನಾ ಸ್ಥಳಗಳಿಗೂ ರಾಜ್ಯ ಸರ್ಕಾರದ ಮಾರ್ಗಸೂಚಿಗಳು ಅನ್ವಯವಾಗುವುದರಿಂದ ಅದನ್ನು ದಯವಿಟ್ಟು ಅನುಸರಿಸಿ" ಎಂದು ತಿಳಿಸಿದ್ದಾರೆ.
ಏಪ್ರಿಲ್ 21 ರಿಂದ ಮೇ 4 ರವರೆಗೆ ಮದುವೆ ಮತ್ತು ಅಂತ್ಯಕ್ರಿಯೆಯ ಸೇವೆಗಳನ್ನು ಹೊರತುಪಡಿಸಿ ಭಕ್ತರಿಗೆ ಎಲ್ಲಾ ಸಾರ್ವಜನಿಕ ಧಾರ್ಮಿಕ ಪೂಜಾ ಸ್ಥಳಗಳನ್ನು ಮುಚ್ಚಲಾಗಿದ್ದು, ಸಂಬಂಧಪಟ್ಟ ಸ್ಥಳೀಯ ಅಧಿಕಾರಿಗಳಿಂದ ಅನುಮತಿ ಪಡೆದ ನಂತರ ಕೊರೊನಾ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಚರ್ಚ್ ಒಳಗೆ ವಿವಾಹ ಮತ್ತು ಅಂತ್ಯಕ್ರಿಯೆಯ ಸೇವೆಗಳನ್ನು ನಡೆಸಬಹುದು.
ಮದುವೆಗಳಿಗಾಗಿ, ಗರಿಷ್ಠ 50 ವ್ಯಕ್ತಿಗಳು ಮತ್ತು ಅಂತ್ಯಕ್ರಿಯೆಗಳಿಗೆ 20 ಜನರಿಗೆ ಭಾಗವಹಿಸಲು ಅನುಮತಿ ಇದ್ದು, ಮದುವೆಗಳಿಗಾಗಿ ಭಾಗವಹಿಸುವವರ ಹೆಸರನ್ನು ಸಿದ್ಧಪಡಿಸಿ ಸ್ಥಳೀಯ ನಾಗರಿಗಳಿಂದ ವೈಯಕ್ತಿಕ ಪಾಸ್ಗಳನ್ನು ಪಡೆದುಕೊಳ್ಳಬೇಕು.
ಇನ್ನು ಮದುವೆಯಲ್ಲಿ ಭಾಗವಹಿಸುವವರೆಲ್ಲರೂ ಆಧಾರ್ ಕಾರ್ಡ್, ಆಮಂತ್ರಣ ಪತ್ರ, ಸ್ಥಳೀಯ ನಾಗರಿಕ ಪ್ರಾಧಿಕಾರ ನೀಡಿದ ವೈಯಕ್ತಿಕ ಪಾಸ್ ಅನ್ನು ಒಳಗೊಂಡಿರಬೇಕು.
"ನಾನು ಸರ್ಕಾರದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ, ಕೊರೊನಾ ಹರಡುವುದನ್ನು ನಿಯಂತ್ರಿಸುವಲ್ಲಿ ಸರ್ಕಾರದೊಂದಿಗೆ ಕೈಜೋಡಿಸೋಣ" ಎಂದು ಬಿಷಪ್ ಪತ್ರದಲ್ಲಿ ತಿಳಿಸಿದ್ದಾರೆ.