ಮಂಗಳೂರು / ಉಡುಪಿ, ಏ.22 (DaijiworldNews/MB) : ಕೊರೊನಾವೈರಸ್ ಸೋಂಕಿನಿಂದ ಹೋಟೆಲ್ ಉದ್ಯಮಕ್ಕೆ ಭಾರೀ ಹೊಡೆತ ಬಿದ್ದಿದೆ. ಲಾಕ್ಡೌನ್ ಸಂದರ್ಭದಲ್ಲಿ ತೀರಾ ಸಂಕಷ್ಟಕ್ಕೆ ಒಳಗಾಗಿದ್ದು ಹೊಟೇಲ್ ಉದ್ಯಮ ಕೊಂಚ ಚೇತರಿಸಿಕೊಳ್ಳುತ್ತಿರುವ ನಡುವೆ ಈಗ ಕೊರೊನಾ ಎರಡನೇ ಅಲೆಯು ಉದ್ಯಮಕ್ಕೆ ಆರ್ಥಿಕ ಏಟು ನೀಡಿದೆ.
ಸರ್ಕಾರದ ಇತ್ತೀಚಿನ ಮಾರ್ಗಸೂಚಿಗಳ ಪ್ರಕಾರ, ಜನರು ಹೋಟೆಲ್ಗಳು ಮತ್ತು ರೆಸ್ಟೋರೆಂಟ್ಗಳ ಒಳಗೆ ಆಹಾರವನ್ನು ಸೇವಿಸುವಂತಿಲ್ಲ. ಪಾರ್ಸೆಲ್ ಮಾತ್ರ ತೆಗೆದುಕೊಳ್ಳಬಹುದಾಗಿದೆ. ಈ ನಿಯಮವು ಸ್ಟೋರೆಂಟ್ಗಳಲ್ಲಿ ಶೇ.60 ರಷ್ಟು ವ್ಯಾಪಾರ ಇಳಿಕೆಗೆ ಕಾರಣವಾಗಿದೆ.
ಕೆಲವು ಹೋಟೆಲ್ಗಳು, ಹಿಂದಿನ ಲಾಕ್ಡೌನ್ ಅವಧಿಯಲ್ಲಿ ಮುಚ್ಚಿದ್ದು ಆರ್ಥಿಕ ತೊಂದರೆಯಿಂದಾಗಿಇಂದಿಗೂ ಮತ್ತೆ ಆರಂಭವಾಗಿಲ್ಲ. ಇದರಿಂದಾಗಿ ಹೋಟೆಲ್ಗಳು ಮತ್ತು ರೆಸ್ಟೋರೆಂಟ್ಗಳಲ್ಲಿ ಕೆಲಸ ಮಾಡುವವರು ಉದ್ಯೋಗ ಕಳೆದುಕೊಂಡಿದ್ದಾರೆ. ಒಂದು ಕಾಲದಲ್ಲಿ ರೆಸ್ಟೋರೆಂಟ್ ವ್ಯವಹಾರಕ್ಕೆ ಹೆಸರುವಾಸಿಯಾಗಿದ್ದ ಕರ್ನಾಟಕದ ಕರಾವಳಿಯು ಈಗ ಅತ್ಯಂತ ಕೆಟ್ಟ ಪರಿಸ್ಥಿತಿಯಲ್ಲಿದೆ. ಇನ್ನು ಹಲವಾರು ಹೊಟೇಲ್, ರೆಸ್ಟೂರೆಂಟ್ ಉದ್ಯಮಿಗಳು ಆರ್ಥಿಕ ಸಂಕಷ್ಟದಿಂದಾಗಿ ನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಆಹಾರವನ್ನು ಪಾರ್ಸೆಲ್ ಕೊಂಡೊಯ್ಯುವ ವಿಚಾರದಲ್ಲಿ ಹಲವು ಮಂದಿ ಸಂತುಷ್ಟರಾಗಿಲ್ಲ. ವಾರಾಂತ್ಯದಲ್ಲಿ ಮಾತ್ರ ಹೆಚ್ಚಿನ ಗ್ರಾಹಕರನ್ನು ಹೊಂದಿರುವ ಹೊಟೇಲ್ಗಳು ಈಗ ವೀಕೆಂಡ್ ಕರ್ಫ್ಯೂನಿಂದಾಗಿ ಆಘಾತಕ್ಕೆ ಒಳಗಾಗಿದ್ದಾರೆ.
ಹೋಟೆಲ್ ಮಾಲೀಕರ ಸಂಘದ ಕಾರ್ಯದರ್ಶಿ ನಾಗೇಶ್ ಭಟ್ ಮಾತನಾಡಿ, ''ಕರ್ಫ್ಯೂ ಜೊತೆಗೆ ಹೊಟೇಲ್ನಲ್ಲಿ ಆಹಾರ ಸೇವಿಸುವುದಕ್ಕೆ ನಿಷೇಧ ಹೇರಿರುವುದು ಉದ್ಯಮಕ್ಕೆ ಆಘಾತವನ್ನುಂಟು ಮಾಡಿದೆ'' ಎಂದು ಹೇಳಿದ್ದಾರೆ.
ಕೊರೊನಾ ಸೋಂಕಿನ ಆತಂಕದಿಂದ ಹಲವಾರು ಮಂದಿ ವರ್ಕ್ಫ್ರಮ್ ಹೋಮ್ ಮಾಡುತ್ತಿದ್ದು ಇದರಿಂದಾಗಿ ಗ್ರಾಹಕರ ಸಂಖ್ಯೆ ಕಡಿಮೆಯಾಗಿದ್ದು ಹೊಟೇಲ್ ಉದ್ಯಮಿಗಳಿಗೆ ಆರ್ಥಿಕ ಏಟು ಬಿದ್ದಿದೆ. ಪರಿಸ್ಥಿತಿ ಸುಧಾರಿಸದಿದ್ದರೆ, ಸಾವಿರಾರು ಹೋಟೆಲ್ಗಳನ್ನು ಮುಚ್ಚಿ ಸಾವಿರಾರು ಉದ್ಯೋಗಿಗಳು ಬೀದಿಗೆ ಬೀಳುವ ಪರಿಸ್ಥಿತಿ ಎದುರಾಗಲಿದೆ. ಹೋಟೆಲಿಗರು ತೀವ್ರ ಸಾಲದ ಹೊರೆಯಲ್ಲಿದ್ದು, ನೌಕರರ ವೇತನ, ಬಿಲ್ಗಳು, ಬಾಡಿಗೆ, ಸಾಲದ ಕಂತುಗಳನ್ನು ಹೇಗೆ ಭರ್ತಿ ಮಾಡುವುದು ಎಂದು ಚಿಂತಿತರಾಗಿದ್ದಾರೆ.
ಈ ಬಗ್ಗೆ ಮಾತನಾಡಿದ ಉಡುಪಿ ಜಿಲ್ಲಾ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ, ''ಎರಡನೇ ಅಲೆಯು ಹೋಟೆಲ್ ವ್ಯವಹಾರಕ್ಕೆ ಭಾರೀ ಹೊಡೆತ ನೀಡಿದೆ. ಹೆಚ್ಚಿನ ಹೋಟೆಲ್ ಮಾಲೀಕರು ಬಾಡಿಗೆ, ವಿದ್ಯುತ್ ಬಿಲ್, ಕಾರ್ಮಿಕರ ವೇತನ ಇತ್ಯಾದಿಗಳನ್ನು ತೂಗಿಸಲು ಸಾಧ್ಯವಾಗುತ್ತಿಲ್ಲ'' ಎಂದು ಹೇಳಿದ್ದಾರೆ.